ಅಪರಾಧ ಸಿನಿಮಾ ಸುದ್ದಿ

ರೇಣುಕಾಸ್ವಾಮಿಯ ಕಿವಿ ಕತ್ತರಿಸಿ ಹಿಗ್ಗಾಮುಗ್ಗಾ ಹಲ್ಲೆ: ದರ್ಶನ್ ಗ್ಯಾಂಗ್ ಕೃತ್ಯ ಬಯಲಿಗೆ

Share It

ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ಚುರುಕು ಪಡೆದುಕೊಂಡಿದೆ. ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದ್ದಾರೆ. ವಿವಿಧ ಸ್ಥಳಗಳಲ್ಲಿ ಆರೋಪಿಗಳನ್ನು ಕರೆದುಕೊಂಡು ಹೋಗಿ ಮಹಜರು ಮಾಡಲಾಗುತ್ತಿದೆ. ಆದರೆ ಈಗ ನಟ ದರ್ಶನ್ ಆ್ಯಂಡ್ ​ ಗ್ಯಾಂಗ್​ನ ಪೈಶಾಚಿಕ ಕೃತ್ಯ ಬೆಳಕಿಗೆ ಬಂದಿದೆ. ರೇಣುಕಾಸ್ವಾಮಿ ಸಾಯುವ ಮುನ್ನ ಅವರ ಮೇಲೆ ಮನಬಂದಂತೆ ಹಲ್ಲೆ ಮಾಡಲಾಗಿದೆ.

ರೇಣುಕಾಸ್ವಾಮಿ ಮೇಲೆ ಡಿ ಬಾಸ್ ಗ್ಯಾಂಗ್ ಮನಸ್ಸಿಗ್ಗೆ ಬಂದ ರೀತಿ ಹಿಗ್ಗಾಮುಗ್ಗಾ ಹಲ್ಲೆ ನಡೆಸಿದ್ದಾರೆ. ಬೆನ್ನ ಮೇಲೆ ಬಾಸುಂಡೆ ಬರುವ ರೀತಿಯಲ್ಲಿ ರೇಣುಕಾಸ್ವಾಮಿಯನ್ನು ಥಳಿಸಲಾಗಿದೆ. ರೇಣುಕಾಸ್ವಾಮಿಯ ಕಿವಿ ಕತ್ತರಿಸಿ, ಕೈಗೆ ಕರೆಂಟ್ ಶಾಕ್ ಕೊಟ್ಟು ಕ್ರೂರವಾಗಿ ಹಲ್ಲೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಕೊಲೆಯಾದ 33 ವರ್ಷದ ಆಟೋ ಚಾಲಕ ರೇಣುಕಾಸ್ವಾಮಿ ದೇಹದ ಮೇಲೆ ಗಾಯದ ಗುರುತುಗಳು ಪತ್ತೆಯಾಗಿದ್ದು, ಒಂದು ಕಿವಿ ಇಲ್ಲ. ಹಾಗೇ ರೇಣುಕಾಸ್ವಾಮಿಯ ಬಾಯಿಗೆ ಒದ್ದು ಛಿದ್ರ-ಛಿದ್ರಗೊಳಿಸಲಾಗಿದೆ. ಭೀಕರ ಹಲ್ಲೆಯ ಪರಿಣಾಮ ರೇಣುಕಾಸ್ವಾಮಿಯ ಸಾವು ಸಂಭವಿಸಿದೆ ಎಂಬ ಅಂಶ ಮರಣೋತ್ತರ ಪರೀಕ್ಷಾ ವರದಿಯಲ್ಲಿ ಬಯಲಾಗಿದೆ. ದರ್ಶನ್ ಆ್ಯಂಡ್ ಗ್ಯಾಂಗ್​​ ರೇಣುಕಾಸ್ವಾಮಿ ಮೇಲೆ ರಾಕ್ಷರಂತೆ ದುಷ್ಕೃತ್ಯ ಎಸಗಿದ ಫೋಟೋಗಳು ಟಿವಿ9ಗೆ ಸಿಕ್ಕಿವೆ. ಆದ್ರೆ, ಆ ಪೋಟೋಗಳು ನೋಡುವ ರೀತಿಯಲ್ಲಿಲ್ಲ. ಆ ರೀತಿ ರೇಣುಕಾಸ್ವಾಮಿಯನ್ನು ಚಿತ್ರಹಿಂಸೆ ನೀಡಿ ಭೀಕರವಾಗಿ ಕೊಲೆ ಮಾಡಲಾಗಿದೆ. ಹೀಗಾಗಿ ಫೋಟೋಗಳನ್ನು ಬ್ಲರ್ ಮಾಡಲಾಗಿದೆ.

ಇನ್ನು ದರ್ಶನ್ ಅವರ ಗೆಳತಿ ಪವಿತ್ರಾ ಗೌಡಗೆ ಅಶ್ಲೀಲವಾಗಿ ಮೆಸೇಜ್ ಮಾಡಿದ್ದಾರೆ ಎನ್ನುವ ಆರೋಪದ ಮೇಲೆ ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ ಈ ಕೃತ್ಯ ಎಸಗಿದ್ದಾರೆ. ಹಲ್ಲೆಯ ತೀವ್ರತೆಗೆ ರೇಣುಕಾಸ್ವಾಮಿ ಶೆಡ್​ನಲ್ಲೇ ಮೃತಪಟ್ಟಿದ್ದಾನೆ. ಬಳಿಕ ಮೃತದೇಹವನ್ನು ಸುಮ್ಮನಹಳ್ಳಿ ಫ್ಲೈಓವರ್​ ಕೆಳಗೆ ಬಿಸಾಡಿ ಹೋಗಿದ್ದಾರೆ.

ಬಳಿಕ ಕೊಲೆಯಾದ ವ್ಯಕ್ತಿಯ ಶವವನ್ನು ವಿಲೇವಾರಿ ಮಾಡಿ, ಈ ಪ್ರಕರಣದಲ್ಲಿ ತನ್ನ ಹೆಸರು ಎಲ್ಲಿಯೂ ಬರದಂತೆ ಮಾಡಬೇಕು. ಪೊಲೀಸರು, ಲಾಯರ್ ಮತ್ತು ಶವ ಸಾಗಿಸುವ ವ್ಯಕ್ತಿಗಳಿಗೆ ತಗಲುವ ವೆಚ್ಚವನ್ನು ಬರಿಸಲು ಪ್ರದೂಶ್‌ಗೆ 30 ಲಕ್ಷ ಹಣ ನೀಡಿದ್ದರು ಎನ್ನಲಾಗಿದೆ. ಆದರೆ ಪಟ್ಟಣಗೆರೆಯ ಶೆಡ್‌ನಲ್ಲಿ ನಡೆದ ಹಲ್ಲೆಯಲ್ಲಿ ತಾನು ಭಾಗಿಯಾಗಿದ್ದೇನೆ ಎಂದು ದರ್ಶನ್‌ ಒಪ್ಪಿಕೊಂಡಿಲ್ಲ. ಶೆಡ್‌ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾಗಳು, ಜೂನ್‌ 8ರಂದು ರಾತ್ರಿ ದರ್ಶನ್‌ ತನ್ನ ಜೀಪಿನಲ್ಲಿ ಶೆಡ್‌ ಕಡೆಗೆ ಆಗಮಿಸಿದ್ದನ್ನು ತೋರಿಸಿವೆ.

ಹತ್ಯೆಯ ನಂತರ ದರ್ಶನ್‌ ಆರೋಪಿಗಳ ಜೊತೆಗೆ ಪಾರ್ಟಿ ಮಾಡಿದ್ದು ಕೂಡ ಪ್ರತ್ಯಕ್ಷದರ್ಶಿಗಳ ಸಾಕ್ಷಿಯಿಂದ ಗೊತ್ತಾಗಿದೆ. ಆದರೆ ಪಟ್ಟಣಗೆರೆಯ ಶೆಡ್‌ನಲ್ಲಿ ಯಾವುದೇ ಸಿಸಿಟಿವಿ ಸಾಕ್ಷಿಗಳನ್ನು ಆರೋಪಿಗಳು ಉಳಿಸಿಲ್ಲ. ಸದ್ಯ ಈ ಪ್ರಕರಣದಲ್ಲಿ ಪೊಲೀಸರು ದರ್ಶನ್ ತೂಗುದೀಪ, ಪವಿತ್ರಾ ಗೌಡ ಸೇರಿದಂತೆ 17 ಆರೋಪಿಗಳನ್ನು ಬಂಧನ ಮಾಡಿ ವಿಚಾರಣೆ ನಡೆಸುತ್ತಿದ್ದು, ಈಗಾಗಲೇ ಹಲವೆಡೆ ಸ್ಥಳ ಮಹಜರು ಸಹ ಮಾಡಲಾಗಿದೆ.


Share It

You cannot copy content of this page