ಸುದ್ದಿ

RCU ನಲ್ಲೂ ಅರ್ಥಶಾಸ್ತ್ರ ವಿಷಯವನ್ನು ಕಡ್ಡಾಯಗೊಳಿಸುವಂತೆ ಮನವಿ

Share It

ಬೆಳಗಾವಿ : ರಾಜ್ಯ ಶಿಕ್ಷಣ ನೀತಿಯಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ವಾಣಿಜ್ಯ ವಿಭಾಗದಲ್ಲಿ ಅರ್ಥಶಾಸ್ತ್ರ ವಿಷಯವನ್ನು ಕಡ್ಡಾಯಗೊಳಿಸುವಂತೆ ಆಗ್ರಹಿಸಿ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ಪ್ರಾಧ್ಯಾಪಕರ ನಿಯೋಗವು ಮಂಗಳವಾರ ದಿನಾಂಕ:06-08-2024 ರಂದು ಕುಲಪತಿ ಪ್ರೊ.ಸಿ.ಎಮ್.ತ್ಯಾಗರಾಜ್ ಅವರಿಗೆ ಮನವಿ ಸಲ್ಲಿಸಲಾಯಿತು.

ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ಪ್ರಾಧ್ಯಾಪಕರ ವೇದಿಕೆಯ ಅಧ್ಯಕ್ಷ ಪ್ರೊ ಆರ್.ಎಮ್.ತೇಲಿ ಮಾತನಾಡಿ, ಶೈಕ್ಷಣಿಕ ವರ್ಷ 2024-25 ನೇ ಸಾಲಿನಿಂದ ಕಾಂಗ್ರೆಸ್ ಸರ್ಕಾರ ಅಸ್ಥಿತ್ವಕ್ಕೆ ತಂದ ರಾಜ್ಯ ಶಿಕ್ಷಣ ನೀತಿಯಲ್ಲಿ ರಾಜ್ಯದ ಮಹಿಳಾ ವಿಶ್ವವಿದ್ಯಾಲಯ, ಕರ್ನಾಟಕ ವಿಶ್ವವಿದ್ಯಾಲಯ, ಹಾಗೂ ಇನ್ನಿತರ ವಿಶ್ವವಿದ್ಯಾಲಯಗಳು ವಾಣಿಜ್ಯ ವಿಭಾಗದಲ್ಲಿ ಅರ್ಥಶಾಸ್ತ್ರ ವಿಷಯವನ್ನು ಸೇರ್ಪಡೆ ಮಾಡಿರುತ್ತವೆ.

ಆದರೆ, ಗಡಿನಾಡಿನ ಭಾಗದಲ್ಲಿರುವ ಅತ್ಯಂತ ಹೆಚ್ಚಿನ ವಿದ್ಯಾರ್ಥಿಗಳ ಸಂಖ್ಯೆಯನ್ನು ಹೊಂದಿರುವ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಮಾತ್ರ ವಾಣಿಜ್ಯ ವಿಭಾಗಕ್ಕೆ ಅರ್ಥಶಾಸ್ತ್ರ ವಿಷಯವನ್ನು ಸೇರ್ಪಡೆ ಮಾಡದಿರುವುದು ಖೇದಕರ ಸಂಗತಿಯಾಗಿದ್ದು ಇದರಿಂದ ವಿದ್ಯಾರ್ಥಿಗಳಿಗೂ ತೊಂದರೆಯಾಗುವುದರ ಜೊತೆಗೆ ಸ್ನಾತಕೋತ್ತರ ಪದವಿಯಲ್ಲಿ ಅರ್ಥಶಾಸ್ತ್ರ ವಿಷಯವನ್ನು ಬೋಧಿಸುತ್ತಿರುವ ಪ್ರಾಧ್ಯಾಪಕರ ಬದುಕು ಬೀದಿಗೆ ಬರುತ್ತದೆ.
ಆದ್ದರಿಂದ ಕುಲಪತಿಗಳು ಕೂಡಲೇ ಎಚ್ಚೆತ್ತುಕೊಂಡು ವಾಣಿಜ್ಯ ವಿಭಾಗಕ್ಕೆ ಪ್ರತಿ ಸೆಮಿಸ್ಟರ್ ನಲ್ಲಿ ತಲಾ ಒಂದರಂತೆ ಅರ್ಥಶಾಸ್ತ್ರ ವಿಷಯವನ್ನು ಸೇರ್ಪಡೆ ಮಾಡಬೇಕೆಂದು ಆಗ್ರಹಿಸಿದರು.

ಅರ್ಥಶಾಸ್ತ್ರ. ವಿಷಯದ ಪ್ರಾಧ್ಯಾಪಕರಾದ ಡಾ. ಹಿರಿಯಕ್ಕನವರ, ಪ್ರೊ. ರವಿ ಶಂಕರ ಮೆಟಗೇರಿ, ಪ್ರೊ‌.ಎಸ್.ಎ.ಮರೆಪ್ಪಗೋಳ, ಪ್ರೊ.ಆನಂದ ಕರೆಪ್ಪನವರ, ಪ್ರೊ.ಪಿ.ಎಸ್.ಜಾಧವ, ಪ್ರೊ.ಎ.ಡಿ.ಕೋಳಿ, ಪ್ರೊ.ಯಲ್ಲಪ್ಪ ದಭಾಲಿ, ಪ್ರೊ.ಈರಣ್ಣಾ ರಾಮದುರ್ಗ,ಪ್ರೊ.ಎ.ವೈ.ಸೋನ್ಯಾಗೋಳ ಮುಂತಾದವರು ಉಪಸ್ಥಿತರಿದ್ದರು.

“ವಾಣಿಜ್ಯ ಶಾಸ್ತ್ರ ವಿಭಾಗದಲ್ಲಿ ಅರ್ಥಶಾಸ್ತ್ರ ವಿಷಯವನ್ನು ಸೇರ್ಪಡೆ ಮಾಡುವ ವಿಚಾರದ ಕುರಿತು ಅರ್ಥಶಾಸ್ತ್ರ ಪ್ರಾಧ್ಯಾಪಕರು ಮನವಿ ಸಲ್ಲಿಸಿದ್ದು ಎರಡೂ ವಿಭಾಗಗಳ ಮುಖ್ಯಸ್ಥರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ”

  • ಪ್ರೊ.ಸಿ.ಎಮ್.ತ್ಯಾಗರಾಜ, ಕುಲಪತಿ, ರಾಣಿ ಚನ್ನಮ್ಮ ವಿಶ್ವವಿದ್ಯಾಲಯ-ಬೆಳಗಾವಿ

Share It

You cannot copy content of this page