ಬೆಂಗಳೂರು: ಕಾಂಗ್ರೆಸ್ ಸರಕಾರ ನೀಡುತ್ತಿರುವ ಗ್ಯಾರಂಟಿಗಳ ಲಾಭ ಪಡೆಯುತ್ತಿರುವವರ ಮನದಾಳದ ಮಾತುಗಳನ್ನು ಕೇಳುವ ವಿನೂತನ ಪ್ರಯತ್ನವನ್ನು ಪದ್ಮನಾಭ ನಗರ ವಿಧಾನಸಭಾ ಕ್ಷೇತ್ರದ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಪ್ರಮೋದ್ ಶ್ರೀನಿವಾಸ್ ನಡೆಸಿದ್ದಾರೆ.
ಇಂದು ಕುಮಾರಸ್ವಾಮಿ ಲೇಔಟ್ ವ್ಯಾಪ್ತಿಯ ಗ್ಯಾರಂಟಿ ಫಲಾನುಭವಿಗಳ ಜತೆ ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಗ್ಯಾರಂಟಿಗಳಿಂದ ಅವರ ಜೀವನ ಬದಲಾವಣೆ ಹೇಗೆ ಆಗಿದೆ ಎಂಬ ಮಾಹಿತಿಯನ್ನು ಕಾರ್ಯಕ್ರಮದಲ್ಲಿ ಪಡೆದುಕೊಳ್ಳಲಾಯಿತು. ಪ್ರತಿ ಶನಿವಾರ ಇಂತಹ ಸಂವಾದ ಕಾರ್ಯಕ್ರಮ ನಡೆಸಲು ತೀರ್ಮಾನಿಸಲಾಗಿದ್ದು, ಫಲಾನುಭವಿಗಳ ಜಾಗಕ್ಕೆ ತೆರಳಿ ಸಂವಾದ ನಡೆಸಲಾಗುತ್ತದೆ ಎಂದು ಪ್ರಮೋದ್ ಶ್ರೀನಿವಾಸ್ ತಿಳಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗ್ಯಾರಂಟಿ ಸೌಲಭ್ಯಗಳು ಹೆಚ್ಚು ಹೆಚ್ಚು ಜನರಿಗೆ ತಲುಪುವಂತೆ ನೋಡಿಕೊಳ್ಳುವ ಕೆಲಸ ಮಾಡಲಾಗುತ್ತದೆ. ಪ್ರತಿ ಭಾನುವಾರ ಶಿಬಿರಗಳನ್ನು ಆಯೋಜಿಸಿದ್ದು, ಅಲ್ಲಿ ಫಲಾನುಭವಿಗಳ ಆಯ್ಕೆಗೆ ಅಗತ್ಯವಾದ ಕೆಲ ಸೌಲಭ್ಯ ಕಲ್ಪಿಸಲಾಗುತ್ತದೆ ಎಂದರು.
ಭಾನುವಾರ ಹೊಸಕೆರೆಹಳ್ಳಿ ಬಸ್ ನಿಲ್ದಾಣ ಮತ್ತು ಮೂಕಾಂಬಿಕಾ ನಗರ ಸರ್ಕಲ್ ನಲ್ಲಿ ಗ್ಯಾರಂಟಿ ಅನುಷ್ಠಾನ ಶಿಬಿರವನ್ನು ಆಯೋಜಿಸಲಾಗಿದೆ. ಇದರಲ್ಲಿ ಮಾಜಿ ಬಿಬಿಎಂಪಿ ಸದಸ್ಯ ನಾರಾಯಣ್ ಸೇರಿದಂತೆ ಅನೇಕ ಮುಖಂಡರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಪ್ರಮೋದ್ ಶ್ರೀನಿವಾಸ್ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾರ್ಯಕ್ರಮದಲ್ಲಿ ಅನೇಕ ಫಲಾನುಭವಿಗಳು ತಮಗೆ ಗ್ಯಾರಂಟಿ ಯೋಜನೆಯಿಂದಾದ ಲಾಭದ ಬಗ್ಗೆ ಅನಿಸಿಲೆ ಹಂಚಿಕೊಂಡರು. ಪ್ರತಿ ತಿಂಗಳು ತಮಗೆ ಐದರಿಂದ ಏಳು ಸಾವಿರ ಉಳಿತಾಯ ಆಗಲಿದ್ದು, ಇದರಿಂದ ನಮ್ಮ ಜೀವನಮಟ್ಟ ಸುಧಾರಿಸಿದೆ ಎಂದು ತಿಳಿಸಿಕೊಂಡರು.