ವಯನಾಡು: ವಯನಾಡು ಗುಡ್ಡ ಕುಸಿತ ದುರಂತದ ಸ್ಥಳಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದ್ದು, ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ.
ನವದೆಹಲಿಯಿಂದ ವಿಮಾನದ ಮೂಲಕ ಕಣ್ಣೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೇರಳ ರಾಜ್ಯಪಾಲ ಆರೀಪ್ ಮತ್ತು ಸಿಎಂ ಪಿಣರಾಯಿ ವಿಜಯನ್ ಸ್ವಾಗತಿಸಿದರು. ಅನಂತರ ಅಲ್ಲಿಂದ ಸೇನಾ ಹೆಲಿಕ್ಯಾಪ್ಟರ್ ಮೂಲಕ ಮೋದಿ, ವಯನಾಡು ದುರಂತದ ಸ್ಥಳ ವೀಕ್ಷಣೆ ಮಾಡಲಿದ್ದಾರೆ.
ವಯನಾಡು ದುರಂತದಲ್ಲಿ ಸತ್ತವರ ಸಂಖ್ಯೆ ಈವರೆಗೆ 400 ಕ್ಕೂ ಹೆಚ್ಚಿದ್ದು, ಇನ್ನೂ ಸುಮಾರು 250 ಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದಾರೆ. ನಾಪತ್ತೆಯಾದವರ ಶವಕ್ಕಾಗಿ ಶೋಧ ಕಾರ್ಯ ಮುಂದುವರಿದಿದೆ. ಈ ಹಿನ್ನೆಲೆಯಲ್ಲಿ ನರೇಂದ್ರ ಮೋದಿ ಅವರ ಭೇಟಿ ಮಹತ್ವ ಪಡೆದುಕೊಂಡಿದೆ.
ವಯನಾಡು ಭೇಟಿಗೆ ನರೇಂದ್ರ ಮೋದಿ ತೀರ್ಮಾನಿಸುತ್ತಿದ್ದಂತೆ ವಿಪಕ್ಷ ನಾಯಕ ರಾಹುಲ್ ಗಾಂಧಿ, ಪ್ರಧಾನಿ ಅವರ ನಡೆಯನ್ನು ಸ್ವಾಗತಿಸಿದ್ದರು. ವಯನಾಡು ದುರಂತ ಸ್ಥಳಕ್ಕೆ ಆಗಮಿಸುವುದಾಗಿ ತಿಳಿಸಿದ ಮೋದಿಯವರಿಗೆ ಧನ್ಯವಾದಗಳು. ಅಲ್ಲಿನ ಸಂತ್ರಸ್ತರಿಗೆ ಸರಕಾರ ಅಗತ್ಯ ನೆರವು ನೀಡಬೇಕು ಎಂದು ಒತ್ತಾಯಿಸಿದರು.
