ಬೆಂಗಳೂರು : ಎಂಎಸ್ ಎಂಇ ಗಳಿಗೇ ಸಾಮಾನ್ಯ ಕನಿಷ್ಠ ನೀತಿಯನ್ನು ಜಾರಿಗೊಳಿಸಬೇಕು ಎಂದು ಕಾಸಿಯಾ ಅಧ್ಯಕ್ಷ ಎಂ. ಜಿ. ರಾಜಗೋಪಾಲ್ ಮನವಿ ಮಾಡಿಕೊಂಡಿದ್ದಾರೆ.
ಕೇಂದ್ರ ಸಚಿವ ಶೋಭಾ ಕರಂದ್ಲಾಜೆ ಅವರನ್ನು ಭೇಟಿ ಮಾಡಿದ ಅವರು, ಬೃಹತ್ ಕೈಗಾರಿಕೆಗಳು ಮತ್ತು ಐಟಿ ಕಂಪನಿಗಳು ನಿರ್ದಿಷ್ಟ ಅರ್ಹತೆ ಮತ್ತು ಕೌಶಲ್ಯದ ಉದ್ಯೋಗಿಗಳನ್ನು ನೇಮಿಸಿಕೊಳ್ಳುತ್ತಾರೆ. ಆದರೆ ಎಂಎಸ್ಎಂಇಗಳು ಶಾಲೆ ಬಿಟ್ಟ, ಅನಕ್ಷರಸ್ಥ ಮತ್ತು ಕೌಶಲ್ಯಗಳಿಲ್ಲದ ಉದ್ಯೋಗಿಗಳಿಗೆ ಕೆಲಸ ನೀಡಿ ತರಬೇತಿ ನೀಡುತ್ತಿವೆ. ಆದ್ದರಿಂದ 50ಕ್ಕಿಂತ ಕಡಿಮೆ ಉದ್ಯೋಗಿಗಳನ್ನು ಹೊಂದಿರುವ ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳಿಗೆ ಕಾರ್ಮಿಕ ಕಾನೂನುಗಳಿಂದ ವಿನಾಯಿತಿ ನೀಡಬೇಕು ಎಂದು ಮನವಿ ಮಾಡಿದರು.
ಎಂಎಸ್ಎಂಇಗಳನ್ನು ಆದ್ಯತೆಯ ಸಾಲಕ್ಕಾಗಿ ಪರಿಗಣಿಸಲಾಗಿದ್ದರೂ ಸಹ ಬ್ಯಾಂಕ್ಗಳು ವಿಧಿಸುತ್ತಿರುವ ಬಡ್ಡಿ ದರ ಮಧ್ಯಮ ಮತ್ತು ಬೃಹತ್ ಕೈಗಾರಿಕೆಗಳಿಗೆ ನೀಡುವ ಸಾಲದ ಬಡ್ಡಿ ದರಕ್ಕಿಂತ ಅಧಿಕವಾಗಿದ್ದು, ಬಡ್ಡಿ ದರವನ್ನು ಕಡಿಮೆ ಮಾಡಬೇಕು. ಪ್ರಸ್ತುತ ಎನ್ಪಿಎ ಮಾಡದಂಡವು 90 ದಿನಗಳಾಗಿದ್ದು, ಇದನ್ನು 180 ದಿನಗಳಿಗೆ ಏರಿಸಿ ಎಂಎಸ್ಎಂಇಗಳನ್ನು ಮತ್ತಷ್ಟು ಬಲಪಡಿಸಬೇಕು ಎಂದು ಕೇಳಿಕೊಂಡರು.
ಎಂಎಸ್ಎಂಇ ಸಚಿವಾಲಯ ಉದ್ಯಮ ಪ್ರಮಾಣ ಪತ್ರವನ್ನು ಸಾರ್ವತ್ರಿಕವಾಗಿ ಉತ್ಪಾದನೆ, ಸೇವಾ ವಲಯ ಹಾಗೂ ವ್ಯಾಪಾರಗಳಂತಹ ಎಲ್ಲಾ ಕ್ಷೇತ್ರಗಳಿಗೆ ನೀಡುತ್ತಿರುವುದರಿಂದ ಸ್ಪಷ್ಟತೆ ಸಿಗುತ್ತಿಲ್ಲ. ಉದಾಹರಣೆಗೆ ನಿರ್ಮಾಣ ವಲಯವನ್ನು ಸೇವಾ ವಲಯವಾಗಿ ಪರಿಗಣಿಸಿ ಪ್ರಮಾಣ ಪತ್ರವನ್ನು ನೀಡಲಾಗುತ್ತಿದೆ.
ಇದರಿಂದಾಗಿ ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳಿಗೆ ಮೀಸಲಾದ ಎಂಎಸ್ಇಎಫ್ಸಿ ಕೌನ್ಸಿಲ್ನಲ್ಲಿ ಹೆಚ್ಚಿನ ಸಂಸ್ಥೆಗಳು ನಿರ್ಮಾಣ ವಲಯಕ್ಕೆ ಸೇರಿದವು ಇರುತ್ತವೆ. ಆಗ ಉತ್ಪಾದನಾ ವಲಯಕ್ಕೆ ಸಂಬಂಧಿಸಿದ ಸಂಸ್ಥೆಗಳಿಗೆ ಹೆಚ್ಚಿನ ಆದ್ಯತೆ ಸಿಗುವುದಿಲ್ಲ. ಆದ್ದರಿಂದ ಉದ್ಯಮ ಪ್ರಮಾಣ ಪತ್ರವನ್ನು ನೀಡುವಾಗ, ಹೆಚ್ಚು ಸ್ಪಷ್ಟತೆ ಹೊಂದಲು ವರ್ಗವಾರು ಸೂಚ್ಯಂಕವನ್ನು ರಚಿಸಬೇಕು ಎಂದು ಮನವಿ ಮಾಡಿದರು.