ಬೆಂಗಳೂರು: ಪುತ್ರನಿಂದಲೇ ತಂದೆ, ತಾಯಿ ಹಾಗೂ ಸಹೋದರಿಯ ಕೊಲೆ ನಡೆದಿದೆ ಎಂಬ ಮಾಹಿತಿಯ ಲಭ್ಯವಾಗಿದ್ದು, ಆತ ನೀಡಿದ ಮಾಹಿತಿಯ ಅನ್ವಯ ಶವಗಳಿಗಾಗಿ ಕೊಟ್ಟೂರಿನಲ್ಲಿ ಹುಟುಕಾಟ ನಡೆಸಲಾಗುತ್ತಿದೆ.
ಬೆಂಗಳೂರಿನ ತಿಲಕ್ ನಗರ ಪೊಲೀಸರ ಮಾಹಿತಿಯ ಮೇರೆಗೆ ವಿಜಯನಗರ ಜಿಲ್ಲೆಯ ಕೊಟ್ಟೂರು ಪೊಲೀಸರು ಶವಗಳನ್ನು ಹೂತಿಟ್ಟಿರುವುದಾಗಿ ಹೇಳಿದ ಜಾಗಗಳಲ್ಲಿ ಶವಗಳಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ.
ತಿಲಕ್ ನಗರ ಪೊಲೀಸ್ ಠಾಣೆಗೆ ಆಗಮಿಸಿದ ಕೊಟ್ಟೂರು ಮೂಲದ ವ್ಯಕ್ತಿಯೊಬ್ಬ ತನ್ನ ತಂದೆ, ತಾಯಿ ಮತ್ತು ಸಹೋದರಿ ಕಾಣೆಯಾಗಿದ್ದಾರೆ ಎಂದು ದೂರು ನೀಡಿದ್ದ. ಆತನ ದೂರಿನ ಆಧಾರದಲ್ಲಿ ವಿಚಾರಣೆ ನಡೆಸಿದ ತಿಲಕ್ ನಗರ ಪೊಲೀಸರಿಗೆ ಮಹತ್ವದ ಸಂಗತಿಯೊAದು ಸಿಕ್ಕಿದ್ದು, ಅದರನ್ವಯ ಕೊಟ್ಟೂರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ವಿಚಾರಣೆ ಸಂದರ್ಭದಲ್ಲಿ ದೂರು ನೀಡಿದ್ದ ವ್ಯಕ್ತಿಯೇ ತನ್ನ ತಂದೆ, ತಾಯಿ ಮತ್ತು ಸಹೋದರಿಯನ್ನು ಕೊಲೆ ಮಾಡಿರುವುದಾಗಿ ಹೇಳಿಕೊಂಡಿದ್ದಾನೆ. ಜತೆಗೆ ಶವಗಳನ್ನು ಕೊಟ್ಟೂರಿನ ತನ್ನ ಮನೆಯಲ್ಲಿಯೇ ಹೂತಿರುವುದಾಗಿ ಮಾಹಿತಿ ನೀಡಿದ್ದಾನೆ. ಹೀಗಾಗಿ, ಕೊಟ್ಟೂರು ಪೊಲೀಸರು ಆತನ ಮನೆಯಲ್ಲಿ ತಪಾಸಣೆ ನಡೆಸುತ್ತಿದ್ದಾರೆ.
ದೂರು ನೀಡಿದ್ದ ವ್ಯಕ್ತಿಯನ್ನು ತಿಲಕ್ನಗರ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದು, ಆತ ಒಮ್ಮೊಮ್ಮೆ ಶವವನ್ನು ಬೇರೆ ಜಾಗದಲ್ಲಿ ಎಸೆದಿದ್ದೇನೆ ಎನ್ನುತ್ತಿದ್ದಾನೆ. ಆತನ ಇಂತಹ ಗೊಂದಲದ ಹೇಳಿಕೆಯಿಂದ ಪೊಲೀಸರು ಶಾಕ್ ಆಗಿದ್ದು, ಆತ ಹೇಳಿದ ಎರಡು ಜಾಗದಲ್ಲಿ ತಪಾಸಣೆ ನಡೆಸುವಂತೆ ಕೊಟ್ಟೂರು ಪೊಲೀಸರಿಗೆ ತಿಳಿಸಿದ್ದಾರೆ.
ತಿಲಕ್ ನಗರದಲ್ಲಿ ಪ್ರಕರಣ ದಾಖಲಿಸಿಕೊಂಡು, ವ್ಯಕ್ತಿಯನ್ನು ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ. ಮಾಹಿತಿಗಾಗಿ ಪೊಲೀಸರು, ಕೊಟ್ಟೂರು ಪೊಲೀಸರ ಜತೆಗೆ ನಿರಂತರ ಸಂಪರ್ಕದಲ್ಲಿದ್ದಾರೆ.

