ಚಿತ್ರದುರ್ಗ: ಡಿ ಬಾಸ್ ಮೇಲಿನ ವ್ಯಾಮೋಹಕ್ಕೆ ಕೊಲೆ ಪ್ರಕರಣದ ಆರೋಪಿಯಾಗಿ ಬಂಧಿತನಾದ ಅನು ಕುಮಾರ್ ತಂದೆ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ನಡೆದಿದೆ.
ಚಿತ್ರದುರ್ಗದ ಅನುಕುಮಾರ್ ಎಂಬ ಆರೋಪಿ ನೆನ್ನೆ ತಾನೇ ಪೊಲೀಸರ ಮುಂದೆ ಶರಣಾಗಿದ್ದ. ಶರಣಾದ ಸುದ್ದಿ ತಿಳಿದು ಆತಮ ತಂದೆ ಚಂದ್ರಪ್ಪ(60) ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಮಗ ಕೊಲೆ ಪ್ರಕರಣದಲ್ಲಿ ಭಾಗಿಯಾದ ವಿಷಯ ತಿಳಿದು ಸಿಹಿ ನೀರು ಹೊಂಡದ ಬಳಿ ಕುಸಿದು ಬಿದ್ದ ಚಂದ್ರಪ್ಪ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಅವರು ಸಾವನ್ನಪ್ಪಿದರು ಎನ್ನಲಾಗಿದೆ.
ರೇಣುಕಾ ಸ್ವಾಮಿಯನ್ನು ಎಳೆದು ತರಲು ದರ್ಶನ್ ತನ್ನ ಅಭಿಮಾನಿ ಸಂಘದ ಅಧ್ಯಕ್ಷ ರಘು ಎಂಬುವವನಿಗೆ ಫರ್ಮಾನು ಹೊರಡಿಸಿದ್ದರು. ಅದನ್ನು ಪಾಲಿಸಲು ಹೋಗಿ, ಪಾಪದ ಅನುಕುಮಾರ್ ನನ್ನು ಆತ ಜತೆಗೆ ಹಾಕಿಕೊಂಡಿದ್ದ. ಡಿ ಬಾಸ್ ಮುಂದೆ ಫೋಸ್ ಕೊಡಲು ರೇಣುಕಾ ಸ್ವಾಮಿಯನ್ನು ಚಿತ್ರದುರ್ಗದಿಂದ ಬೆಂಗಳೂರಿಗೆ ಎಳೆತಂದಿದ್ದ ಆರೋಪಿಗಳು ಅಲ್ಲಿ ನಡೆದಿದ್ದು ನೋಡಿ ದಂಗಾಗಿದ್ದರು. ಆದರೆ, ಕೊಲೆಯಾಗಿ ಹೋಗಿತ್ತು.
ಪೊಲೀಸರು ಕಿಡ್ನಾಪ್ ಮಾಡಿದವರನ್ನು ಆರೋಪಿಗಳನ್ನಾಗಿಸಿ, ಅವರ ಪತ್ತೆಗೆ ಮುಂದಾಗಿದ್ದರು. ಉಳಿದೆಲ್ಲ ಆರೋಪಿಗಳು ಸೆರೆ ಸಿಕ್ಕಿದ್ದರೂ, ಊರಿಗೆ ವಾಪಸ್ ಆಗಿದ್ದ ಅನು ಕುಮಾರ್, ರವಿ ಪೊಲೀಸರ ಮುಂದೆ ಬಂದು ಶರಣಾಗಿದ್ದರು. ಈ ವಿಷಯ ತಿಳಿದು ಆತನ ತಂದೆ ಮೃತಪಟ್ಟಿದ್ದಾರೆ. ಇದೀಗ ಆತನ ಇಡೀ ಕುಟುಂಬ ದರ್ಶನ್ ಮೇಲೆ ಆಕ್ರೋಶ ವ್ಯಕ್ತಪಡಿಸಿದೆ.

