ರಾಮನಗರ : ರಾಮನಗರ ಜಿಲ್ಲೆಗೆ ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣ ಮಾಡುವ ಕುರಿತು ಸಂಸದ ಡಾ.ಸಿಎನ್ ಮಂಜುನಾಥ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಇದು ಸಮಂಜಸವಲ್ಲ ಎಂದು ಹೇಳಿದ್ದಾರೆ.
ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಮಂಜುನಾಥ್ ಯಾವುದೇ ಕಾರಣಕ್ಕೂ ರಾಮನಗರ ಬೆಂಗಳೂರಿಗೆ ಸೇರಬಾರದು, ಹೀಗೆ ಆದರೆ ಮುಂದೊಂದು ದಿನ ಕೋಲಾರವನ್ನು ಬೆಂಗಳೂರು ಪೂರ್ವಕ್ಕೆ ಸೇರಿಸುವಂತೆ ಪ್ರಸ್ತಾಪ ಬರುತ್ತದೆ ಎಂದು ಹೇಳಿದ್ದಾರೆ.
ಚಿಕ್ಕಬಳ್ಳಾಪುರವನ್ನು ಬೆಂಗಳೂರು ಉತ್ತರಕ್ಕೂ ಹಾಗೂ ಸುತ್ತಮುತ್ತಲ ಜಿಲ್ಲೆಗಳನ್ನು ನಗರಕ್ಕೆ ಸೇರಿಸುವಂತೆ ಪ್ರಸ್ತಾವನೆಗಳು ಬರುತ್ತವೆ. ಹೀಗಾಗಿ ಇದೊಂದು ಅವೈಜ್ಞಾನಿಕ ಯೋಜನೆ ಎಂದು ಪತ್ರದಲ್ಲಿ ಮಂಜುನಾಥ್ ಉಲ್ಲೇಖಿಸಿದ್ದಾರೆ.
ರಾಮನಗರಕ್ಕೆ ಐತಿಹಾಸಿಕ, ಪೌರಾಣಿಕ, ಧಾರ್ಮಿಕ ಹಾಗೂ ಇತಿಹಾಸದ ಭಾವನೆಗಳಿದೆ. ಕ್ಲೋಸ್ಪೇಟೆಗೆ ರಾಮನಗರ ಎಂದು ನಾಮಕರಣ ಮಾಡಿದವರು ಮಾಜಿ ಮುಖ್ಯಮಂತ್ರಿಗಳಾದ ಕೆಂಗಲ್ ಹನುಮಂತಯ್ಯನವರು. ಧಾರ್ಮಿಕ ಗುರುಗಳಾದ ಶ್ರೀ ಶ್ರೀ ಬಾಲಗಂಗಾಧರನಾಥ ಮಹಾಸ್ವಾಮಿಗಳು, ಸಿದ್ಧಗಂಗಾ ಮಠದ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳು ಇದೇ ರಾಮನಗರ ಜಿಲ್ಲೆಯವರು ಎಂದು ಮಂಜುನಾಥ್ ಪತ್ರದಲ್ಲಿ ವಿವರಿಸಿದ್ದಾರೆ.
ಬೆಂಗಳೂರು ನಿರ್ಮಾತೃ ಕೆಂಪೇಗೌಡರು ಇದೇ ಜಿಲ್ಲೆಯವರು.ರಾಮನಗರ ಜಿಲ್ಲೆಯು ರಾಜ್ಯಕ್ಕೆ ಐದು ಬಾರಿ ಮುಖ್ಯಮಂತ್ರಿಗಳನ್ನು ಕೊಟ್ಟಿದೆ. ಅದರಲ್ಲಿ ಹೆಚ್.ಡಿ.ದೇವೇಗೌಡರು ದೇಶದ ಪ್ರಧಾನಿಗಳಾಗಿಯೂ ಕಾರ್ಯನಿರ್ವಹಣೆ ಮಾಡಿದ್ದಾರೆ.
ರಾಮನಗರ ಕಣ್ವ ಮಹರ್ಷಿಯ ನಾಡು. ರಾಮಾಯಾಣದಲ್ಲಿ ಶ್ರೀ ರಾಮಚಂದ್ರನು ರಾಮಗಿರಿಯಲ್ಲಿ ನೆಲೆಸಿದ್ದನು ಎಂಬ ಉಲ್ಲೇಖವಿದೆ. ರಾಮನಗರಕ್ಕೆ ರೇಷ್ಮೆ ನಾಡು ಎಂಬ ಹೆಸರು ಕೂಡ ಇದೆ.ರಾಮನಗರ ಹೆಸರು ಹೇಳುತ್ತಿದ್ದಂತೆ ಜಾನಪದ ಲೋಕ, ಚನ್ನಪಟ್ಟಣದ ಬೊಂಬೆಗಳು, ಅರ್ಕಾವತಿ, ಕಾವೇರಿ, ಶಿಂಷಾ, ಕಣ್ವ ನದಿಗಳು, ಮಂಚನಬೆಲೆ, ಬೈರಮಂಗಲ, ಹಾರೋಬೆಲೆ, ಕಣ್ವ ಹಾಗೂ ಇಗ್ಗಲೂರು ಜಲಾಶಯಗಳು.
ರಾಮಗಿರಿ, ಕೃಷ್ಣಗಿರಿ, ಶ್ರೀ ರೇವಣ್ಣ ಸಿದ್ದೇಶ್ವರ ಬೆಟ್ಟ, ಯರಿರಾಜಗಿರಿ, ಸೋಮಗಿರಿ, ಸಿಡಿಲಕಲ್ಲು, ಜಲಸಿದ್ದೇಶ್ವರ ಬೆಟ್ಟ, ಕಬ್ಬಾಳು ದುರ್ಗ, ಸಾವನದುರ್ಗ, ಮೇಕೆದಾಟು ಮುಂತಾದವುಗಳು ನೆನಪಿಗೆ ಬರುತ್ತದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಗೆ ರಾಮನಗರ ಎಂಬ ಹೆಸರೇ ಸರಿಯಾಗಿದೆ. ರಾಮನಗರ ರಕ್ಷಾಕವಚದಂತಿದೆ ಎಂದು ತಿಳಿಸಿದ್ದಾರೆ.
ಡಿ.ಕೆ. ಶಿವಕುಮಾರ್ ಬೇಕಾದರೆ ಬ್ರಾಂಡ್ ರಾಮನಗರ ಎಂದು ಹೊಸ ಯೋಜನೆ ತರಲಿ, ಅದು ಬಿಟ್ಟು ರಾಮನಗರದ ಮರುನಾಮಕರಣ ಹಾಗೂ ಬೆಂಗಳೂರು ದಕ್ಷಿಣ ಜಿಲ್ಲೆಗೆ ಸೇರಿಸುವ ಪ್ರಸ್ತಾವನೆಯನ್ನು ಕೈಬಿಡಬೇಕು ಎಂದು ಸಂಸದ ಮಂಜುನಾಥ್ ಪತ್ರದಲ್ಲಿ ಆಗ್ರಹಿಸಿದ್ದಾರೆ.
