ಅಪರಾಧ ಸುದ್ದಿ

ಜೈಲಿನಲ್ಲಿದ್ದ ಹೊಸದುರ್ಗ ಪುರಸಭೆ ಮುಖ್ಯಾಧಿಕಾರಿ ಸಾವು

Share It

ಚಿತ್ರದುರ್ಗ: ಜೈಲಿನಲ್ಲಿದ್ದ ಹೊಸದುರ್ಗ ಪುರಸಭೆಯ ಮುಖ್ಯಾಧಿಕಾರಿ ತಿಮ್ಮರಾಜು ಹೃದಯಾಘಾತದಿಂದ ನಿಧನರಾಗಿದ್ದಾರೆ.

ಚಿತ್ರದುರ್ಗದ ಜಿಲ್ಲಾ ಕಾರಾಗೃಹದಲ್ಲಿದ್ದ ಅವರನ್ನ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ನಂತರ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.

ಏ.20ರಂದು ಲಂಚ ಪಡೆಯುವಾಗ ತಿಮ್ಮರಾಜು ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದರು. ಪುರಸಭೆ ಸದಸ್ಯ ಹಾಲೇಶ್ ಎಂಬುವವರಿಂದ ಲಂಚ ಸ್ವೀಕಾರ ಮಾಡುವಾಗ ಲೋಕಾಯುಕ್ತ ಪೊಲೀಸರು ಬಂಧಿಸಿದ್ದರು.

ಹಾಲೇಶ್ ತಮ್ಮ ಕಡೆಯ ಕೆಲವೊಂದನ್ನು ಮಾಡಿಕೊಡುವ ಸಲುವಾಗಿ 25 ಸಾವಿರ ಲಂಚ ನೀಡುವಾಗ ದಾಳಿ ನಡೆಸಿದ್ದ ಲೋಕಾಯುಕ್ತ ಪೊಲೀಸರು, ತಿಮ್ಮರಾಜು ಅವರನ್ನು ಬಂಧಿಸಿದ್ದರು. ಅನಂತರ ಅವರನ್ನು ಜೈಲಿಗೆ ಕಳುಹಿಸಲಾಗಿತ್ತು.

ಇಂದು ಬೆಳಗ್ಗೆ ಜೈಲಿನಲ್ಲಿ ಎದೆನೋವು ಕಾಣಿಸಿಕೊಂಡಿದ್ದು, ಜೈಲಿನ ವೈದ್ಯರು ಪರೀಕ್ಷೆಯ ನಂತರ ಜಿಲ್ಲಾಸ್ಪತ್ರೆಗೆ ರವಾನೆ ಮಾಡುವಂತೆ ಸೂಚಿಸಿದರು. ಜಿಲ್ಲಾಸ್ಪತ್ರೆಗೆ ತಂದು ಚಿಕಿತ್ಸೆ ಕೊಡಲು ಮುಂದಾದರೂ, ಹೃದಯಾಘಾತದಿಂದ ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಲಂಚ ಸ್ವೀಕಾರ ಮಾಡುವಾಗ ಸಿಕ್ಕಿಬಿದ್ದ ಖಿನ್ನತೆಯಲ್ಲಿ ಕಳೆದ ಮೂರ್ನಾಲ್ಕು ದಿನಗಳನ್ನು ತಿಮ್ಮರಾಜು ಜೈಲಿನಲ್ಲಿ ಕಳೆದಿದ್ದರು. ಅದೇ ನೋವಿನಿಂದ ಬಳಲುತ್ತಿದ್ದರು ಎನ್ನಲಾಗಿದೆ. ಅತಿಯಾದ ಒತ್ತಡ ಮತ್ತು ಚಿಂತೆಯಿಂದ ಎದೆನೋವು ಕಾಣಿಸಿಕೊಂಡಿದ್ದು, ಅವರಿಗೆ ಹೃದಯಾಘಾತವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.


Share It

You cannot copy content of this page