ಅಪರಾಧ ಸಿನಿಮಾ ಸುದ್ದಿ

ರೇಣುಕಾಸ್ವಾಮಿ ಕೊಲೆ ಕೇಸ್: ತಾನಾಗಿಯೇ ಹೋಗಿ ಶರಣಾದ ಎ-8 ಆರೋಪಿ!

Share It

ಚಿತ್ರದುರ್ಗ : ನಟ ದರ್ಶನ್ ಮತ್ತು ಗ್ಯಾಂಗ್​ನಿಂದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಇಲ್ಲಿಯವರೆಗೂ ಬರೋಬ್ಬರಿ 17ರ ಪೈಕಿ 13 ಜನರನ್ನು ಬಂಧಿಸಲಾಗಿದೆ. ಇನ್ನು ನಾಲ್ವರು ಘಟನೆ ಬಳಿಕ ನಾಪತ್ತೆ ಆಗಿದ್ದರು. ಇದೀಗ ಆ ನಾಲ್ವರ ಪೈಕಿ ಓರ್ವ ಇಂದು ತಾನಾಗಿಯೇ ಬಂದು ಪೊಲೀಸರಿಗೆ ಶರಣಾಗಿದ್ದಾರೆ.

ಕೇಸ್​ನ 8ನೇ ಆರೋಪಿ ಆಗಿರುವ ಆಟೋ ಚಾಲಕ ರವಿಶಂಕರ್​​ ಇಂದು ಚಿತ್ರದುರ್ಗ ಡಿವೈಎಸ್​ಪಿ ಕಚೇರಿಗೆ ಶರಣಾಗಿದ್ದಾರೆ.

ಡಿವೈಎಸ್​ಪಿ ದಿನಕರ್ ಎದುರು 8ನೇ ಆರೋಪಿ ರವಿಶಂಕರ್ ಶರಣಾಗಿದ್ದಾನೆ. ಘಟನೆ ಬಗ್ಗೆ ಟ್ಯಾಕ್ಸಿ ಚಾಲಕರ ಸಂಘದ ಮುಖಂಡರ ಬಳಿ ರವಿ ವಿಷಯ ತಿಳಿಸಿದ್ದಾರೆ. ಬಾಡಿಗೆಗೆಂದು ಕರೆದೊಯ್ದು ಸಂಕಷ್ಟಕ್ಕೆ ಸಿಲುಕಿಸಿದ್ದಾರೆಂದು ಅಳಲು ತೋಡಿಕೊಂಡಿದ್ದಾರೆ. ಹೀಗಾಗಿ ಟ್ಯಾಕ್ಸಿ ಸಂಘದವರ ಸಹಾಯ ಕೇಳಿಬಂದಿದ್ದ ಚಾಲಕ ರವಿಶಂಕರ್​​ನನ್ನು ಡಿವೈಎಸ್​ಪಿ ಕಚೇರಿಗೆ ಕರೆತಂದು ಟ್ಯಾಕ್ಸಿ ಸಂಘದ ಮುಖಂಡರು ಶರಣಾಗತಿ ಮಾಡಿಸಿದ್ದಾರೆ.

ಬಾಡಿಗೆಗೆಂದು ಹೇಳಿ ಜಗದೀಶ್, ರಾಘವೆಂದ್ರ ಕರೆಸಿಕೊಂಡಿದ್ದರು. ಆಟೋದಲ್ಲಿ ರೇಣುಕಾಸ್ವಾಮಿ ಕರೆತಂದಿದ್ದರು. ತಾಲೂಕಿನ ಕುಂಚಿಗನಾಳ ಬಳಿಗೆ ಆಟೋದಲ್ಲಿ ಬಂದಿದ್ದರು. ಕುಂಚಿಗನಾಳ ಗ್ರಾಮದ ಬಳಿ ರೇಣುಕಾಸ್ವಾಮಿ ಕಾರು ಹತ್ತಿಸಿದ್ದರು.

ದರ್ಶನ್ ಭೇಟಿಗೆಂದು ಹೇಳಿ ರೇಣುಕಾಸ್ವಾಮಿಯನ್ನು ಗ್ಯಾಂಗ್ ಕರೆತಂದಿತ್ತು. ರೇಣುಕಾಸ್ವಾಮಿ ಖುಷಿಯಿಂದಲೇ ಕಾರಿನಲ್ಲಿ ಬಂದಿದ್ದನೆಂದು ಮಾಹಿತಿ ನೀಡಿದ್ದ. ನಂತರ ಬೆಂಗಳೂರಿನ ರಾಜರಾಜೇಶ್ವರಿನಗರ ಬಳಿಯ ಪಟ್ಟಣಗೆರೆ ಶೆಡ್​ಗೆ ರೇಣುಕಾಸ್ವಾಮಿ ಕರೆತಂದಿದ್ದರು. ಬಳಿಕ ದರ್ಶನ್ ಮತ್ತು ಗ್ಯಾಂಗ್​ನಿಂದ ಭಯಾನಕ, ಭೀಭತ್ಸ ಕೃತ್ಯವೊಂದು ನಡೆದು ಹೋಗಿತ್ತು. ರೇಣುಕಾಸ್ವಾಮಿಯ ಕೊಲೆ ನಡೆದು ಹೋಗಿತ್ತು.

ಒಂದ್ಕಡೆ ಪ್ರಕರಣದ ತನಿಖೆ ತೀವ್ರಗೊಂಡಿದ್ದರೆ, ಮತ್ತೊಂದ್ಕಡೆ ದರ್ಶನ್ ಆ್ಯಂಡ್ ಗ್ಯಾಂಗ್ ವಿರುದ್ಧ ರೌಡಿ ಶೀಟರ್ ಓಪನ್ ಮಾಡುವ ಸಾಧ್ಯತೆಯೂ ದಟ್ಟವಾಗಿದೆ. ಸಾಮಾನ್ಯವಾಗಿ ಕೊಲೆ ಕೇಸ್‌ಗಳಲ್ಲಿ ಮತ್ತು ಪದೇ ಪದೇ ಕ್ರೈಮ್‌ ಮಾಡ್ತಿದ್ರೆ, ರೌಡಿ ಶೀಟ್ ತೆರೆಯಲಾಗುತ್ತೆ. ರೌಡಿ ಶೀಟ್ ತೆರೆಯೋ ಅಧಿಕಾರ ತನಿಖಾಧಿಕಾರಿಗೆ ಇರುತ್ತೆ. ಹೀಗಾಗಿ ದರ್ಶನ್ ಮತ್ತು ಮರ್ಡರ್ ಗ್ಯಾಂಗ್ ವಿರುದ್ಧವೂ ರೌಡಿ ಶೀಟರ್ ತೆರೆಯೋ ಸಾಧ್ಯತೆ ಇದ್ದು, ಆರೋಪಿಗಳ ವಿರುದ್ಧ ಈ ಹಿಂದೆ ದಾಖಲಾದ ಕೇಸ್‌ಗಳ ಮಾಹಿತಿ ಸಂಗ್ರಹಿಸಲಾಗುತ್ತಿದೆ.


Share It

You cannot copy content of this page