ಚಿಕ್ಕಮಗಳೂರು: ಕಂದಾಯ ಸಚಿವ ಕೃಷ್ಣ ಬೈರೇಗೌಡ ಚಿಕ್ಕಮಗಳೂರು ಜಿಲ್ಲೆಯಲ್ಲಿ ನೆರೆ ವೀಕ್ಷಣೆ ನಡೆಸಿದ್ದು, ಅಧಿಕಾರಿಗಳಿಗೆ ಬೆವರಿಳಿಸಿದರು.
ಚಿಕ್ಕಮಗಳೂರು ಜಿಲ್ಲೆಯ ಮುಳ್ಳಯ್ಯನಗಿರಿ, ಬಾಬು ಬುಡನ್ಗಿರಿ ಬೆಟ್ಟದ ಸಾಲಿನಲ್ಲಿ ೬ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಕವಿಕಲ್ಗಂಟಿ ಬಳಿ ರಸ್ತೆ ಕುಸಿದಿತ್ತು. ಈ ಆರು ಗ್ರಾಮಗಳಿಗೆ ಸಂಪರ್ಕವೇ ಇಲ್ಲದಂತಾಗಿದ್ದು, ಅದನ್ನು ಶೀಘ್ರವೇ ಸರಿಪಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅನಂತರ ಮೂಡಿಗೆರೆ ತಾಲೂಕಿನ ಚಂಡಗೋಡು ಗ್ರಾಮಕ್ಕೆ ತೆರಳಿ, ಅಲ್ಲಿ ಮಳೆಯಿಂದ ಬಿದ್ದುಹೋಗಿರುವ ಶಾಲೆ ಮತ್ತು ಮನೆಗಳನ್ನು ವೀಕ್ಷಣೆ ಮಾಡಿದರು.
ಫಲಾನುಭವೀಗಳಿಗೆ ಮನೆ ನಿರ್ಮಿಸುವಲ್ಲಿ ಮತ್ತು ಮಳೆಗೆ ಮೊದಲೇ ಶಾಲೆಯನ್ನು ದುರಸ್ತಿ ಮಾಡಿಕೊಡುವಲ್ಲಿ ವಿಫಲರಾದ ಎಂಜಿನಿಯರ್ ಹಾಗೂ ಅಧಿಕಾರಿಗಳನ್ನು ಕೃಷ್ಣ ಬೈರೇಗೌಡ ಸ್ಥಳದಲ್ಲಿಯೇ ತರಾಟೆಗೆ ತೆಗೆದುಕೊಂಡರು.
ಅನಂತರ ಶೀಘ್ರವೇ ಪರಿಹಾರ ಕಾರ್ಯವನ್ನು ಕೈಗೊಳ್ಳುವಂತೆ ಮತ್ತು ಮನೆ ಮತ್ತು ಶಾಲೆಗಳ ನಿರ್ಮಾಣಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದರು. ಈ ವೇಳೆ ಅನೇಕ ಸಂತ್ರಸ್ತರು ಸಚಿವರ ಬಳಿ ತಮ್ಮ ಅಹವಾಲು ಹೇಳಿಕೊಂಡರು.

