ರಾಜಕೀಯ ಸುದ್ದಿ

ಪದವೀಧರರ ಸಮಗ್ರ ಕಲ್ಯಾಣಕ್ಕಾಗಿ ರಾಮೋಜಿ ಗೌಡ ಅವರನ್ನು ವಿಧಾನ ಪರಿಷತ್ತಿಗೆ ಆಯ್ಕೆ ಮಾಡಿ

Share It

ದೇವನಹಳ್ಳಿ: ಬೆಂಗಳೂರು ಪದವೀಧರ ಕ್ಷೇತ್ರದಿಂದ ರಾಮೋಜಿ ಗೌಡ ಅವರನ್ನು ಕಾಂಗ್ರೆಸ್ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕೆ ಇಳಿಸಲಾಗಿದೆ, ಚುನಾವಣೆಯಲ್ಲಿ ರಾಮೋಜಿಗೌಡ ಬಹುಮತದಿಂದ ಗೆಲ್ಲುವ ವಿಶ್ವಾಸವಿದೆ, ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಶಿಕ್ಷಕರ ಘಟಕದ ಅಧ್ಯಕ್ಷ ಬಸವರಾಜ ಗುರಿಕಾರ ತಿಳಿಸಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲಾ ಪತ್ರಕರ್ತರ ಭವನ ದೇವನಹಳ್ಳಿಯಲ್ಲಿ ಸೋಮವಾರ ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ರಾಜ್ಯದ ಪದವೀಧರರು ಮತ್ತು ಶಿಕ್ಷಕರುಗಳಲ್ಲಿ ಉತ್ತಮ ಸಾಧನೆ ಮಾಡಿರುವವರನ್ನು ಗುರುತಿಸಿ ಕಳೆದ 6 ತಿಂಗಳ ಮೊದಲೇ ಕಾಂಗ್ರೆಸ್‌ ಪಕ್ಷವು ಅಭ್ಯರ್ಥಿಗಳನ್ನು ಘೋಷಿಸಿತ್ತು. ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಸರ್ಕಾರಿ ಶಾಲೆಗಳ 11494 ಶಿಕ್ಷಕರ ನೇಮಕಾತಿ ಮಾಡಲಾಗಿದೆ, 35 ಸಾವಿರ ಅತಿಥಿ ಶಿಕ್ಷಕರ ನೇಮಕ ಮಾಡಲಾಗಿದೆ. 2162 ಸರಕಾರಿ ಶಾಲೆಗಳ 7342 ಕೊಠಡಿಗಳ ದುರಸ್ತಿಗೆ 70 ಕೋಟಿ ಅನುದಾನ ನೀಡಲಾಗಿದೆ. 58 ಲಕ್ಷ ವಿದ್ಯಾರ್ಥಿಗಳಿಗೆ 280 ಕೋಟಿ ವೆಚ್ಚದಲ್ಲಿ ಪೌಷ್ಟಿಕ ಆಹಾರ ವಿತರಣೆ ಮಾಡಲಾಗಿದೆ.

ಸರ್ಕಾರಿ ಶಾಲೆಯ 45 ಲಕ್ಷ ಮಕ್ಕಳಿಗೆ 143 ಕೋಟಿ ವೆಚ್ಚದಲ್ಲಿ ಎರಡು ಜೊತೆ ಸಮವಸ್ತ್ರ ನೀಡಲಾಗಿದೆ. 19 ಸಾವಿರ ಎನ್ ಪಿ ಎಸ್, ಯೋಜನೆಯಲ್ಲಿದ್ದ ನೌಕರರನ್ನು ಓಪಿಎಸ್ ವ್ಯಾಪ್ತಿಗೆ ಒಳಪಡಿಸಲಾಗಿದೆ. ಶಿಕ್ಷಕರ ಕೋರಿಕೆಯ ಮೇರೆಗೆ 29 ಸಾವಿರ ಶಿಕ್ಷಕರಿಗೆ ಅವರುಗಳು ಬಯಸಿದ ಸ್ಥಳಗಳಿಗೆ ವರ್ಗಾವಣೆ ಮಾಡಲಾಗಿದೆ. ಕೇಂದ್ರ ಸರ್ಕಾರ ತನ್ನ ನೌಕರರಿಗೆ ತುಟ್ಟಿ ಭತ್ಯೆ ನೀಡಿದ ತಕ್ಷಣವೇ ರಾಜ್ಯದ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ ಹೆಚ್ಚಳ ಮಾಡಿದೆ. ಎನ್ ಪಿ ಎಸ್ ಬದಲು ಎಸ್ ಇ ಪಿ ಜಾರಿಗೆ ತರಲು ಸಮಿತಿ ರಚಿಸಲಾಗಿದೆ.

ಅತ್ಯುತ್ತಮ ಸಾಧನೆ ಮಾಡಿದ ವಿಶ್ವವಿದ್ಯಾಲಯಗಳಿಗೆ ತಲಾ 50 ಲಕ್ಷದಂತೆ ಒಟ್ಟು 350 ಕೋಟಿ ಅನುದಾನ ನೀಡಲಾಗಿದೆ ಅತಿಥಿ ಉಪನ್ಯಾಸಕರುಗಳಿಗೆ ಕನಿಷ್ಠ 5 ಸಾವಿರ ರೂಪಾಯಿಗಳಿಂದ ಗರಿಷ್ಠ 8 ಸಾವಿರ ವೇತನ ಹೆಚ್ಚಳ ಮಾಡಲಾಗಿದೆ ಅತಿಥಿ ಉಪನ್ಯಾಸಕರುಗಳಿಗೆ ರಜೆಯ ಸೌಲಭ್ಯ ನೀಡಲಾಗಿದೆ 5 ಲಕ್ಷ ರೂಪಾಯಿ ವೈದ್ಯಕೀಯ ಸೌಲಭ್ಯ ಹಾಗೂ 60 ವರ್ಷದ ನಂತರ ನಿವೃತ್ತಿಯಾಗುವ ಸಂದರ್ಭದಲ್ಲಿ ಬರಿಗೈಯಿಂದ ಕಳುಹಿಸದೆ 5 ಲಕ್ಷ ರೂಪಾಯಿ ಇಡಿಗಂಟು ನೀಡಲಾಗುವುದು.

ರಾಜ್ಯದ ಶಿಕ್ಷಕರ ಹಾಗೂ ಪದವೀಧರರ ಸಮಗ್ರ ಕಲ್ಯಾಣಕ್ಕಾಗಿ ಇನ್ನು ಹಲವಾರು ಯೋಜನೆಗಳನ್ನು ರೂಪಿಸಿ ಜಾರಿಗೆ ತರಲು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಾಮೋಜಿ ಗೌಡ ಅವರಿಗೆ ಪ್ರಥಮ ಪ್ರಾಶಸ್ತ್ಯದ ಮತ ನೀಡಿ ಪ್ರಚಂಡ ಬಹುಮತದಿಂದ ಆಯ್ಕೆ ಮಾಡಬೇಕೆಂದು ಪದವೀಧರ ಮತದಾರರಲ್ಲಿ ವಿನಂತಿಸುವುದಾಗಿ ಬಸವರಾಜ ಗುರಿಕಾರ ತಿಳಿಸಿದರು.

ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನಾ ಪ್ರಾಧಿಕಾರದ (ಬಯಪ) ಅಧ್ಯಕ್ಷ ಶಾಂತ ಕುಮಾರ್ ಮಾತನಾಡಿ, ಕಾಂಗ್ರೆಸ್ ಸರ್ಕಾರ ವಿಧಾನಸಭಾ ಚುನಾವಣೆಯಲ್ಲಿ ಘೋಷಣೆ ಮಾಡಿದ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು ನುಡಿದಂತೆ ನಡೆದು ರಾಜ್ಯದಲ್ಲಿ ಜನರ ವಿಶ್ವಾಸ ಗಳಿಸಿದೆ.

ಅದೇ ರೀತಿಯಲ್ಲಿ ಪದವೀಧರರ ಸಮಸ್ಯೆಗಳನ್ನು ಕೂಡ ಬಗೆಹರಿಸಲು ಸರ್ಕಾರ ಬದ್ದವಾಗಿದೆ ಪದವೀಧರ ಮತದಾರರು ಪ್ರಬುದ್ಧರಾಗಿದ್ದು ಈ ಹಿಂದಿನ ಬಿಜೆಪಿ ಅವಧಿಯಲ್ಲಿ ಅವರಿಗೆ ಯಾವ ರೀತಿಯಲ್ಲಿ ಸಮಸ್ಯೆಗಳಾಗಿದೆ ಎಂಬುದು ಎಲ್ಲರಿಗೂ ಗೊತ್ತಿರುವಂತೆ ವೇತನ ತಾರತಮ್ಯ, ಅನುದಾನಿತ ಶಾಲೆಯ ಸಮಸ್ಯೆಗಳು. ವೇತನ ನಿರ್ವಹಣೆಯಲ್ಲಿ ಅವೈಜ್ಞಾನಿಕತೆ ಇವೆಲ್ಲವೂ ಬಿಜೆಪಿ ಆಡಳಿತದಲ್ಲಿ ನಡೆದಿದೆ, ಕಾಂಗ್ರೆಸ್ ಆಡಳಿತದಲ್ಲಿ ಈ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಅದ್ದರಿಂದ ಕಾಂಗ್ರೆಸ್ ಅಭ್ಯರ್ಥಿ ರಾಮೋಜಿ ಗೌಡ ಅವರನ್ನು ಹೆಚ್ಚಿನ ಮತಗಳ ಅಂತರದಿಂದ ಮೇಲ್ಮನೆಗೆ ಕಳಿಸಬೇಕು, ಎಂದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನ ಕುಮಾರ್, ಮುಖಂಡರುಗಳಾದ ಜಗನ್ನಾಥ, ಕೋದಂಡರಾಮ್, ಸೋಲೂರು ಉಮೇಶ್ ಉಪಸ್ಥಿತರಿದ್ದರು.


Share It

You cannot copy content of this page