ಚಿತ್ರದುರ್ಗ: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಅರೋಪಿ ನಂಬರ್ 4 ಆಗಿರುವ ರಘು ಮೇಲೆ ಮೃತನ ಮೈ ಮೇಲಿದ್ದ ಚಿನ್ನಾಭರಣಗಳನ್ನು ಕದ್ದು ತನ್ನ ಪತ್ನಿಗೆ ನೀಡಿದ ಆರೋಪವೂ ಇದೆ. ಆದರೆ ಅದು ಸುಳ್ಳು ಎನ್ನುತ್ತಾರೆ ರಘು ಪತ್ನಿ ಸಹನಾ.
ಈ ಬಗ್ಗೆ ಬಂಧಿತ ಆರೋಪಿ ರಘು ಪತ್ನಿ ಸಹನಾ ಅವರು ಹೀಗೆ ಹೇಳಿದ್ದಾರೆ: “ಪೊಲೀಸರು ಮನೆಗೆ ಬಂದು ಮಹಜರ್ ನಡೆಸಿದಾಗ ಯಾವುದೇ ಒಡವೆ ಸಿಕ್ಕಿಲ್ಲ ಮತ್ತು ಕೊಲೆಗಾಗಿ ರಘುಗೆ 10 ಲಕ್ಷ ರೂ. ನೀಡಿದ್ದಾರೆ ಅನ್ನೋದನ್ನು ತಾನು ಕೇಳಿಸಿಕೊಂಡಿದ್ದೇನೆಯೇ ಹೊರತು ಮನೆಯಲ್ಲಿ ಹಣ ಸಿಕ್ಕಿತು ಅಂತ ಹೇಳುತ್ತಿರುವುದು ಸತ್ಯಕ್ಕೆ ದೂರ ಎಂದು ಸಹನಾ ಹೇಳುತ್ತಾರೆ. ತನ್ನ ಪತಿ ಟೂರಿಸ್ಟ್ ಗಾಡಿ ಓಡಿಸುತ್ತಾರೆ ಎನ್ನುವ ಸಹನಾ ಅವರು ಹೊರಗಡೆ ಹೋಗುವಾಗ ಎಲ್ಲಿಗೆ ಹೋಗುತ್ತಿದ್ದೇನೆ ಅಂತ ಪತ್ನಿಗೆ ತಿಳಿಸಲ್ವಂತೆ, ಅವರು ರಾತ್ರಿ ಬರೋದು ತಡವಾದಾಗ ಇವರೇ ಫೋನ್ ಮಾಡಿ ಎಲ್ಲಿದ್ದಾರೆ ಅಂತ ವಿಚಾರಿಸುತ್ತಾರಂತೆ.
ದರ್ಶನ್ ಕಟ್ಟಾಭಿಮಾನಿಯಾಗಿರುವ ರಘು ಚಿತ್ರದುರ್ಗ ಜಿಲ್ಲೆ ದರ್ಶನ್ ಅಭಿಮಾನಿಗಳ ಸಂಘದ ಅಧ್ಯಕ್ಷರೂ ಆಗಿದ್ದಾರೆ. ದರ್ಶನ್ ಮೇಲಿನ ಅಭಿಮಾನಕ್ಕೆ ಅವರು ಅವತ್ತು ಮನೆಯಿಂದ ಹೋದರು, ಕೊಲೆ ಮಾಡಬೇಕಿದೆ ಅಂತ ಹೇಳಿದ್ದರೆ ರಘು ಹೋಗುತ್ತಿದ್ದರೆ? ಎಂದು ಸಹನಾ ಕೇಳುತ್ತಾರೆ.

