ಬೆಂಗಳೂರು: ಕೊಲ್ಕತ್ತಾಗೆ ತೆರಳಬೇಕಿದ್ದ ಸ್ಪೈಸ್ ಜೆಟ್ ವಿಮಾನ ಬೆಳಗ್ಗೆ 9 ಗಂಟೆಯಿಂದ ಈವರೆಗೆ ಟೇಕಾಪ್ ಆಗದಿರುವುದನ್ನು ಖಂಡಿಸಿ ಪ್ರಯಾಣಿಕರು ಪ್ರತಿಭಟನೆ ನಡೆಸಿದ ಘಟನೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.
ಕೊಲ್ಕಾತ್ತಾಗೆ ತೆರಳಬೇಕಿದ್ದ ಸ್ಪೈಸ್ ಜೆಟ್ ಎಸ್ಜಿ -8531 ವಿಮಾನದಲ್ಲಿ ಪ್ರಯಾಣ ಮಾಡುವ ಸಲುವಾಗಿ ಪ್ರಯಾಣಿಕರು ಬೆಳಗ್ಗೆ 9 ಗಂಟೆ ಸುಮಾರಿಗೆ ಟರ್ಮಿನಲ್ -1 ರಲ್ಲಿ ಕಾಯ್ದು ಕುಳಿತಿದ್ದರು. ಆದರೆ, ಆ ವಿಮಾನ ಈವರೆಗೆ ಟೇಕಾಪ್ ಆಗಿಲ್ಲ. ಇದು ಪ್ರಯಾಣಿಕರ ತಾಳ್ಮೆಯ ಕಟ್ಟೆಯನ್ನು ಹೊಡೆಯುವಂತೆ ಮಾಡಿದೆ.
ಬೆಳಗ್ಗೆ 9 ಗಂಟೆಯಿಂದಲೂ ಆಗ ಬರುತ್ತೆ,. ಈಗ ಹೊರಡುತ್ತೆ ಎಂಬ ಉತ್ತರವನ್ನೇ ಸಿಬ್ಬಂದಿ ನೀಡುತ್ತಿದ್ದು, ಸಿಬ್ಬಂದಿ ವರ್ತನೆ ವಿರುದ್ಧ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಂತಿಮವಾಗಿ ಸಂಜೆ 7 ಗಂಟೆಗೆ ವಿಮಾನ ಹೊರಡಲಿದೆ ಎಂದು ಹೇಳುತ್ತಿದ್ದಾರೆ. ಆಗಲೂ ಇದೇ ರೀತಿ ಆದರೆ, ಗತಿಯೇನು ಎಂದು ಪ್ರಯಾಣಿಕರು ಪ್ರಶ್ನಿಸಿದ್ದಾರೆ.
ಎರಡು ದಿನದ ಹಿಂದಷ್ಟೇ ಸ್ಪೈಸ್ ಜೆಟ್ ವಿಮಾನ 10 ಗಂಟೆ ಕಾಲ ಪ್ರಯಾಣಿಕರನ್ನು ವಿಳಂಬವಾಗಿ ಕರೆದುಕೊಂಡು ಬಂದಿತ್ತು. ದೆಹಲಿಯಿಂದ ಹೊರಟ ವಿಮಾನದಲ್ಲಿ ಪ್ರಯಾಣಿಕರು 10 ಗಂಟೆಗಳ ಕಾಲ ಬಂಧಿಯಾಗಿದ್ದರು. ಈ ಬಗ್ಗೆಯೂ ಪ್ರಯಾಣಿಕರು ಸಂಸ್ಥೆಯ ವಿರುದ್ಧ ದೂರು ನೀಡಿದ್ದರು. ಬೆಂಗಳೂರಿನಿಂದ ಕೊಲ್ಕಾತ್ತಾಗೆ ಹೊರಡಬೇಕಾದ ವಿಮಾನವೂ ವಿಳಂಬವಾಗಿರುವುದು ಪ್ರಯಾಣಿಕರ ಆಕ್ರೋಶವನ್ನು ಹೆಚ್ಚಿಸಿದೆ.

