ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಮತ್ತು ಪವಿತ್ರಾ ಗೌಡ ಸೇರಿದಂತೆ ಪ್ರಮುಖ ಆರೋಪಿಗಳ ಆಪ್ತರನ್ನು ವಿಚಾರಣೆ ನಡೆಸಲು ಪೊಲೀಸರು ಸಿದ್ಧತೆ ನಡೆಸುತ್ತಿದ್ದಾರೆ.
ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಹೆಚ್ಚುವರಿ ಮಾಹಿತಿಗಳ ಸಂಗ್ರಹಕ್ಕೆ ಮುಂದಾಗಿರುವ ಪೊಲೀಸರು, ದರ್ಶನ್ಗೆ 40 ಲಕ್ಷ ರೂ. ನೀಡಿದ್ದ ಮೋಹನ್ ರಾಜು, ಆರೋಪಿ ಪ್ರದೋಶ್ ಪರಿಚಿತ ಕಾರ್ತಿಕ್ ಪುರೋಹಿತ್ ಹಾಗೂ ಪವಿತ್ರಾ ಗೌಡ ಆಪ್ತೆ ಸಮಂತಾ ಅವರ ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಳ್ಳಲು ಸಜ್ಜಾಗಿದ್ದಾರೆ.
ಮಾಜಿ ಬಿಬಿಎಂಪಿ ಸದಸ್ಯರು ಆಗಿರುವ ಮೋಹನ್ ರಾಜು, ದರ್ಶನ್ಗೆ ಹಣ ನೀಡಿದ್ದು ಯಾಕೆ? ಎಂಬ ವಿಚಾರದಲ್ಲಿ ತನಿಖೆ ನಡೆಸಲಾಗುತ್ತದೆ. ಅಲ್ಲದೇ ದರ್ಶನ್ ಮನೆ ಕೆಲಸಗಾರರು ಹಾಗೂ ಆರೋಪಿ ವಿನಯ್ ಒಡೆತನದ ಸ್ಟೋನಿ ಬ್ರೂಕ್ ರೆಸ್ಟೋರೆಂಟ್ ಕೆಲಸಗಾರರ ಹೇಳಿಕೆಯನ್ನು ಪಡೆಯಲು ಪೊಲೀಸರು ತಯಾರಿ ನಡೆಸುತ್ತಿದ್ದಾರೆ.
ಸ್ಟೋನಿ ಬ್ರೂಕ್ ರೆಸ್ಟೋರೆಂಟ್ ಕೆಲಸಗಾರ ಚೇತನ್ ಗೌಡ, ದರ್ಶನ್ ಮನೆ ಕೆಲಸಗಾರರಾದ ಬಬುಲ್ ಖಾನ್, ಸುಶೀಲಮ್ಮ ಮತ್ತು ಅಮೀರ್ ಖಾನ್ ವಿಚಾರಣೆ ನಡೆಸಲು ಚಿಂತಿಸಲಾಗಿದೆ. ಇವರನ್ನು ಸಾಕ್ಷಿದಾರರು ಎಂದು ಪರಿಗಣಿಸಿ ಕಲಂ 160ರಡಿಯಲ್ಲಿ ಹೇಳಿಕೆ ದಾಖಲಿಸಿಕೊಳ್ಳಲು ಪೊಲೀಸರು ಮುಂದಾಗಿದ್ದಾರೆ.

