ಅಪರಾಧ ಸುದ್ದಿ

ಇದೊಂದು ‘ಮಕ್ಕಳ ಸಾಕ್ಷಿ’ ಕತೆ: ಆಸ್ತಿಗಾಗಿ ಆರು ವರ್ಷದ ಮಗುವನ್ನು ಕೊಂದಿದ್ದ ಹಂತಕನಿಗೆ ಜೀವಾವಧಿ ಶಿಕ್ಷೆ: ಮಕ್ಕಳ ಸಾಕ್ಷಿಯೇ ಮೇಜರ್ ವಿಟ್ನೆಸ್ !

Share It

ಬೆಳಗಾವಿ : ಆಸ್ತಿ ವಿಚಾರಕ್ಕೆ ಸಂಬಂಧಿಸಿ ಬಾಲಕನನ್ನು ಕೊಲೆ ಮಾಡಿದ್ದ ದೊಡ್ಡಪ್ಪನಿಗೆ ಜೀವಾವಧಿ ಶಿಕ್ಷೆ ವಿಧಿಸಿ ಇಲ್ಲಿನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.

ಬೈಲಹೊಂಗಲ ತಾಲೂಕು ಹಾರೂಗೊಪ್ಪ ಗ್ರಾಮದಲ್ಲಿ 2021ರ ಜನವರಿ 20ರಂದು ಆರು ವರ್ಷದ ಸಿದ್ಧಾರ್ಥ ವೀರೇಶ ಸಂಕನ್ನವರ ಎಂಬ ಬಾಲಕನನ್ನು ಕೊಲೆ ಮಾಡಲಾಗಿತ್ತು. ಬಾಲಕನ ದೊಡ್ಡಪ್ಪ ಈರಪ್ಪ ಸಂಕನ್ನವರ ಕೊಲೆಗೈದ ಆರೋಪಿಯಾಗಿದ್ದು ಆತನಿಗೆ ಈಗ ಶಿಕ್ಷೆ ಆಗಿದೆ.

ಸಿದ್ದಾರ್ಥನ ತಂದೆ ವೀರೇಶ ಮತ್ತು ಆರೋಪಿ ಈರಪ್ಪನ ನಡುವೆ ಆಸ್ತಿ ವಿಚಾರಕ್ಕೆ ಗಲಾಟೆ ನಡೆದಿತ್ತು. ಸಹೋದರನ ಮೇಲಿನ ಸಿಟ್ಟಿನಿಂದ ಆರೋಪಿ ಆಡುತ್ತಿದ್ದ ಸಿದ್ದಾರ್ಥನನ್ನು ಕುಡುಗೋಲಿನಿಂದ ಕೊಚ್ಚಿ ಕೊಲೆ ಮಾಡಿದ್ದ. ನಂತರ ಈ ಆರೋಪಿ ಸಿದ್ದಾರ್ಥನ 3 ವರ್ಷದ ಸಹೋದರಿ ಅಂಕಿತಾಳ ಮೇಲೂ ಕೊಲೆಗೂ ಯತ್ನಿಸಿದ್ದ. ಆದರೆ, ಸಿದ್ದಾರ್ಥನ ತಾಯಿಯ ಮಧ್ಯಪ್ರವೇಶದಿಂದ ಮಗಳ ಪ್ರಾಣ ಉಳಿದಿತ್ತು. ಈ ಬಗ್ಗೆ ಮುರಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

35 ಸಾಕ್ಷಿಗಳಲ್ಲಿ ಮೂವರು ಮಕ್ಕಳ ಪ್ರತ್ಯೇಕ ಸಾಕ್ಷಿಯಿಂದ ಆರೋಪಿಗೆ ಶಿಕ್ಷೆ ಘೋಷಣೆಯಾಗಿದೆ. ಮಕ್ಕಳು ನ್ಯಾಯಾಧೀಶರ ಮುಂದೆ ನೈಜ ಘಟನೆ ಹೇಳಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಮಂಜುನಾಥ ನಾಯಕ ಅವರು ಆರೋಪಿ ಮೇಲಿನ ಆರೋಪಣೆಗಳು ಸಾಬೀತಾಗಿರುವ ಹಿನ್ನೆಲೆಯಲ್ಲಿ ಫೆಬ್ರವರಿ 13ರಂದು ಆರೋಪಿಗೆ ಜೀವಾವಧಿ ಶಿಕ್ಷೆ ಪ್ರಕಟ ಮಾಡಿದ್ದಾರೆ.

ಸರಕಾರಿ ಅಭಿಯೋಜಕ ನಾರಾಯಣ ಈ ಬಗ್ಗೆ ಮಾಹಿತಿ ನೀಡಿದ್ದು ಬಾಲಕನ ಹತ್ಯೆ ಮಾಡಿದ್ದ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ನ್ಯಾಯಾಲಯದ ಎದುರು ಮನವಿ ಮಾಡಿದ್ದೆವು. ನ್ಯಾಯಾಲಯ ಇದೀಗ ಆರೋಪಿಗೆ ಜೀವಾವಧಿ ಶಿಕ್ಷೆ ಹಾಗೂ ಎಪ್ಪತ್ತೈದು ಸಾವಿರ ರು. ದಂಡ ವಿಧಿಸಿದೆ. 25,000 ಕೊಲೆಯಾದ ಮಗುವಿನ ತಂದೆಗೆ ಪರಿಹಾರ ನೀಡುವಂತೆ ನ್ಯಾಯಾಲಯ ಸೂಚಿಸಿದೆ ಎಂದರು.


Share It

You cannot copy content of this page