ಬೆಂಗಳೂರು ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಾಮಗಾರಿ ಇಲಾಖೆ ಪ್ರಗತಿ ಪರಿಶೀಲನೆ, ಪಿಜಿಗಳ ತಪಾಸಣೆಗೆ ಜಂಟಿ ತಂಡ ರಚನೆ, ರಾಷ್ಟ್ರೀಯ ಜನಗಣತಿಗೆ ಪೂರ್ವಸಿದ್ಧತೆ ಹಾಗೂ ನ್ಯಾಯಾಲಯ ಪ್ರಕರಣಗಳ ತ್ವರಿತ ಕ್ರಮದ ಕುರಿತು ಬೆಂಗಳೂರು ಪೂರ್ವ ನಗರ ಪಾಲಿಕೆ ಆಯುಕ್ತರಾದ ಡಿ.ಎಸ್. ರಮೇಶ್ ರವರ ಅಧ್ಯಕ್ಷತೆಯಲ್ಲಿ ಮಹತ್ವದ ಸಭೆಯನ್ನು ನಡೆಸಲಾಯಿತು.
ಕಾಮಗಾರಿ ಪ್ರಗತಿ ಪರಿಶೀಲನೆ
- ಮಹದೇವಪುರ ಮತ್ತು ಕೆ.ಆರ್.ಪುರ ವಲಯಗಳ ವ್ಯಾಪ್ತಿಯಲ್ಲಿನ ವಿವಿಧ ಅನುದಾನಗಳಡಿ ಕೈಗೊಂಡಿರುವ ಕಾಮಗಾರಿಗಳ ಪ್ರಗತಿಯನ್ನು ಆಯುಕ್ತರು ಪರಿಶೀಲಿಸಿದರು. ಬಾಕಿ ಉಳಿದಿರುವ ಕಾಮಗಾರಿಗಳನ್ನು ಶೀಘ್ರದಲ್ಲಿ ಪೂರ್ಣಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
- ಗುತ್ತಿಗೆ ಪಡೆದು ಅಭಿವೃದ್ಧಿ ಕಾರ್ಯ ಕೈಗೊಳ್ಳದ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲು ಕ್ರಮ ಕೈಗೊಳ್ಳುವಂತೆ ನಿರ್ದೇಶನ.
- ಸಿವಿಲ್ ಹಾಗೂ ಒಳಚರಂಡಿ ಕಾಮಗಾರಿ ಪೂರ್ಣಗೊಳಿಸಿದ ನಂತರವೇ ಡಾಂಬರೀಕರಣ ಕೈಗೊಳ್ಳಲು ಹಾಗೂ ರಸ್ತೆಗಳು ಸಮತಟ್ಟಾಗಿರುವಂತೆ ಡಾಂಬರೀಕರಣ ಮಾಡಲು ಸೂಚನೆ.
- ಪೂರ್ವ ನಗರ ಪಾಲಿಕೆ ಗಡಿ ಗುರುತುಪಡಿಸಲು ಎಲ್ಲಾ ಪ್ರವೇಶ ರಸ್ತೆಗಳಲ್ಲಿ ಸೈನ್ಬೋರ್ಡ್ ಅಳವಡಿಸಲು ಹಾಗೂ ಪ್ರವೇಶದ್ವಾರ ಸುಧಾರಣೆಗೆ ಕ್ರಮ ಕೈಗೊಳ್ಳಲು ಸೂಚನೆ.
- ಕಾಮಗಾರಿಗಳ ನೈಜ ಸಮಯದ ಭೌತಿಕ ಪ್ರಗತಿ ವರದಿ ಪಡೆಯಲು ತಂತ್ರಾಂಶ ಅಭಿವೃದ್ಧಿ ಕುರಿತು ಪ್ರಸ್ತಾವನೆ ಸಲ್ಲಿಸಲು ಸೂಚನೆ.
- ಸಾರ್ವಜನಿಕರ ದೂರುಗಳಿಗೆ ತ್ವರಿತ ಸ್ಪಂದನೆ ನೀಡಿ, ಸಾಧ್ಯವಾದಷ್ಟು ನಿಮ್ಮ ಹಂತದಲ್ಲೇ ಪರಿಹರಿಸಲು ಎಲ್ಲಾ ಇಂಜಿನಿಯರಿಂಗ್ ಅಧಿಕಾರಿಗಳಿಗೆ ಸೂಚನೆ.
ಪೇಯಿಂಗ್ ಗೆಸ್ಟ್ ಸಂಸ್ಥೆಗಳ ಪರಿಶೀಲನೆಗೆ ಜಂಟಿ ತಂಡ ರಚನೆ: ಮಾನ್ಯ ಉಚ್ಚ ನ್ಯಾಯಾಲಯದ ಆದೇಶದನ್ವಯ ಸಾರ್ವಜನಿಕ ಆರೋಗ್ಯ ಮತ್ತು ಸುರಕ್ಷತೆ ನಿಯಮ ಪಾಲನೆ ಹಿನ್ನೆಲೆಯಲ್ಲಿ ಪೇಯಿಂಗ್ ಗೆಸ್ಟ್ ಗಳ ಪರಿಶೀಲನೆಗಾಗಿ ಆರೋಗ್ಯ ವಿಭಾಗ ಹಾಗೂ ನಗರ ಯೋಜನೆ ವಿಭಾಗದ ಅಧಿಕಾರಿಗಳನ್ನು ಒಳಗೊಂಡ ಜಂಟಿ ಪರಿಶೀಲನಾ ತಂಡವನ್ನು ರಚಿಸಲಾಗಿದೆ. ಜಂಟಿ ತಂಡವು ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಎಲ್ಲಾ ಪಿಜಿಗಳನ್ನು15 ದಿನಗಳೊಳಗೆ ಸಮಗ್ರವಾಗಿ ಪರಿಶೀಲಿಸಿ ಅನುಸರಣಾ ವರದಿ ಸಲ್ಲಿಸಲು ಸೂಚಿಸಲಾಗಿದೆ ಎಂದು ಆಯುಕ್ತರು ತಿಳಿಸಿದರು.
ಪಿಜಿಗಳ ಸಮಗ್ರ ಪರಿಶೀಲನೆಯಲ್ಲಿ ಮಂಜೂರಾದ ಕಟ್ಟಡ ಯೋಜನೆಯ ಪ್ರಕಾರ ನಿರ್ಮಾಣವಾಗಿದೆಯೇ, ವಾಣಿಜ್ಯ ವಲಯದಲ್ಲಿ ಬರುತ್ತದೆಯೇ, ಅಗ್ನಿಶಾಮಕ ಇಲಾಖೆಯಿಂದ ಎನ್ಒಸಿ ಪಡೆಯಲಾಗಿದೆಯೇ, ಸಿಸಿಟಿವಿ ಹಾಗೂ ಕನಿಷ್ಠ 90 ದಿನಗಳ ಡೇಟಾ ಸಂಗ್ರಹ ವ್ಯವಸ್ಥೆ, ಪ್ರತಿ ವ್ಯಕ್ತಿಗೆ ಕನಿಷ್ಠ 70 ಚದರ ಅಡಿ ಸ್ಥಳಾವಕಾಶ, ಪ್ರಥಮ ಚಿಕಿತ್ಸೆ ಪೆಟ್ಟಿಗೆ, ಮೂಲ ವೈದ್ಯಕೀಯ ಸೌಲಭ್ಯ, ಸುರಕ್ಷಿತ ಕುಡಿಯುವ ನೀರು, ಆಹಾರ ತಯಾರಿಸಲು ಅಡುಗೆಕೋಣೆ ಇದ್ದಲ್ಲಿ FSSAI ಪ್ರಮಾಣಪತ್ರ ಮಾನ್ಯತೆ, ಭದ್ರತಾ ವ್ಯವಸ್ಥೆ, ಕಸ ವಿಂಗಡಣೆ ಮತ್ತು ವಿಲೇವಾರಿ ನಿಯಮಾನುಸಾರ ಪಾಲನೆ, ಹಾಗೂ ತುರ್ತು ಸಂಪರ್ಕ ದೂರವಾಣಿಗಳ ಪ್ರದರ್ಶನ ಫಲಕ ಇತ್ಯಾದಿಗಳ ಬಗ್ಗೆ ಪರಿಶೀಲಿಸಿ ನಿಯಮಾನುಸಾರ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಆಯುಕ್ತರು ಸೂಚಿಸಿದರು.
ರಾಷ್ಟ್ರೀಯ ಜನಗಣತಿ–2027 ಪೂರ್ವಸಿದ್ಧತೆ: ರಾಷ್ಟ್ರೀಯ ಜನಗಣತಿ–2027 ಪೂರ್ವಸಿದ್ಧತೆಗೆ ಸಂಬಂಧಿಸಿದಂತೆ ಸಭೆ ನಡೆಸಿದ ಆಯುಕ್ತರು ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಜನಗಣತಿ ಕಾರ್ಯಕ್ಕೆ ಅಗತ್ಯವಿರುವ ಚಾರ್ಜ್ ಅಧಿಕಾರಿ, ಸಹಾಯಕ ಚಾರ್ಜ್ ಅಧಿಕಾರಿ, ಗಣತಿದಾರರ ಮೇಲ್ವಿಚಾರಕರು, ಗಣತಿದಾರರು, ತಾಂತ್ರಿಕ ಸಹಾಯಕರು ಸೇರಿದಂತೆ ಇನ್ನಿತರೆ ಮಾನವ ಸಂಪನ್ಮೂಲ ನಿಯೋಜನೆ ಮಾಡಿಕೊಳ್ಳಲು ಹಾಗೂ ಅಗತ್ಯ ತರಬೇತಿ ನೀಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರು.
ನ್ಯಾಯಾಲಯ ಪ್ರಕರಣಗಳ ಮೇಲ್ವಿಚಾರಣೆ: ಪೂರ್ವ ನಗರ ಪಾಲಿಕೆಗೆ ಸಂಬಂಧಿಸಿದ ನ್ಯಾಯಾಲಯ ನಿಂದನೆ, ರಿಟ್ ಅರ್ಜಿ, ರಿಟ್ ಪಿಟೀಷನ್ ಪ್ರಕರಣಗಳಿಗೆ ಸಂಬಂಧಿಸಿದ ಬಾಕಿ ಕಡತಗಳನ್ನು ವಿಲೇ ಮಾಡಲು ಹಾಗೂ ಮೇಲ್ವಿಚಾರಣಾ ವ್ಯವಸ್ಥೆಯನ್ನು ಬಲಪಡಿಸುವ ಮೂಲಕ ಸಿಸಿಎಂಎಸ್ ಪ್ರಕರಣಗಳನ್ನು ತ್ವರಿತಗತಿಯಲ್ಲಿ ವಿಲೇ ಮಾಡಲು ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಅಪರ ಆಯುಕ್ತರು (ಅಭಿವೃದ್ಧಿ) ಲೋಖಂಡೆ ಸ್ನೇಹಲ್ ಸುಧಾಕರ್, ಅಪರ ಆಯುಕ್ತರು (ಕಂದಾಯ) ಪ್ರಜ್ಞಾ ಅಮ್ಮಂಬಳ, ಜಂಟಿ ಆಯುಕ್ತರಾದ ಡಾ. ದಾಕ್ಷಾಯಿಣಿ.ಕೆ. ಮತ್ತು ಡಾ. ಸುಧಾ, ಮುಖ್ಯ ಅಭಿಯಂತರರು, ಉಪ ಆಯುಕ್ತರುಗಳು, ಕಾರ್ಯಪಾಲಕ ಅಭಿಯಂತರರು ಮತ್ತು ಸಹಾಯಕ ಕಾರ್ಯಪಾಲಕ ಅಭಿಯಂತರರು, ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

