ಬೆಂಗಳೂರು: ಕೊಲೆ ಕೇಸಲ್ಲಿ ದರ್ಶನ್ ಅರೆಸ್ಟ್ ಮಾಡಿರುವ ಪೊಲೀಸರು, ಡಿ ಬಾಸ್ಗೆ ಡ್ರಿಲ್ ಮಾಡುತ್ತಿದ್ದಾರೆ. ಈ ನಡುವೆ ಮೊದಲ ಬಾರಿಗೆ ಕಿಚ್ಚ ಸುದೀಪ್ ಪ್ರಕರಣದ ಕುರಿತು ಪ್ರತಿಕ್ರಿಯೆ ನೀಡಿದ್ದು, ಪೊಲೀಸರು ಕೊಲೆಗೆ ಸೂಕ್ತ ನ್ಯಾಯ ಒದಗಿಸುತ್ತಾರೆ ಎಂಬ ನಂಬಿಕೆಯಿದೆ ಎಂದಿದ್ದಾರೆ.
ಕಾನೂನು ರೀತಿಯಲ್ಲಿ ಕ್ರಮವಾಗಲಿ ಎಂದಿದ್ದಾರೆ. ಪ್ರಕರಣ ಹೊರಬರುವಲ್ಲಿ ಮಾಧ್ಯಮ ಮತ್ತು ಪೊಲೀಸರು ಬಹುಮುಖ್ಯ ಪಾತ್ರ ನಿರ್ವಹಿಸಿದ್ದಾರೆ. ಮಾಧ್ಯಮಗಳಲ್ಲಿ ನಮಗೆ ಏನು ತೋರಿಸುತ್ತಿದ್ದೀರೋ ನಾವು ಅದರಿಂದಲೇ ತಿಳಿದುಕೊಳ್ಳುತ್ತಿದ್ದೇವೆ. ಇದರಿಂದ ಅರ್ಥವಾಗುತ್ತಿರುವುದು ಏನಂದ್ರೆ, ಮಾಧ್ಯಮಗಳಾಗಲಿ, ಪೊಲೀಸರಾಗಲಿ ಸತ್ಯಾಂಶ ಹೊರಬರಲಿ ಎಂಬ ನಿಟ್ಟಿನಲ್ಲಿ ತುಂಬಾ ಕೆಲಸ ಮಾಡುತ್ತಿದ್ದೀರಿ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ನಾವು ಯಾರ ಪರವೂ ಮಾತನಾಡಬೇಕಿಲ್ಲ. ಬಾಳಿ ಬದುಕಬೇಕಿದ್ದ ಜೀವವೊಂದು ಇಂದು ಇಲ್ಲದಂತಾಗಿದೆ. ಹೀಗಾಗಿ, ಆ ವ್ಯಕ್ತಿಯ ಸಾವಿಗೆ ನ್ಯಾಯ ಸಿಗುವ ಕೆಲಸವಾಗಬೇಕು. ಆತನ ಕುಟುಂಬಕ್ಕೆ ನ್ಯಾಯ ಸಿಗಬೇಕು. ಆತನಿಗೆ ಮುಂದೆ ಹುಟ್ಟಬೇಕಿರುವ ಮಗುವಿಗೆ ಮತ್ತು ಆತನ ಮಡದಿಗೆ ಸೂಕ್ತ ನ್ಯಾಯ ಸಿಗಬೇಕು. ಎಲ್ಲಕ್ಕಿಂತ ಮುಖ್ಯವಾಗಿ ನ್ಯಾಯದ ಮೇಲೆ ಎಲ್ಲರಿಗೂ ನಂಬಿಕೆ ಹುಟ್ಟುವಂತೆ ಪೊಲೀಸ್ ವ್ಯವಸ್ಥೆ ಕೆಲಸ ಮಾಡುತ್ತಿದೆ ಅದನ್ನು ಮೆಚ್ಚಲೇಬೇಕು ಎಂದು ಹೇಳಿದರು.
ಚಿತ್ರರಂಗದ ದೃಷ್ಟಿಯಿಂದ ಒಳ್ಳೆಯದಲ್ಲ: ಕನ್ನಡ ಚಿತ್ರರಂಗದಲ್ಲಿ ಏನೋ ಸರಿ ಕಾಣುತ್ತಿಲ್ಲ. ಇಡೀ ಚಿತ್ರರಂಗಕ್ಕೆ ನ್ಯಾಯ ಸಿಗಬೇಕಾಗಿದೆ. ಹಿಂದೆಯಿAದ ತೆಗೆದುಕೊಂಡರೂ ಬಹಳ ಚಿಕ್ಕ ಚಿಕ್ಕ ವಿಚಾರಗಳಿಗೂ ಪ್ರತಿ ಟೈಮ್ನಲ್ಲೂ ಚಿತ್ರರಂಗದ ಮೇಲೆ ಏನಾದ್ರು ಒಂದು ಬರ್ತಾ ಇರುತ್ತೆ. ಚಿತ್ರರಂಗಕ್ಕೆ ಒಂದು ಕ್ಲೀನ್ ಚಿಟ್ ಬೇಕಾಗಿದೆ. ಜಸ್ಟಿಸ್ ಬೇರೆ, ಫ್ರೆಂಡ್ಶಿಪ್ ಬೇರೆ, ರಿಲೇಶನ್ ಶಿಪ್ ಬೇರೆ. ನಾನು ಯಾರ ಬಗ್ಗೆಯೂ ಮಾತನಾಡಿದವನಲ್ಲ. ನನಗೆ ಬೇಕಾಗಿಲ್ಲ ಎಂದರು.
ಆದ್ರೆ ಚಿತ್ರರಂಗ ಅಂತ ಬಂದಮೇಲೆ ನಾನು ಅದರಲ್ಲಿ ಸೇರ್ಪಡೆಯಾಗಿರುವುದರಿಂದ ಚಿತ್ರರಂಗದ ಮೇಲೆ ಒಂದು ಕಪ್ಪು ಚುಕ್ಕೆ ಬರುವುದು ನನಗೂ ಭೇಸರ ತರಿಸುತ್ತಿದೆ. ತುಂಬಾ ಜನ ಸೇರಿ ತ್ಯಾಗ ಮಾಡಿ ದುಡಿದಿದ್ದಕ್ಕೆ ಚಿತ್ರರಂಗ ಈ ಹಂತಕ್ಕೆ ಬಂದು ನಿಂತಿದೆ. ಇದಕ್ಕೆ ಎಷ್ಟೋ ವರ್ಷಗಳ ಇತಿಹಾಸವಿದೆ. ಯಾರೋ ಒಬ್ಬರಿಂದ ಹೆಸರು ಹಾಳಾಗುವುದು ತಪ್ಪು. ಆರೋಪಿ ಯಾರು ಎಂದು ನಾವೇ ತೀರ್ಮಾನ ಮಾಡಲು ಅದು ನಮ್ಮ ಕೆಲಸವಲ್ಲ. ಅದಕ್ಕೆಂದೆ ನ್ಯಾಯಾಲಯವಿದೆ. ನ್ಯಾಯಾಧೀಶರಿದ್ದಾರೆ. ನಾವು ಅವರಿಗೆ ತಲೆ ಬಾಗಬೇಕಾಗುತ್ತೆ ಎಂದರು.

