ಬೆಂಗಳೂರು: ಮಹಿಳೆಯ ಮೇಲೆ ಅತ್ಯಾಚಾರ ನಡೆಸಿ, ಅಶ್ಲೀಲ ವಿಡಿಯೋ ಚಿತ್ರೀಕರಣ ಮಾಡಿಕೊಂಡು ಬ್ಲಾಕ್ ಮೇಲ್ ಮಾಡಿದ ಆರೋಪದಲ್ಲಿ ಕೇರಳದ ದೇವಸ್ಥಾನದ ಅರ್ಚಕನನ್ನು ಬೆಳ್ಳಂದೂರು ಪೊಲೀಸರು ಬಂಧಿಸಿದ್ದಾರೆ.
ಅರುಣ್ ಎಂಬಾತನೇ ಬಂಧಿತನಾಗಿದ್ದು, ಈತ ಕೇರಳದ ಪೆರುಂಬಟ್ಟುಕರ ದೇವಸ್ಥಾನದಲ್ಲಿ ಅರ್ಚಕನಾಗಿದ್ದ ಎನ್ನಲಾಗಿದೆ. ಮತ್ತೊಬ್ಬ ಆರೋಪಿ ದೇವಸ್ಥಾನದ ಮಖ್ಯ ಅರ್ಚಕ ಉನ್ನಿ ದಾಮೋದರನ್ ತಲೆ ಮರೆಸಿಕೊಂಡಿದ್ದು, ಆತನ ಪತ್ತೆಗೆ ಬೆಳ್ಳಂದೂರು ಪೊಲೀಸರು ಬಲೆ ಬೀಸಿದ್ದಾರೆ.
ಮಾಟ ಮಂತ್ರ ಮಾಡಿಸಿದ್ದಾರೆ ಎಂದು ಅದನ್ನು ಪರಿಹಾರ ಮಾಡಿಕೊಳ್ಳಲು ಮಹಿಳೆ ಕೇರಳದ ದೇವಸ್ಥಾನಕ್ಕೆ ತೆರಳಿದ್ದರು. ಈ ವೇಳೆ ಪರಿಚಯವಾಗಿದ್ದ ಅರುಣ್, ಆಕೆಯ ಬಳಿ ಫೋನ್ ನಂಬರ್ ಪಡೆದು ಆಕೆಗೆ ವಾಟ್ಸಾಪ್ ಕರೆ ಮಾಡುತ್ತಿದ್ದ ಎನ್ನಲಾಗಿದೆ. ವಾಟ್ಸಾಪ್ ಕರೆಯಲ್ಲಿ ಬೆತ್ತಲೆಯಾಗಿ ಆಕೆಯೊಂದಿಗೆ ಸಂಭಾಷಣೆ ಮಾಡುತ್ತಿದ್ದ, ಮಹಿಳೆಗೆ ಮಾಟ ಮಂತ್ರ ಪರಿಹಾರವಾಗಬೇಕಿದ್ದರೆ ನೀನು ಬೆತ್ತಲಾಗು ಎಂದು ಒತ್ತಾಯಿಸಿದ್ದ ಎಂದು ಹೇಳಲಾಗಿದೆ.
ಅನಂತರ ಆಕೆ ಅದಕ್ಕೆ ನಿರಾಕರಿಸಿದಾಗ ಮಾಟದ ಮೂಲಕ ನಿನ್ನ ಗಂಡ ಮತ್ತು ಮಕ್ಕಳನ್ನು ಮಾಟದ ಮೂಲಕವೇ ಸಾಯಿಸುತ್ತೇನೆ ಎಂದು ಬೆದರಿಕೆ ಹಾಕಿದ್ದ. ಮಹಿಳೆಯಿಂದ ೨೪ ಸಾವಿರು ರುಪಾಯಿ ಹಣವನ್ನು ಪಡೆದುಕೊಂಡಿದ್ದ ಆರೋಪಿ ಅನಂತರ ಕಾರಿನಲ್ಲಿ ಆಕೆಯನ್ನು ಬಲವಂತವಾಗಿ ಕರೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿದ್ದ ಎಂದು ಆರೋಪಿಸಲಾಗಿದೆ.