ಬೆಂಗಳೂರು: ನಗರ ಪ್ರದೇಶಗಳ ಆಸ್ತಿಗಳು ಸೇರಿ ರಾಜ್ಯದಲ್ಲಿ 40 ಸಾವಿರ ಆಸ್ತಿಗಳಿದ್ದು, ಅವುಗಳ ಪೈಕಿ 20 ಸಾವಿರ ಆಸ್ತಿಗಳನ್ನು ಈಗಾಗಲೇ ಇಂಡೀಕರಣ ಮಾಡಲಾಗಿದೆ. ಸ್ವಾತಂತ್ರ್ಯ ನಂತರ ಇಷ್ಟೊಂದು ದೊಡ್ಡ ಪ್ರಮಾಣದ ಆಸ್ತಿ ಸಂರಕ್ಷಣೆ ಮುಜರಾಯಿ ಇಲಾಖೆಯಲ್ಲಿ ದಾಖಲೆ ಎನ್ನಬಹುದು.
ಮುಜರಾಯಿ ವ್ಯಾಪ್ತಿ ದೇವಸ್ಥಾನಗಳಿಗೆ ಸೇರಿದ 36 ಸಾವಿರ ಎಕರೆ ಜಮೀನು ಹಾಗೂ 4,000 ನಗರ ಪ್ರದೇಶದ ಆಸ್ತಿಗಳು ಇಲಾಖೆಯಲ್ಲಿವೆ. ಆದರೆ, ಈವರೆಗೆ ಕೆಲವು ಆಸ್ತಿಗಳು ಯಾರ್ಯಾರದೋ ಹೆಸರಿನಲ್ಲಿದ್ದು, ದೇವಸ್ಥಾನದ ಹೆಸರಿಗೆ ದಾಖಲೆ ಮಾಡುವ ಪ್ರಕ್ರಿಯೆ ನಡೆದಿರಲಿಲ್ಲ. ನಮ್ಮ ಸರಕಾರ ಅಧಿಕಾರಕ್ಕೆ ಬಂದ ನಂತರ 20 ಸಾವಿರ ಎಕರೆ ಆಸ್ತಿಗಳ ದಾಖಲೆ ಮಾಡಿ ಆಸ್ತಿಗಳ ಸಂರಕ್ಷಣೆ ಮಾಡಲಾಗಿದೆ.
ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಾಗ 3,500 ಎಕರೆ ಮಾತ್ರ ದೇವಸ್ಥಾನಗಳ ಹೆಸರಿನಲ್ಲಿತ್ತು. ಇದೀಗ
17,500 ಎಕರೆ ಜಮೀನನ್ನು ದೇವಸ್ಥಾನದ ಹೆಸರಿಗೆ ಮಾಡಿದ್ದೇವೆ. 2,500 ನಗರ ಪ್ರದೇಶದ ಆಸ್ತಿಗಳನ್ನು ದಾಖಲೆ ತಯಾರು ಮಾಡಿ ಸಂರಕ್ಷಣೆ ಮಾಡಲಾಗಿದೆ.
ಇನ್ನುಳಿದ 20 ಸಾವಿರ ಆಸ್ತಿಗಳನ್ನು ಒಂದು ವರ್ಷದಲ್ಲಿ ಸಂರಕ್ಷಣೆ ಮಾಡಲಾಗುತ್ತೆ. ಇದರಲ್ಲಿ 4,000 ನಗರ ಪ್ರದೇಶದ ಆಸ್ತಿಗಳು ಸೇರಿವೆ. ಸರ್ವೇ ಮಾಡಿಕೊಡಲು ಕಂದಾಯ ಇಲಾಖೆ ಮನವಿ ಮಾಡಿದ್ದೇವೆ. ಅವರು ಹಂತಹಂತವಾಗಿ ಒಂದು ವರ್ಷದಲ್ಲಿ ಪೂರ್ಣಗೊಳಿಸಲಿದ್ದಾರೆ ಎಂದು ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ.

