ನವದೆಹಲಿ: ಬಡವರು ನ್ಯಾಯ ಪಡೆಯಲು ಪಡಬಹುದಾದ ಕಷ್ಟಗಳೇನು ಎಂಬುದನ್ನು ಸುಪ್ರೀಂ ಕೋರ್ಟ್ಗೆ ಬಂಗಾಳದ ಮಹಿಳೆಯೊಬ್ಬಳ ಪರಿಸ್ತಿತಿ ಮನವರಿಕೆ ಮಾಡಿಕೊಟ್ಟಿದೆ ಎನ್ನಬಹುದು.
ಬಂಗಾಳದ ಮಹಿಳೆಯೊಬ್ಬರು ತನ್ನ ಗಂಡನ ಮೇಲಿನ ಆರೋಪಮುಕ್ತಗೊಳಿಸಲು ನ್ಯಾಯಾಲಯಕ್ಕೆ ಸುಮಾರು 3.5 ಲಕ್ಷ ರು.ಖರ್ಚು ಮಾಡಿದ್ದಾರೆ ಎಂಬುದು ಸಮಿತಿ ನಡೆಸಿದ ತನಿಖೆಯಿಂದ ವರದಿಯಾಗಿದೆ. ಈ ಸಮಿತಿಯನ್ನು ಸುಪ್ರೀಂ ಕೋರ್ಟ್ ನೇಮಿಸಿತ್ತು. ಜತೆಗೆ, ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ನೀಡುವಂತೆ ಹೇಳಿತ್ತು. ಈ ವರದಿಯ ಅನ್ವಯ ಆಕೆಯ ಜೀವನದ ಸ್ಥಿತಿಗತಿ ಸುಪ್ರೀಂ ಕೋರ್ಟ್ಗೆ ಮನವರಿಕೆಯಾಗಿದೆ.
ವರದಿಯಲ್ಲಿ ಮಹಿಳೆಯ ಮನೆ, ಆಕೆ ನ್ಯಾಯಾಲಯಕ್ಕಾಗಿ ಮಾಡಿದ ಖರ್ಚು, ವಕೀಲರಿಗೆ ನೀಡಿದ ಶುಲ್ಕ, ಜಾಮೀನು ಕೊಡಿಸಲು ಮಧ್ಯವರ್ತಿಗಳು ಪಡೆದುಕೊಂಡ ಹಣದ ಜತೆಗೆ, ಆಕೆಗೆ ಸಾಲ ನೀಡಿದವರಿಂದ ಆಗುತ್ತಿರುವ ಕಿರಿಕಿರಿ ಸೇರಿದಂತೆ ಅನೇಕ ದೃಷ್ಟಾಂತಗಳನ್ನು ವಿವರಿಸಿದೆ. ಮಹಿಳೆ ಸಣ್ಣದಾದ ಇಟ್ಟಿಗೆ ಗೋಡೆಗಳ ಮನೆಯಲ್ಲಿ ವಾಸವಿದ್ದು, ಮನೆಗೆ ಮೇಲ್ಛಾವಣಿಯಿಲ್ಲದೆ, ಟಾರ್ಪಲಿನ್ ಹಾಕಿಕೊಂಡು ಜೀವನ ನಡೆಸುತ್ತಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.
ಮಹಿಳೆ ಅಪ್ರಾಪ್ತೆಯಾಗಿದ್ದ ಆಕೆಯ ಜತೆಗೆ ಲೈಂಗಿಕ ಸಂಪರ್ಕ ಮಾಡಿದ ಆರೋಪದಲ್ಲಿ ವ್ಯಕ್ತಿಯನ್ನು ಬಂಧಿಸಲಾಗಿತ್ತು. ನಂತರ ಆಕೆಯನ್ನೇ ಮದುವೆಯಾಗಿ, ಆಕೆ ಆತನನ್ನು ಕಾನೂನು ಪ್ರಕ್ರಿಯೆಯಿಂದ ಹೊರಗೆ ತರಲು ನಡೆಸಿದ ಪ್ರಯತ್ನದಲ್ಲಿ ನ್ಯಾಯಾಲಯದ ಪ್ರಕ್ರಿಯೆಗೆ 3.5 ಲಕ್ಷ ಖರ್ಚಾಗಿತ್ತು. ಇದು ಸುಪ್ರೀಂ ಕೋರ್ಟ್ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾಗಿದ್ದ ಅಭಯ್ ಓಕಾ ಹಾಗೂ ಉಜ್ವಲ್ ಭೂಯಾನ್ ಅವರು, ಸಮಿತಿ ರಚನೆ ಮಾಡಿದ್ದರು.
ಈ ಸಮಿತಿ ನೀಡಿದ ವರದಿಯಲ್ಲಿ ಇದೀಗ ಮಹಿಳೆಯ ಆರ್ಥಿಕ, ಸಾಮಾಜಿಕ ಸ್ಥಿತಿಗತಿ ಹಾಗೂ ತನ್ನ ಗಂಡನನ್ನು ಉಳಿಸಿಕೊಳ್ಳಲು ನಡೆಸಿದ ಕಾನೂನು ಹೋರಾಟದಿಂದ ಆಕೆಗೆ ಆಗಿರುವ ಅನ್ಯಾಯದ ಕುರಿತು ಬೆಳಕು ಚೆಲ್ಲಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಸಹ ವಿಷಾಧ ವ್ಯಕ್ತಪಡಿಸಿದ್ದು, ಬಡವರಿಗೆ ನ್ಯಾಯ ಪಡೆಯಲು ಇರುವ ಅಡೆತಡೆಗಳ ಕುರಿತು ಆತಂಕ ವ್ಯಕ್ತಪಡಿಸಿದೆ.
ಪತಿಗೆ ಜಾಮೀನು ಪಡೆಯಲು 60 ಸಾವಿರ, ಪ್ರಕರಣ ಖೂಲಾಲೆಗೊಳಿಸಲು 25 ಸಾವಿರ, ಮೇಲ್ಮನವಿ ಸಲ್ಲಿಕೆಗೆ 25 ಸಾವಿರ, ವಕೀಲರ ವಿಮಾನ ಪ್ರಯಾಣದ ವೆಚ್ಚವಾಗಿ 25 ಸಾವಿರು ರು. ಪಾವತಿ ಮಾಡಿರುವುದಾಗಿ ಕಂಡುಬಂದಿದೆ. ಅದೇ ರೀತಿ ಕೆಳ ನ್ಯಾಯಾಲಯದಲ್ಲಿಯೂ ಕೂಡ ಆಕೆಗೆ ವಕೀಲರು ಮತ್ತು ಮಧ್ಯವರ್ತಿಗಳು ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ.