ಶಿವಮೊಗ್ಗ : ಆಂಧ್ರಪ್ರದೇಶದಿಂದ ಶಿವಮೊಗ್ಗಕ್ಕೆ ಗಾಂಜಾ ತರುತ್ತಿದ್ದ ನಾಲ್ವರು ಗಾಂಜಾ ಪೆಡ್ಲರ್ಗಳಿಗೆ ಇಲ್ಲಿನ ಜಿಲ್ಲಾ ನ್ಯಾಯಾಲಯ ತಲಾ ೧೦ ವರ್ಷ ಶಿಕ್ಷೆ ಮತ್ತು ಒಂದು ಲಕ್ಷ ರೂ. ದಂಡ ವಿಧಿಸಿ ಮಹತ್ವದ ತೀರ್ಪನ್ನು ಶನಿವಾರ ಪ್ರಕಟಿಸಿದೆ.
ಶಿವಮೊಗ್ಗ ಮಳಲಿಕೊಪ್ಪದ ದೌಲತ್ ಅಲಿಯಾಸ್ ಗುಂಡು (೨೭), ಇಂದಿರಾನಗರದ ಮುಜೀಬ್ ಖಾನ್ ಅಲಿಯಾಸ್ ಬ್ರಸ್ಟ್ (೨೭) ಮತ್ತು ಕಡೇಕಲ್ನವರಾದ ಶೋಯೇಬ್ ಅಲಿಯಾಸ್ ಚೂಡಿ (೨೪) ಹಾಗೂ ಮೊಹಮ್ಮದ್ ಜಫುಲ್ಲಾ (೨೪) ಶಿಕ್ಷೆಗೊಳಗಾದವರು.
ದೌಲತ್, ಮುಜೀಬ್ ಖಾನ್, ಶೋಹೇಬ್ ಮತ್ತು ಮಹಮ್ಮದ್ ಜಫ್ರುಲ್ಲಾ ಶಿಕ್ಷೆಗೊಳಗಾದವರು. ೨೦೨೧ರ ಡಿಸೆಂಬರ್ ೧೧ರಂದು ಆಂಧ್ರಪ್ರದೇಶದಿಂದ ನೋಂದಣಿ ಸಂಖ್ಯೆ ಕೆ.ಎ೦೩ ಡಿ-೧೭೦೨ ಇನ್ನೋವಾ ಕಾರ್ ನಲ್ಲಿ ಮಾದಕವಸ್ತು ಗಾಂಜಾವನ್ನು ಮಾರಾಟ ಮಾಡುವ ಉದ್ದೇಶದಿಂದ ಲಕ್ಕಿನಕೊಪ್ಪ ಕ್ರಾಸ್ ಮೂಲಕ ಕಡೇಕಲ್ ಗ್ರಾಮದ ಕಡೆಗೆ ಸಾಗಾಟ ಮಾಡಲು ಬರುತ್ತಿರುವ ಮಾಹಿತಿ ಪೊಲೀರಿಗೆ ಲಭಿಸಿತ್ತು. ತಕ್ಷಣ ಕಾರ್ಯ ಪ್ರವೃತ್ತರಾದ,ತುಂಗಾನಗರ ಪೊಲೀಸ್ ಠಾಣೆ ಇನ್ ಸ್ಪೆಕ್ಟರ್ ದೀಪಕ್ ಹಾಗೂ ಸಿಬ್ಬಂದಿಗಳ ತಂಡವು ಲಕ್ಕಿನಕೊಪ್ಪ ಕ್ರಾಸ್ ಕಡೆಯಿಂದ ಹಾಲ್ ಲಕ್ಕವಳ್ಳಿ ಕಡೆಗೆ ಹೋಗುತ್ತಿದ್ದ ಇನ್ನೋವಾ ಕಾರ್ ನ ಮೇಲೆ ಅನುಮಾನ ಬಂದು, ಕಾರ್ ಅನ್ನು ತಡೆದು ನಿಲ್ಲಿಸಿ ತಪಾಸಣೆ ಮಾಡಿದ್ದರು.
ಕಾರಿನ ನಾಲ್ಕು ಡೋರ್ಗಳ ಡೋರ್ ಮ್ಯಾಟ್ ಒಳಗೆ, ಹಿಂಬದಿಯ ಸ್ಟೆಪ್ನಿಯ ಕೆಳಗೆ ಮತ್ತು ಮುಂದಿನ ಬಾನೆಟ್ ಒಳ ಭಾಗದಲ್ಲಿ ಮಾದಕ ವಸ್ತು ಗಾಂಜಾವನ್ನು ಪ್ಯಾಕೆಟ್ಗಳಾಗಿ ಮಾಡಿ ಇಟ್ಟುಕೊಂಡು ಸಾಗಾಟ ಮಾಡುತ್ತಿರುವುದು ಪತ್ತೆಯಾಗಿತ್ತು.
ನಂತರ ಪೊಲೀಸರು ಆರೋಪಿಗಳಾದಶಿವಮೊಗ್ಗ ರವರನ್ನು ವಶಕ್ಕೆ ಪಡೆದು ಅಂದಾಜು ಮೌಲ್ಯ ೬,೫೦ ಲಕ್ಷ ರೂಗಳ ಒಟ್ಟು ೨೧ ಕೆಜಿ ೩೧೫ ಗ್ರಾಂ ತೂಕದ ಒಣ ಗಾಂಜಾ ಮತ್ತು ಕೃತ್ಯಕ್ಕೆ ಬಳಸಿದ ಇನ್ನೋವಾ ಕಾರ್ ಅನ್ನು ವಶಪಡಿಸಿಕೊಂಡು , ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದರು.
ಈ ಪ್ರಕರಣದ ವಿಚಾರಣೆ ಮುಗಿಸಿರುವ ಶಿವಮೊಗ್ಗ ಸೆಷನ್ ನ್ಯಾಯಾಲಯದ ನ್ಯಾಯಾಧೀಶರು ನಾಲ್ವರು ಆರೋಪಿಗಳಿಗೆ ಹತ್ತು ವರ್ಷ ಕಠಿಣ ಸಜೆ ಮತ್ತು ಒಂದು ಲಕ್ಷ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದೆ. ಗಾಂಜಾ ಮಾಫಿಯಾಕ್ಕೆ ಎಚ್ಚರಿಕೆಯ ಸ್ಪಷ್ಟ ಸಂದೇಶವನ್ನು ರವಾನಿಸಿದ್ದಾರೆ.

