ಬೆಳಗಾವಿ : ಮಾಟ ಮಂತ್ರ ಮಾಡಿಸಿದ್ದಾರೆ ಎಂದು ಕೊಂಡು ತನ್ನೆರಡು ಮಕ್ಕಳಿಗೆ ವಿಷ ಕುಡಿಸಿ ಕೊಂದಿದ್ದ ತಂದೆಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
ಪೊಲೀಸ್ ತನಿಖೆ ಸಾಕ್ಷಾಧಾರ ಹಾಗೂ ವಾದವನ್ನು ಆಲಿಸಿದ 6ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ಆರೋಪಿಗೆ ಜೀವಾವಧಿ ಶಿಕ್ಷೆ ಹಾಗೂ 20,000 ದಂಡವನ್ನು ವಿಧಿಸಿ ಆದೇಶ ಮಾಡಿದೆ. ಆರೋಪಿತನಿಗೆ ಶಿಕ್ಷೆ ಕೊಡಿಸುವಲ್ಲಿ ಶ್ರಮಿಸಿದ ಎಪಿಎಂಸಿ ಠಾಣೆ ಪಿಐ ಮಂಜುನಾಥ ಹಿರೇಮಠ ಹಾಗೂ ತನಿಖಾ ಸಹಾಯಕ ವೀರಭದ್ರ ಬೂದನವರ ರವರ ಕಾರ್ಯವನ್ನು ಬೆಳಗಾವಿ ನಗರ ಪೊಲೀಸ್ ಆಯುಕ್ತರಾದ ಯಡಾ ಮಾರ್ಟಿನ್ ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಜುಲೈ 2021 ರಲ್ಲಿ ಎಪಿಎಂಸಿ ಪೊಲೀಸ್ ಠಾಣೆ ವ್ಯಾಪ್ತಿಯ ರಾಮನಗರ 2ನೇ ಕ್ರಾಸ್, ಕಂಗ್ರಾಳಿ ಕೆಎಚ್ ಗ್ರಾಮದ ತಮ್ಮ ಮನೆಯ ಮುಂದೆ ಯಾರೋ ಮಾಟಮಂತ್ರ ಮಾಡಿಸಿ ಇಟ್ಟಿರುವ ಬಗ್ಗೆ ಮನನೊಂದ ಆರೋಪಿ ಅನಿಲ್ ಚಂದ್ರಕಾಂತ, ತನ್ನ ಮಕ್ಕಳಾದ ಅಂಜಲಿ(8) ಮತ್ತು ಅನನ್ಯ(4) ಎಂಬ ತನ್ನ ಎರಡೂ ಹೆಣ್ಣು ಮಕ್ಕಳಿಗೆ ವಿಷ ಕುಡಿಸಿ ಕೊಲೆಗೈದಿದ್ದ.
ಈ ಬಗ್ಗೆ ಆತನ ವಿರುದ್ಧ ಅವನ ಹೆಂಡತಿ ಜಯಾ ಬಾಂದೇಕರ್ ದೂರು ನೀಡಿದ್ದು, ದೂರನ್ನು ಆಧರಿಸಿ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕೊಂಡು ಆತನ ವಿರುದ್ಧ ನ್ಯಾಯಾಲಯಕ್ಕೆ ಆಗಿನ ತನಿಖಾಧಿಕಾರಿ ಪೊಲೀಸ್ ಇನ್ಸ್ಪೆಕ್ಟರ್ ಮಂಜುನಾಥ ಹಿರೇಮಠ್ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದಲ್ಲಿ ಸರಕಾರಿ ಅಭಿಯೋಜಕರಾದ ನಸ್ರೀನ ಬಂಕಾಪುರೆ ಸಾರ್ವಜನಿಕ ವಾದ ಮಂಡಿಸಿದ್ದರು.
ಪ್ರಕರಣದ ಹಿನ್ನೆಲೆ: ಆರೋಪಿ ಅನೀಲ ಚಂದ್ರಕಾಂತ ಬಾಂದೇಕರ ತನ್ನ ಮನೆ ಮಾರಾಟ ಮಾಡಲು ಮುಂದಾಗಿದ್ದ, ಆದರೆ ಖರೀದಿಗೆ ಯಾರು ಬರದ ಕಾರಣ ಬೇಜಾರು ಮಾಡಿಕೊಂಡಿದ್ದ. ಆತನಿಗೆ ರಾತ್ರಿ ಕನಸಿನಲ್ಲಿ ತನ್ನ ಇಬ್ಬರೂ ಹೆಣ್ಣು ಮಕ್ಕಳನ್ನು ಕೊಂದು, ರಕ್ತವನ್ನು ಶಿವಲಿಂಗಕ್ಕೆ ಹಾಕಿದರೆ ತನ್ನ ಮನೆ ಮಾರಾಟ ಆಗುತ್ತದೆ ಹಾಗೂ ಎಲ್ಲ ಕೆಲಸದಲ್ಲಿ ಯಶಸ್ಸು ಆಗುತ್ತದೆ ಎಂಬ ಕನಸು ಬೀಳುತ್ತಿತ್ತು. ಅದನ್ನು ನಂಬಿಕೊಂಡು ತನ್ನ ಮಕ್ಕಳಿಗೆ ಫಿನಾಯಿಲ್ ಕುಡಿಸಿ, ಬಾಯಿ ಒತ್ತಿ ಹಿಡಿದು ಕೊಲೆ ಮಾಡಿ ಬ್ಲೇಡಿನಿಂದ ತನ್ನ ರಕ್ತವನ್ನು ಜಗಲಿಯಲ್ಲಿದ್ದ ಶಿವಲಿಂಗಕ್ಕೆ ಹಾಕಿದ್ದ.