ಬೆಂಗಳೂರು: ಶಾಸಕರಿಗೆ ಉಚಿತವಾಗಿ ನೀಡುವ ಮೂರು ಟಿಕೆಟ್ ಪಡೆಯುವ ಸಲುವಾಗಿ ಶಾಸಕರ ಆಪ್ತ ಸಹಾಯಕರು ಸ್ಪೀಕರ್ ಕಚೇರಿ ಮುಂದೆ ಪೆರೇಡ್ ನಡೆಸಿದರು.
ನಾಳೆ ನಡೆಯುವ ಚೆನ್ನೈ ಮತ್ತು ಆರ್ಸಿಬಿ ನಡುವಿನ ಪಂದ್ಯ ವೀಕ್ಷಣೆಗೆ ಶಾಸಕರಿಗೆ ತಲಾ ಮೂರು ಟಿಕೆಟ್ ವಿತರಣೆ ಮಾಡಲಾಗುತ್ತಿದೆ. ಕೆಎಸ್ಸಿಎ ಅಧಿಕಾರಿಗಳು ಸ್ಪೀಕರ್ ಕಚೇರಿಯಲ್ಲಿ ಬಂದು ಕುಳಿತು ಟಿಕೆಟ್ ವಿತರಣೆ ಮಾಡುತ್ತಿದ್ದಾರೆ.
ಟಿಕೆಟ್ ಪಡೆಯುವ ಸಲುವಾಗಿ ಬಹುತೇಕ ಶಾಸಕರ ಆಪ್ತ ಸಹಾಯಕರು ಸ್ಪೀಕರ್ ಕಚೇರಿಯ ಮುಂದೆ ಜಮಾಯಿಸಿದ್ದಾರೆ. ಇದ್ದಕ್ಕಿದ್ದಂತೆ ಜನದಟ್ಟಣೆ ಜಾಸ್ತಿಯಾಗಿದ್ದು, ಸರತಿ ಸಾಲಿನಲ್ಲಿ ನಿಂತು ಪಿಎಗಳು ಟಿಕೆಟ್ ಪಡೆದುಕೊಂಡಿದ್ದಾರೆ.
ರಾಜಾಜಿನಗರ ಶಾಸಕ ಸುರೇಶ್ ಕುಮಾರ್ ಮತ್ತು ಬಡವನಗುಡಿ ಶಾಸಕ ರವಿಸುಬ್ರಮಣ್ಯ ಅವರನ್ನು ಹೊರತುಪಡಿಸಿ ಮತ್ತೆಲ್ಲ ಶಾಸಕರು ಕೆಎಸ್ಸಿಎ ಕೊಡುವ ಐಪಿಎಲ್ ಟಿಕೆಟ್ ಪಡೆಯಲು ಮುಂದಾಗಿದ್ದು, ತಮ್ಮ ಆಪ್ತ ಸಹಾಯಕರನ್ನು ಸ್ಪೀಕರ್ ಕಚೇರಿಗೆ ಕಳುಹಿಸಿದ್ದಾರೆ.
ಸ್ಪೀಕರ್ ಕಚೇರಿ ಮುಂದೆ ಟಿಕೆಟ್ ಗಾಗಿ ಕ್ಯೂ ನಿಂತುಕೊಂಡಿರುವ ಶಾಸಕರ ಪಿಎಗಳ ನಡೆಯ ವಿರುದ್ಧ ಮಾಜಿ ಸಿಎಂ ಸದಾನಂದ ಗೌಡ ಕಿಡಿಕಾರಿದ್ದಾರೆ. ಶಾಸಕರಿಗೆ ಕನಿಷ್ಠ ಜ್ಞಾನವಿರಬೇಕು. ಇಂತಹ ಬಿಕ್ಷೆ ಬೇಡುವ ಮನಸ್ಥಿತಿ ಬೇಕಿಲ್ಲ ಎಂದು ಗುಡುಗಿದ್ದಾರೆ.


