ಬೆಂಗಳೂರು: ರಾಜ್ಯ ಸರಕಾರ ಜಾರಿಗೆ ತಂದಿರುವ ಹತ್ತನೇ ತರಗತಿಯ ಹಿಂದಿ ಪರೀಕ್ಷೆಯಲ್ಲಿ ಗ್ರೇಡ್ ನೀಡುವ ತೀರ್ಮಾನ ಮರುಪರಿಶೀಲನೆಗೆ ರಾಜ್ಯಪಾಲರು ಶಿಫಾರಸು ಮಾಡಿದ ಹಿನ್ನೆಲೆಯಲ್ಲಿ ರಾಜಭವನ ಮುತ್ತಿಗೆಗೆ ಕರವೇ ತೀರ್ಮಾನಿಸಿದೆ.
ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ನಾರಾಯಣ ಗೌಡ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ರಾಜಭವನ ಮುತ್ತಿಗೆಗೆ ಕರೆ ಕೊಟ್ಟಿದ್ದು, ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸುವ ಸಾವಿರಾರು ಕಾರ್ಯಕರ್ತರು ರಾಜಭವನ ಮುತ್ತಿಗೆ ಹಾಕಲಿದ್ದಾರೆ ಎನ್ನಲಾಗಿದೆ.
ಹಿಂದಿ ಪರೀಕ್ಷೆಯಲ್ಲಿ ಗ್ರೇಡ್ ನೀಡುವ ಮೂಲಕ ಪಾಸ್ ಆಗಲು ಹಿಂದಿಯಲ್ಲಿ ಗಳಿಸುವ ಅಂಕಗಳನ್ನು ಪರಿಗಣಿಸದಿರಲು ಸರಕಾರ ತೀರ್ಮಾನಿಸಿದೆ. ಆ ಮೂಲಕ ದ್ವಿಭಾಷಾ ನೀತಿ ಜಾರಿಗೆ ಮತ್ತೊಂದು ಹೆಜ್ಜೆ ಮುಂದಿಟ್ಟಿದೆ. ಸರಕಾರದ ತೀರ್ಮಾನವನ್ನು ಕರ್ನಾಟಕ ರಕ್ಷಣಾ ವೇದಿಕೆ ಸೇರಿ ಕನ್ನಡಪರ ಸಂಘಟನೆಗಳು ಸ್ವಾಗತಿಸಿವೆ.
ಈ ನಡುವೆ ಸರಕಾರದ ನಿರ್ಧಾರವನ್ನು ಬಿಜೆಪಿ ನಾಯಕರು ವಿರೋಧಿಸಿದ್ದು, ರಾಜ್ಯಪಾಲರ ಮೂಲಕ ಸರಕಾರಕ್ಕೆ ಮರುಪರಿಶೀಲನೆಗೆ ಆದೇಶ ಮಾಡಿಸುವಲ್ಲಿ ಸಫಲವಾಗಿದ್ದಾರೆ. ಈ ಧೋರಣೆಯನ್ನು ಖಂಡಿಸಿರುವ ರಕ್ಷಣಾ ವೇದಿಕೆ ಇದೀಗ ರಾಜ್ಯಪಾಲರ ವಿರುದ್ಧ ಹೋರಾಟಕ್ಕೆ ಸಜ್ಜಾಗಿದೆ. ಹೀಗಾಗಿ, ಲೋಕಸಭವನ ಮುತ್ತಿಗೆಗೆ ತೀರ್ಮಾನಿಸಿದೆ.


