ಮಂಡ್ಯ: ಅಭಿವೃದ್ಧಿಯಲ್ಲಿ ರಾಜಕೀಯ ಬೆರೆಸುವ ಅಗತ್ಯವಿಲ್ಲ. ಪರಸ್ಪರ ಟೀಕೆ, ದೋಷಾರೋಪ ಮಾಡಿಕೊಳ್ಳುವ ಅಗತ್ಯವೂ ಇಲ್ಲ. ನಾವೆಲ್ಲರೂ ಸೇರಿ ಮಂಡ್ಯ ಜಿಲ್ಲೆಯನ್ನು ಅಭಿವೃದ್ಧಿಪಥದತ್ತ ಕೊಂಡೊಯ್ಯೋಣ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು ಹೇಳಿದರು.
ಆದಿಚುಂಚನಗಿರಿಯಲ್ಲಿ ಶುಕ್ರವಾರ ಪ್ರಖ್ಯಾತ ವಿಜ್ಞಾನಿ ಡಾ. ಎಂ.ಕೆ. ಸೂರಪ್ಪ ಅವರಿಗೆ ಶ್ರೀ ಆದಿಚುಂಚನಗಿರಿ ಕ್ಷೇತ್ರದ ವತಿಯಿಂದ ನೀಡಲಾಗುವ ‘ವಿಜ್ಞಾತಂ 2026’ ಪ್ರಶಸ್ತಿಯನ್ನು ಪ್ರಧಾನ ಮಾಡಿ ಮಾತನಾಡಿದರು. ವೇದಿಕೆ ಮೇಲೆ ಕೂತಿದ್ದ ರಾಜ್ಯದ ಸಚಿವರ ಎದುರಿನಲ್ಲಿಯೇ ರಾಜ್ಯದ ಪ್ರಗತಿ ಬಗ್ಗೆ ಒತ್ತಿ ಹೇಳಿದ ಸಚಿವರು; ಮಂಡ್ಯ ಜಿಲ್ಲೆ ಸಾಕಷ್ಟು ಅಭಿವೃದ್ಧಿ ಹೊಂದಿದೆ. ಮತ್ತಷ್ಟು ಅಭಿವೃದ್ಧಿ ಹೊಂದಬೇಕಾಗಿದೆ. ಪಕ್ಷಾತೀತವಾಗಿ ನನ್ನನ್ನು ಈ ಕ್ಷೇತ್ರದ ಜನರು ಗೆಲ್ಲಿಸಿದ್ದಾರೆ. ಈ ಜನರಿಗೆ ದ್ರೋಹ ಮಾಡುವ ವ್ಯಕ್ತಿ ನಾನಲ್ಲ. ಶ್ರೀ ಕಾಲಭೈರವನ ಸನ್ನಿಧಿಯಲ್ಲಿ, ಗುರು ಸಾನ್ನಿಧ್ಯದಲ್ಲಿ ಹೇಳುತ್ತಿದ್ದೇನೆ. ಮಂಡ್ಯಕ್ಕೆ ಕನಿಷ್ಠ ಪಕ್ಷ ಎರಡು ಕೈಗಾರಿಕೆಗಳನ್ನಾದರೂ ತರುತ್ತೇನೆ ಎಂದು ಘೋಷಿಸಿದರು.
ಈಗಾಗಲೇ ನಾನು ಘೋಷಣೆ ಮಾಡಿದ್ದೇನೆ. ಮಂಡ್ಯಕ್ಕೆ ₹500 ಕೋಟಿ ವೆಚ್ಚದಲ್ಲಿ ಜಾಗತಿಕ ಮಟ್ಟದ ARAI ಸಂಶೋಧನಾ ಕೇಂದ್ರವನ್ನು ತರಲಾಗುವುದು. ಕೇಂದ್ರ ಬಜೆಟ್ʼನಲ್ಲೇ ಯೋಜನೆಗೆ ಹಣ ಮೀಸಲು ಇಡಲಾಗಿದ್ದು, 100 ಎಕರೆ ಜಾಗ ಬೇಕೆಂದು ರಾಜ್ಯದ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದೇನೆ. ಅದಷ್ಟು ಬೇಗ ರಾಜ್ಯ ಸರಕಾರ ಸೂಕ್ತ ಜಾಗವನ್ನು ಕೆಐಎಡಿಬಿ ಯಿಂದ ಗುರುತಿಸಿ ಅಭಿವೃದ್ಧಿ ಮಾಡಿ ನಮಗೆ ಹಸ್ತಾಂತರ ಮಾಡಬೇಕು. ಜನಪ್ರತಿನಿಧಿಗಳಿಗೆ ಜಾಗ ಕೊಡುವ ಅಧಿಕಾರ ಇಲ್ಲ. ಈ ಬಗ್ಗೆ ರಾಜಕೀಯ ಅಗತ್ಯ ಇಲ್ಲ ಎಂದು ಕೇಂದ್ರ ಸಚಿವರು ಹೇಳಿದರು.
ಆಟೋಮೊಟಿವ್ ರಿಸರ್ಚ್ ಅಸೋಸಿಯೇಷನ್ ಆಫ್ ಇಂಡಿಯಾ (ARAI) ಕೇಂದ್ರಕ್ಕೆ ಕೊನೆಪಕ್ಷ ₹1000 ಕೋಟಿಯನ್ನಾದರೂ ಹೂಡಿಕೆ ಮಾಡಲಾಗುವುದು. ಈ ಯೋಜನೆ ಮಂಡ್ಯದ ಚಿತ್ರಣವನ್ನೇ ಬದಲಿಸಲಿದೆ. ಉದ್ಯೋಗ ಸೃಷ್ಟಿ ಅಷ್ಟೇ ಅಲ್ಲದೆ, ಪರೋಕ್ಷ ಉದ್ಯೋಗಗಳನ್ನು ಭಾರೀ ಪ್ರಮಾಣದಲ್ಲಿ ಸೃಷ್ಟಿಸಿ ದೊಡ್ಡ ಮಟ್ಟದ ಆಟೋ ಇಕೋ ಸಿಸ್ಟಮ್ ಅನ್ನು ಸೃಷ್ಟಿ ಮಾಡುತ್ತದೆ. ಜತೆಗೆ, ಮತ್ತೊಂದು ಕೈಗಾರಿಕೆಯನ್ನು ತರುವ ಬಗ್ಗೆ ನಾನು ನಿಕಟವಾಗಿ ಕೆಲಸ ಮಾಡುತ್ತಿದ್ದೇನೆ ಎಂದು ಕೇಂದ್ರ ಸಚಿವರು ಹೇಳಿದರು.
ಭ್ರದಾವತಿಯಲ್ಲಿನ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ (VSIL) ಪುನಶ್ಚೇತನಕ್ಕೆ ನಾನು ಕೆಲಸ ಮಾಡುತ್ತಿದ್ದೇನೆ. ಉಕ್ಕು ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ ನಾನು ದೃಢವಾಗಿ ದುಡಿಮೆ ಮಾಡುತ್ತಿದ್ದೇನೆ. ಆರಂಭಿಕ ಹಂತದಲ್ಲಿ ಕನಿಷ್ಠ ₹5000 ಕೋಟಿಗಳನ್ನಾದರೂ ಈ ಕಾರ್ಖಾನೆಗೆ ಹೂಡಿಕೆ ಮಾಡಲಾಗುವುದು. ಅನೇಕ ರೀತಿಯ ತಾಂತ್ರಿಕ ಚರ್ಚೆಗಳು ನಡೆಯುತ್ತಿವೆ. ಡಿಪಿಆರ್ ಕೆಲಸ ನಡೆಯುತ್ತಿದೆ. ಹಾಗೆಯೇ ಹೆಚ್ ಎಂಟಿ ಗೂ ಕಾಯಕಲ್ಪ ನೀಡುವ ಉದ್ದೇಶವಿದೆ. ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ನಾವು ಗಮನವಿಟ್ಟು ಕೆಲಸ ಮಾಡುತ್ತಿದ್ದೇವೆ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಹೇಳಿದರು.
ಶಂಕುಸ್ಥಾಪನೆಗೆ ಬರುವಂತೆ ಒತ್ತಡ ಹಾಕುತ್ತಿದ್ದಾರೆ: ನಾನು ಮಾಡುವ ಕೆಲಸಕ್ಕೆ ಶಂಕುಸ್ಥಾಪನೆ ಮಾಡುವ ಪರಿಪಾಠ ಇಟ್ಟುಕೊಂಡವನಲ್ಲ. ಆದರೆ, ಇತ್ತೀಚೆಗೆ ಶಂಕುಸ್ಥಾಪನೆಗೆ ಬರಲೇಬೇಕು ಎಂದು ಒತ್ತಡ ಹೇರಲಾಗುತ್ತಿದೆ. ಚನ್ನಪಟ್ಟಣದಲ್ಲಿ ನಾನು ಸಾವಿರಾರು ಕೋಟಿ ಮೊತ್ತದ ಅಭಿವೃದ್ಧಿ ಕೆಲಸಗಳನ್ನು ಮಾಡಿದೆ. ಒಂದು ದಿನವೂ ನಾನು ಕ್ಷೇತ್ರಕ್ಕೆ ಹೋಗಿ ಅಡಿಗಲ್ಲು ಹಾಕಿ ಹೆಸರು ಕೆತ್ತಿಸಿಕೊಳ್ಳುವ ಕೆಲಸ ಮಾಡಲಿಲ್ಲ. ಈಗ ನೋಡಿದರೆ ಕೆಲವರು ಅಲ್ಲಿ ಕುಜರಾಸ್ವಾಮಿ ಅವರ ಸಾಕ್ಷಿಗುಡ್ಡೇ ಏನು ಎಂದು ಕೇಳುತ್ತಿದ್ದಾರೆ! ಎಂದು ಅವರು ಅಚ್ಚರಿ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಕೇಂದ್ರ ಅನುದಾನಿತ ಅನೇಕ ಯೋಜನೆಗಳು ನೆನೆಗುದಿಗೆ ಬಿದ್ದಿವೆ. ಕೇಂದ್ರದ ಅನುದಾನ ಇಲ್ಲಿ ಬಳಕೆ ಆಗದೆ ವಾಪಸ್ ಬಂದಿದೆ. ಮ್ಯಾಚಿಂಗ್ ಗ್ರಾಂಟ್ ಮತ್ತು ಸಕಾಲಕ್ಕೆ ಭೂಮಿ ಒದಗಿಸುವುದು ರಾಜ್ಯ ಸರ್ಕಾರಕ್ಕೆ ಆಗುತ್ತಿಲ್ಲ. ಈ ಸಮಸ್ಯೆಯನ್ನು ಸರ್ಕಾರ ಬಗೆಹರಿಸಬೇಕು. ಯೋಜನೆಗಳಿಗೆ ಹಣದ ಕೊರತೆ ಇದೆ ಎಂದ ಕೇಂದ್ರ ಸಚಿವರು; ನಮ್ಮ ಕಡೆಯಿಂದ ಎಲ್ಲಾ ಸಹಕಾರ ಕೊಡುವುದಕ್ಕೆ ಸಿದ್ಧರಿದ್ದೇವೆ. ಕೇವಲ ಜಾಹೀರಾತುಗಳ ಮೂಲಕ ಅಭಿವೃದ್ಧಿ ಸಾಧ್ಯವಿಲ್ಲ. ಅಂತಹ ಪ್ರವೃತ್ತಿ ನನ್ನದಲ್ಲ ಎಂದು ಅವರು ಹೇಳಿದರು.
ಸಮತೋಲಿತ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಬದ್ಧವಾಗಿದೆ. ಆ ನಿಟ್ಟಿನಲ್ಲಿ ನಾವು ಪ್ರಧಾನಿಗಳ ಮಾರ್ಗದರ್ಶನದಂತೆ ಕೆಲಸ ಮಾಡುತ್ತಿದ್ದೇವೆ. ಅವರ ನೇತೃತ್ವದಲ್ಲಿ ಭಾರತವು ಜಗತ್ತಿನ ಬೃಹತ್ ಆರ್ಥಿಕ ಶಕ್ತಿಯಾಗಿ ಬೆಳೆಯುತ್ತಿದೆ. ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಅಗ್ರದೇಶಗಳಿಗೆ ಸರಿಸಾಟಿ ಆಗುವ ರೀತಿಯಲ್ಲಿ ಭಾರತವನ್ನು ಮುನ್ನಡೆಸುತ್ತಿದ್ದಾರೆ ಎಂದು ಕೇಂದ್ರ ಸಚಿವರು ಬಣ್ಣಿಸಿದರು.
ಶ್ರೀ ಆದಿಚುಂಚನಗಿರಿ ಮಠದ ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದ ನಾಥ ಮಹಾಸ್ವಾಮೀಜಿ ಅವರು ದಿವ್ಯ ಸಾನಿಧ್ಯ ವಹಿಸಿದ್ದರು. 13ನೇ ಪಟ್ಟಾಭಿಷೇಕ ಮಹೋತ್ಸವದ ಹಿನ್ನೆಲೆಯಲ್ಲಿ ಪರಮಪೂಜ್ಯರಿಗೆ ಪುಷ್ಪ ನಮನ ಸಲ್ಲಿಸಲಾಯಿತು. ಮಾದಾರ ಚೆನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಅವರು, ಗೋಸಾಯಿ ಮಠದ ಶ್ರೀ ಮಂಜುನಾಥ ಭಾರತೀ ಸ್ವಾಮೀಜಿ ಅವರು, ಮಾಜಿ ಮುಖ್ಯಮಂತ್ರಿ ಡಿ.ವಿ
ಸದಾನಂದ ಗೌಡರು, ರಾಜ್ಯದ ಸಚಿವರಾದ ಕೆ.ಹೆಚ್. ಮುನಿಯಪ್ಪ, ಚೆಲುವರಾಯಸ್ವಾಮಿ, ಮಾಜಿ ಶಾಸಕ ಸುರೇಶ್ ಗೌಡ, ಶಾಸಕ ಕೆ.ಆರ್.ಪೇಟೆ ಮಂಜುನಾಥ್, ವಿಜ್ಞಾತಂ ಪ್ರಶಸ್ತಿ ಪುರಸ್ಕೃತರಾದ ಖ್ಯಾತ ವಿಜ್ಞಾನಿ ಡಾ. ಎಂ.ಕೆ. ಸೂರಪ್ಪ ಸೇರಿದಂತೆ ವಿವಿಧ ಗಣ್ಯರು, ಸ್ವಾಮೀಜಿಗಳು ಉಪಸ್ಥಿತರಿದ್ದರು.

