ನೆಲಮಂಗಲ: ಭರ್ಜರಿ ಕಾರ್ಯಾಚರಣೆ ನಡೆಸಿರುವ ನೆಲಮಂಗಲ ಪೊಲೀಸರು, ನಾಲ್ವರು ಸರಗಳ್ಳರನ್ನು ಬಂಧನ ಮಾಡಿದ್ದಾರೆ.
ನೆಲಮಂಗಲ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ವಿವಿಧ ಕಳ್ಳತನ ಪ್ರಕರಣಗಳ ಜಾಡು ಹಿಡಿದ ಪೊಲೀಸರು, ನಾಲ್ವರು ಕಳ್ಳರನ್ನು ಬಂಧಿಸಿದ್ದಾರೆ. ಶಿವಕುಮಾರ್, ಅಶೋಕ್, ವಿನೋಧ್, ಸಂತೋಷ್ ಎಂಬ ನಾಲ್ವರು ವಿವಿಧ ಕಳ್ಳತನಗಳಲ್ಲಿ ಭಾಗಿಯಾಗಿದ್ದರು ಎನ್ನಲಾಗಿದೆ.
ನಾಲ್ವರು ಕಳ್ಳರನ್ನು ವಶಪಡಿಸಿಕೊಂಡಿರುವ ಪೊಲೀಸರು, ಅವರಿಂದ ಸುಮಾರು 16 ಲಕ್ಷದ ಮೌಲ್ಯದ ಒಡವೆಗಳು, ಲ್ಯಾಪ್ ಟಾಪ್, ಮೊಬೈಲ್ ಸೇರಿದಂತೆ ವಿವಿಧ ಬೆಲೆಬಾಳುವ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ನೆಲಮಂಗಲ ವ್ಯಾಪ್ತಿಯಲ್ಲಿ ಇತ್ತೀಚೆಗೆ ಸರಗಳ್ಳತನ, ಕಳವು ಪ್ರಕರಣ ಹೆಚ್ಚಾಗುತ್ತಿವೆ ಎಂಬ ಆರೋಪಗಳು ಕೇಳಿಬಂದಿದ್ದವು. ಈ ಬಗ್ಗೆ ಸಾರ್ವಜನಿಕರು ನೀಡಿದ ದೂರಿನ ಅನ್ವಯ, ಸಿಸಿಟಿವಿ ದೃಶ್ಯಾವಳಿಗಳು ಮತ್ತಿತರ ಸಾಕ್ಷ್ಯಗಳನ್ನು ಸಂಗ್ರಹಿಸಿ, ನಾಲ್ವರು ಕಳ್ಳರನ್ನು ಬಂಧನ ಮಾಡಲಾಗಿದೆ.