ಬೆಂಗಳೂರು: ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಸರಣಿ ಕೊಲೆ ಪ್ರಕರಣದ ತನಿಖೆಗೆ ಕೊನೆಗೂ ಸರಕಾರ ಎಸ್ಐಟಿ ರಚನೆ ಮಾಡಿದ್ದು, ಡಾ. ಪ್ರಣವ ಮೊಹಾಂತಿ ನೇತೃತ್ವದ ತಂಡ ರಚನೆ ಮಾಡಿದೆ.
ಧರ್ಮಸ್ಥದಲ್ಲಿ ನೂರಾರು ಕೊಲೆಗಳು ನಡೆದಿದ್ದು, ಶವಗಳನ್ನು ತಾನೇ ಅಕ್ರಮವನ್ನು ಹೂತಿಟ್ಟಿದ್ದೇನೆ ಎಂದು ವ್ಯಕ್ತಿಯೊಬ್ಬ ನ್ಯಾಯಾಲಯದ ಮುಂದೆ ಶರಣಾಗಿದ್ದ. ಆತ ಮಹಜರಿಗೆ ಸಿದ್ಧವಾಗಿದ್ದು, ಪೊಲೀಸರೇ ಮಹಜರು ನಡೆಸಲು ಮೀನಾಮೇಷ ಎಣಿಸುತ್ತಿದ್ದಾರೆ ಎಂಬ ಕುರಿತು ರಾಜ್ಯಾದ್ಯಂತ ಆಕ್ರೋಶ ಹೆಚ್ಚಾಗಿತ್ತು.
ವಿವಿಧ ಕ್ಷೇತ್ರದ ಗಣ್ಯರು, ವಕೀಲರು ಮತ್ತು ಬುದ್ದಿಜೀವಿಗಳು ಸರಕಾರದ ಮೇಲೆ ಒತ್ತಡ ತಂದಿದ್ದರು. ಸೂಕ್ತ ತನಿಖೆಗೆ ವಹಿಸುವಂತೆ ಸಿಎಂಗೆ ಮನವಿ ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಸರಕಾರ ಎಸ್ಐಟಿ ರಚನೆಯ ಮಹತ್ವದ ತೀರ್ಮಾನ ತೆಗೆದುಕೊಂಡಿದೆ.
ಉಳಿದಂತೆ ತಂಡದಲ್ಲಿ ನೇಮಕಾತಿ ವಿಭಾಗದ ಉಪ ಪೊಲೀಸ್ ಮಹಾನಿರೀಕ್ಷಕರಾದ ಎಂ.ಎನ್.ಅನುಚೇತ್, ಸಿಎಆರ್ ಕೇಂದ್ರಸ್ಥಾನ ಬೆಂಗಳೂರು ನಗರದ ಉಪ ಪೊಲೀಸ್ ಆಯುಕ್ತರಾದ ಸೌಮ್ಯಲತಾ ಆಂತರಿಕ ಭದ್ರತಾ ವಿಭಾಗದ ಪೊಲೀಸ್ ಅಧೀಕ್ಷಕರಾದ ಜಿತೇಂದ್ರ ಕುಮಾರ್ ಇರಲಿದ್ದಾರೆ. ಈ ಸಂಬಂಧ ರಾಜ್ಯಾದ್ಯಂತ ದಾಖಲಾಗಿರುವ ಎಲ್ಲ ಪ್ರಕರಣಗಳ ತನಿಖೆ ನಡೆಸಿ, ಸಮಗ್ರ ವರದಿ ನೀಡುವಂತೆ ಸೂಚನೆ ನೀಡಲಾಗಿದೆ.