ಬೆಂಗಳೂರು: ದರ್ಶನ್ ಮೇಲಿನ ಕೊಲೆ ಆರೋಪಕ್ಕೆ ಸಂಬಂಧಿಸಿ ಒಬ್ಬೊಬ್ಬರೇ ನಟರು ಇದೀಗ ಪ್ರತಿಕ್ರಿಯೆ ನೀಡುತ್ತಿದ್ದು, ನಟ ಹಾಗೂ ಪ್ರಜಾಕೀಯ ಸಂಸ್ಥಾಪಕ ಉಪೇಂದ್ರ ಮೊದಲ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಅಷ್ಟಕ್ಕೂ ಉಪೇಂದ್ರ, ದರ್ಶನ್ ಪ್ರಕರಣ ಕುರಿತು ಏನು ಹೇಳಿದ್ದಾರೆ ಎಂದು ನೋಡುವುದಾದರೆ, ಪೊಲೀಸ್ ಠಾಣೆಗೆ ಶಾಮಿಯಾನ ಒದಿಸಿ ತನಿಖೆ ಮಾಡುವ ಬದಲು ಪಾರದರ್ಶಕ ತನಿಖೆ ನಡೆಸಿದರೆ, ಜನರಿಗೆ, ಕೊಲೆಯಾದ ರೇಣುಕಾ ಸ್ವಾಮಿ ಕುಟುಂಬಕ್ಕೆ ಹಾಗೂ ಮಾಧ್ಯಮಗಳಿಗೆ ಸರಿಯಾದ ತನಿಖೆ ಮಾಹಿತಿ ತಿಳಿಸುತ್ತದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಈ ಕುರಿತು ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಗೆ ಶಾಮಿಯಾನ ಒದಿಸಿರುವ ಪೋಟೋ ಹಂಚಿಕೊಂಡಿರುವ ಅವರು, ಪ್ರಕರಣದ ತನಿಖೆ ಹೇಗೆ ನಡೆಯುತ್ತಿದೆ ಎಂದು ಇಡೀ ದೇಶವೇ ಕುತೂಹಲದಿಂದ ಎದುರು ನೋಡುತ್ತಿದೆ. ಹೀಗಾಗಿ, ಪ್ರಕರಣದ ತನಿಖೆ ಪಾರದರ್ಶಕವಾಗಿದ್ದರೆ ಉತ್ತಮ ಎಂದಿದ್ದಾರೆ.
ಠಾಣೆಯಲ್ಲಿ ಏನು ನಡೆಯುತ್ತಿದೆ, ವಿಚಾರಣೆ ಹೇಗೆ ನಡೆಯುತ್ತಿದೆ ಎಂಬೆಲ್ಲ ಮಾಹಿತಿಗಳನ್ನು ಸಾರ್ವಜನಿಕವಾಗಿ ಹಂಚಿಕೊಳ್ಳುವುದು ಇಂತಹ ಹೈಫ್ರೊಫೈಲ್ ಪ್ರಕರಣದಲ್ಲಿ ಒಳ್ಳೆಯದು. ಏಕೆಂದರೆ, ಇಡೀ ದೇಶ ಇಂತಹ ಪ್ರಕರಣದ ಮೇಲೆ ಕಣ್ಣಿಟ್ಟಿರುತ್ತದೆ. ಹೀಗಾಗಿ, ವಿಚಾರಣೆಯ ನೇರ ಪ್ರಸಾರದ ವ್ಯವಸ್ಥೆ ಮಾಡಿದರೂ ಇನ್ನೂ ಉತ್ತಮ ಎಂದು ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ನೆನ್ನೆ ತಾನೇ ನಟ ಸುದೀಪ್ ಬಾಯ್ಬಿಟ್ಟಿದ್ದು, ರೇಣುಕಾ ಸ್ವಾಮಿ ಕೊಲೆಗೆ ನ್ಯಾಯ ಸಿಗಬೇಕು. ಆತನ ಕುಟುಂಬಕ್ಕೆ ನ್ಯಾಯ ಸಿಗಬೇಕು ಎಂದು ತಿಳಿಸಿದ್ದರು. ಇಂದು ಉಪೇಂದ್ರ ಕೂಡ ಈ ಕುರಿತು ಪೋಸ್ಟ್ ಮಾಡಿದ್ದು, ತನಿಖೆ ಸರಿಯಾದ ದಿಕ್ಕಿನಲ್ಲಿ ತನಿಖೆ ನಡೆಯಲಿ ಎಂದು ಒತ್ತಾಯಿಸಿದ್ದಾರೆ.

