ಅಮೆರಿಕಾ-ವೆಸ್ಟ್ ಇಂಡೀಸ್ ನಲ್ಲಿ ನಡೆದ 2024 ರ ಟಿ-20 ವಿಶ್ವಕಪ್ ಕ್ರಿಕೆಟ್ ಟ್ರೋಫಿಯನ್ನು ಕೋಚ್ ರಾಹುಲ್ ದ್ರಾವಿಡ್ ಅವರ ಮಾರ್ಗದರ್ಶನ ಮತ್ತು ನಾಯಕ ರೋಹಿತ್ ಶರ್ಮಾ ನೇತೃತ್ವದಲ್ಲಿ ಟೀಂ ಇಂಡಿಯಾ 2ನೇ ಬಾರಿ ಗೆದ್ದು ಬೀಗಿದೆ.
ಇದಾದ ನಂತರ ಟಿ-20 ಕ್ರಿಕೆಟ್ ಫಾರ್ಮಾಟ್ ಗೆ ನಾಯಕ ರೋಹಿತ್ ಶರ್ಮಾ ಮತ್ತು ಮಾಜಿ ನಾಯಕ ವಿರಾಟ್ ಕೊಹ್ಲಿ ವಿದಾಯ ಘೋಷಿಸಿದರು. ಜೊತೆಗೆ ಆಲ್ ರೌಂಡರ್ ರವೀಂದ್ರ ಜಡೇಜಾ ಕೂಡ ಟಿ-20 ಕ್ರಿಕೆಟ್ ನಲ್ಲಿ ಇನ್ನು ಆಡುವುದಿಲ್ಲ ಎಂದು ವಿದಾಯ ಘೋಷಿಸಿದರು.
ಇದಕ್ಕೂ ಮೊದಲು ಟೀಂ ಇಂಡಿಯಾ ಕೋಚ್ ಆಗಿ ಸುಮಾರು 3 ವರ್ಷಗಳ ಕಾಲ ತಮ್ಮ ಕ್ರಿಕೆಟ್ ಆಟದ ಅನುಭವ, ತಂತ್ರವನ್ನೆಲ್ಲಾ ಟೀಂ ಇಂಡಿಯಾಕ್ಕೆ ಧಾರೆಯೆರೆದ ಕೋಚ್ ರಾಹುಲ್ ದ್ರಾವಿಡ್ ಸಕ್ರಿಯ ಕ್ರಿಕೆಟ್ ಗೆ ಇನ್ನು ಮಾರ್ಗದರ್ಶನ ಮಾಡಲಾಗುವುದಿಲ್ಲ ಎಂದು ಮೊದಲೇ ಘೋಷಿಸಿದ್ದರು.
ಹೀಗಾಗಿ ಜಿಂಬಾಬ್ವೆ ವಿರುದ್ಧ ಪ್ರವಾಸ ಟೀಂ ಇಂಡಿಯಾ ನೇತೃತ್ವವನ್ನು ಶುಭಮಾನ್ ಗಿಲ್ ವಹಿಸಿಕೊಂಡರು. ಆದರೆ ಅನನುಭವಿಗಳಿಂದ ಕೂಡಿದ್ದ ಟೀಂ ಇಂಡಿಯಾವನ್ನು ಮೊದಲ ಟಿ-20 ಪಂದ್ಯದಲ್ಲೇ ಸೋಲಿಸಿ ಶಾಕ್ ನೀಡಿದ್ದ ಜಿಂಬಾಬ್ವೆ ಅಚ್ಚರಿ ಮೂಡಿಸಿತು.
ಆದರೆ ಬಳಿಕ ಉಳಿದ ಎರಡೂ ಟಿ-20 ಪಂದ್ಯಗಳನ್ನು ಗೆಲ್ಲುವ ಮೂಲಕ ತ್ರಿಕೋನ ಟಿ-20 ಸರಣಿಯಲ್ಲಿ 2-1 ರಿಂದ ಮುನ್ನಡೆ ಸಾಧಿಸಿರುವ ಟೀಂ ಇಂಡಿಯಾ ಸೋಲಿನ ಶಾಕ್ ನಿಂದ ಹೊರಬಂದು 5 ಪಂದ್ಯಗಳ ಟಿ-20 ಸರಣಿ ಗೆಲ್ಲುವತ್ತ ದೃಢ ಹೆಜ್ಜೆ ಹಾಕಿದೆ.
ಜಿಂಬಾಬ್ವೆ ಪ್ರವಾಸ ಬಳಿಕ ಭಾರತ ತಂಡ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದೆ. ಈ ಪ್ರವಾಸದ ವೇಳಾಪಟ್ಟಿಯನ್ನು ಬಿಸಿಸಿಐ ಗುರುವಾರ ಬಿಡುಗಡೆ ಮಾಡಿದೆ. ವೇಳಾಪಟ್ಟಿಯ ಪ್ರಕಾರ ಭಾರತ ತಂಡ 3 ಪಂದ್ಯಗಳ ಟಿ-20 ಮತ್ತು 3 ಪಂದ್ಯಗಳ ಏಕದಿನ ಸರಣಿಯನ್ನು ಈ ಪ್ರವಾಸದಲ್ಲಿ ಆಡಲಿದೆ.
ಪ್ರವಾಸದ ವೇಳಾಪಟ್ಟಿ ಹೀಗಿದೆ:
ಜುಲೈ 26ರಿಂದ ಭಾರತದ ಶ್ರೀಲಂಕಾ ಪ್ರವಾಸ ಆರಂಭವಾಗಲಿದೆ. ಮೊದಲು ಟಿ-20 ಸರಣಿ ನಡೆಯಲಿದೆ. ಇದಾದ ಬಳಿಕ ಏಕದಿನ ಸರಣಿ ಆರಂಭವಾಗಲಿದೆ. ಟಿ-20 ಸರಣಿಯ ಮೊದಲ ಪಂದ್ಯ ಜುಲೈ 26 ರಂದು ಪಲ್ಲೆಕೆಲೆಯಲ್ಲಿ ನಡೆಯಲಿದೆ. 2ನೇ ಟಿ20 ಜುಲೈ 27 ರಂದು ಮತ್ತು 3ನೇ ಪಂದ್ಯ ಜುಲೈ 29 ರಂದು ನಡೆಯಲಿದೆ.
ಟಿ20 ಸರಣಿಯ ಎಲ್ಲಾ 3 ಪಂದ್ಯಗಳು ರಾತ್ರಿ 7 ಗಂಟೆಗೆ ಆರಂಭವಾಗಲಿದ್ದು, ಏಕದಿನ ಸರಣಿಯ ಮೊದಲ ಪಂದ್ಯ ಆಗಸ್ಟ್ 1 ರಂದು ನಡೆಯಲಿದೆ. 2ನೇ ಪಂದ್ಯ ಆಗಸ್ಟ್ 4 ರಂದು ಮತ್ತು 3ನೇ ಪಂದ್ಯ ಆಗಸ್ಟ್ 7 ರಂದು ನಡೆಯಲಿದೆ. ಈ 3 ಪಂದ್ಯಗಳು ಮಧ್ಯಾಹ್ನ 2:30ಕ್ಕೆ ಆರಂಭವಾಗಲಿವೆ.
ವಿರಾಟ್-ರೋಹಿತ್ ಗೈರು?
ಪ್ರಸ್ತುತ ವೇಳಾಪಟ್ಟಿ ಪ್ರಕಟವಾಗಿದ್ದು, ಶ್ರೀಲಂಕಾ ಪ್ರವಾಸಕ್ಕೆ ಭಾರತ ತಂಡವನ್ನು ಶೀಘ್ರದಲ್ಲೇ ಪ್ರಕಟಿಸಬಹುದಾಗಿದೆ. ವರದಿಗಳ ಪ್ರಕಾರ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಈ ಪ್ರವಾಸದಿಂದ ಹೊರಗುಳಿಯಲ್ಲಿದ್ದು, ಜಸ್ಪ್ರೀತ್ ಬುಮ್ರಾ ಅವರಿಗೂ ಪ್ರವಾಸದಿಂದ ವಿಶ್ರಾಂತಿ ನೀಡಲಾಗುವುದು ಎಂದು ವರದಿಯಾಗಿದೆ.
ಹಾರ್ದಿಕ್ ಪಾಂಡ್ಯ ಟಿ-20 ತಂಡ ಮುನ್ನಡೆಸಲ್ಲಿದ್ದು, ಕೆಎಲ್ ರಾಹುಲ್ ಅವರಿಗೆ ಏಕದಿನ ತಂಡದ ನಾಯಕತ್ವವನ್ನು ನೀಡಲಾಗುವುದು ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.
ಶ್ರೀಲಂಕಾ ಪ್ರವಾಸ ಸುಲಭವಲ್ಲ
ಶ್ರೀಲಂಕಾ ತಂಡ ಮೊದಲಿನಷ್ಟು ಬಲಿಷ್ಠವಾಗಿಲ್ಲ ಆದರೆ ಈ ತಂಡವನ್ನು ಕಡಿಮೆ ಅಂದಾಜು ಮಾಡುವಂತಿಲ್ಲ. 2021ರಲ್ಲಿ ಭಾರತ ತಂಡ ಕೊನೆಯ ಬಾರಿಗೆ ಶ್ರೀಲಂಕಾಕ್ಕೆ ಭೇಟಿ ನೀಡಿತ್ತು. ಏಕದಿನ ಸರಣಿಯನ್ನು ಗೆದ್ದರೂ ಟಿ20 ಸರಣಿಯಲ್ಲಿ 1-2 ಅಂತರದಿಂದ ಸೋಲನುಭವಿಸಬೇಕಾಯಿತು.
ಆಗ ತಂಡದ ಕೋಚ್ ರಾಹುಲ್ ದ್ರಾವಿಡ್. ಅಂದಹಾಗೆ, ಭಾರತದ ಶ್ರೀಲಂಕಾ ಪ್ರವಾಸಕ್ಕೂ ಮುನ್ನವೇ ಆತಿಥೇಯ ತಂಡದ ನಾಯಕ ವನಿಂದು ಹಸರಂಗ ಅವರು ತಮ್ಮ ಸ್ಥಾನವನ್ನು ತೊರೆದಿರುವುದು ದೊಡ್ಡ ಸುದ್ದಿಯಾಗಿದೆ. ಈಗ ಟೀಂ ಇಂಡಿಯಾವನ್ನು ಎದುರಿಸುವ ಮೊದಲು ಶ್ರೀಲಂಕಾ ಹೊಸ ನಾಯಕನನ್ನು ಆಯ್ಕೆ ಮಾಡಬೇಕಾಗುತ್ತದೆ.
ಶ್ರೀಲಂಕಾ ತಂಡ ಕೂಡ ಹೊಸ ಮುಖ್ಯ ಕೋಚ್ನೊಂದಿಗೆ ಕಣಕ್ಕಿಳಿಯಲಿದೆ. ಶ್ರೀಲಂಕಾದ ಹಂಗಾಮಿ ಕೋಚ್ ಆಗಿ ಹಿರಿಯ ಆಟಗಾರ ಸನತ್ ಜಯಸೂರ್ಯ ಅವರನ್ನು ನೇಮಕ ಮಾಡಲಾಗಿದೆ.