ಪ್ರಜ್ವಲ್ ಪ್ರಕರಣದ ಸಂತ್ರಸ್ತರಿಗೆ ನೆರವು ನೀಡಲು ಹೋರಾಟಗಾರರ ಮನವಿ
ಬೆಂಗಳೂರು: ಪ್ರಜ್ವಲ್ ಪ್ರಕರಣದಲ್ಲಿ ಅನ್ಯಾಯಕ್ಕೊಳಗಾಗಿರುವ ಹಾಸನ ಜಿಲ್ಲೆಯ ಸಂತ್ರಸ್ತರಿಗೆ ನೆರವು ನೀಡುವಂತೆ ಹೋರಾಟಗಾರರ ನಿಯೋಗ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿಕೊಂಡಿದೆ.
ಮಂಗಳವಾರ ಸಂಜೆ ಸಿಎಂ ಸಿದ್ದರಾಮಯ್ಯ ನಿವಾಸದಲ್ಲಿ ಭೇಟಿ ಮಾಡಿದ, ಹೋರಾಟಗಾರರ ನಿಯೋಗ ಪ್ರಜ್ವಲ್ ರೇವಣ್ಣ ಅವರಿಂದ ಹಾಸನ ಜಿಲ್ಲೆಯ ಅನೇಕ ಹೆಣ್ಣುಮಕ್ಕಳು ಅನ್ಯಾಯಕಗಕೊಳಗಾಗಿದ್ದಾರೆ. ಪೆನ್ ಡ್ರೈವ್ ನಲ್ಲಿರುವ ವಿಡಿಯೋದಲ್ಲಿರುವ ಸಂತ್ರಸ್ತೆಯ ಬದುಕು ಮೂರಾಬಟ್ಟೆಯಾಗಿದೆ. ಹೀಗಾಗಿ, ಅವರೆಲ್ಲರಿಗೂ ನ್ಯಾಯ ಒದಗಿಸುವ ಕೆಲಸವನ್ನು ಸರಕಾರ ಮಾಡಬೇಕು ಎಂದು ಹೋರಾಟಗಾರರು ಒತ್ತಾಯಿಸಿದರು.
ಡಾ. ರೂಪಾ ಹಾಸನ್ ನೇತೃತ್ವದಲ್ಲಿ ಹೋರಾಟಗಾರರು, ಸಾಹಿತಿಗಳು ಮತ್ತು ಪ್ರಗತಿಪರ ಚಿಂತಕರ ನಿಯೋಗ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿತ್ತು. ಈ ವೇಳೆ ಪ್ರಜ್ವಲ್ ರೇವಣ್ಣ ವಿರುದ್ಧ ಸೂಕ್ತ ಕ್ರಮಕ್ಕೆ ಒತ್ತಾಯಿಸಿದರು. ಪ್ರಗತಿಪರ ಚಿಂತಕರು, ಮಹಿಳಾ ಹೋರಾಟಗಾರರು ಸೇರಿದಂತೆ ವಿವಿಧ ಸಂಘಟನೆಗಳ ಒಕ್ಕೂಟ ಪ್ರಜ್ವಲ್ ರೇವಣ್ಣ ಬಂಧನಕ್ಕೂ ಮುನ್ನ ಬೃಹತ್ ಹೋರಾಟ ಸಂಘಟನೆ ಮಾಡಿದ್ದರು.
ಹಾಸನದಲ್ಲಿ ನಡೆದ ಬೃಹತ್ ಪ್ರತಿಭಟನೆಯಲ್ಲಿ ಸಾವಿರಾರು ಜನ ಭಾಗವಹಿಸಿದ್ದು, ಈ ಪ್ರತಿಭಟನೆಯ ಮರುದಿನವೇ ಪ್ರಜ್ವಲ್ ಬಂಧನ ಮಾಡಲಾಗಿತ್ತು. ಇದೀಗ ನಿಯೋಗ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, ಮನವಿ ಸಲ್ಲಿಸಿದ್ದು, ಪ್ರಜ್ವಲ್ ಪ್ರಕರಣ ಮತ್ತಷ್ಟು ಗಂಭೀರವಾಗಿ ಬದಲಾಗಲಿದೆ ಎನ್ನಬಹುದು.


