ಬೆಂಗಳೂರು : ರಾಜ್ಯದಲ್ಲಿ ತಲೆದೋರಿದ್ದ ವಿದ್ಯುತ್ ಕ್ಷಾಮವನ್ನು ನೀಗಿಸಲು ರಾಜ್ಯಸರ್ಕಾರ ಪಂಜಾಬ್ ಮತ್ತು ಉತ್ತರ ಪ್ರದೇಶದೊಂದಿಗೆ 2023ರ ನವೆಂಬರ್ನಿಂದ 2024ರ ಮೇವರೆಗೂ ವಿದ್ಯುತ್ ವಿನಿಮಯದ ಒಪ್ಪಂದ ಮಾಡಿಕೊಂಡಿತ್ತು. ಒಪ್ಪಂದದಂತೆ ಇದೀಗ ಕರ್ನಾಟಕ ಸರ್ಕಾರ ಜೂನ್ 16ರಿಂದ ಪಂಜಾಬ್ ಮತ್ತು ಉತ್ತರ ಪ್ರದೇಶ ರಾಜ್ಯಗಳಿಗೆ ವಿದ್ಯುತ್ ಹಿಂದಿರುಗಿಸುತ್ತದೆ.
ರಾಜ್ಯದಲ್ಲಿ ಕಳೆದ ಮುಂಗಾರು ಮತ್ತು ಹಿಂಗಾರಿನಲ್ಲಿ ಮಳೆ ಕೊರತೆಯಿಂದ ಕಳೆದ ವರ್ಷ ಅಗಸ್ಟನಲ್ಲೇ ಬೇಸಿಗೆ ಪರಿಸ್ಥಿತಿ ನಿರ್ಮಾಣವಾಗಿದ್ದರಿಂದ ಜಲವಿದ್ಯುತ್ ಉತ್ಪಾದನೆಗೆ ಭಾರಿ ಹೊಡೆತ ಬಿದ್ದಿತ್ತು. ಸಮರ್ಪಕ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದನೆಯಾಗಲಿಲ್ಲ ಮತ್ತು ಉಷ್ಣ ವಿದ್ಯುತ್ ಸ್ಥಾವರದಲ್ಲೂ ವಿದ್ಯುತ್ ಉತ್ಪಾದನೆ ಕಡಿಮೆಯಾಗಿದ್ದರಿಂದ ಪೂರೈಕೆಗೆ ಹೊಡೆತ ಬಿತ್ತು. ಅಲ್ಲದೆ, ಯಾವುದೇ ಕಾರಣಕ್ಕೂ ಲೋಡ್ ಶೆಡ್ಡಿಂಗ್ ಮಾಡದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚನೆ ನೀಡಿದ ಹಿನ್ನೆಲೆಯಲ್ಲಿ ಪಂಜಾಬ್ ಮತ್ತು ಉತ್ತರ ಪ್ರದೇಶದಿಂದ ವಿದ್ಯುತ್ ವಿನಿಮಯ ಮಾಡಿಕೊಳ್ಳಲಾಯಿತು.
2023ರ ಅಕ್ಟೋಬರ್ನಿಂದ 2024ರ ಮೇ ವರೆಗೆ ಪ್ರತಿದಿನ ಉತ್ತರ ಪ್ರದೇಶದಿಂದ 300 ರಿಂದ 600 ಮೆಗಾವ್ಯಾಟ್ ವಿದ್ಯುತ್ ಪಡೆದುಕೊಳ್ಳಲಾಗಿದೆ. ಇದೇ ರೀತಿ ಪಂಜಾಬ್ನಿಂದ 2023ರ ನವೆಂಬರ್ನಿಂದ 2024ರ ಮೇ ವರೆಗೆ ಪ್ರತಿದಿನ 500 ಮೆಗಾವ್ಯಾಟ್ ವಿದ್ಯುತ್ ಪಡೆದುಕೊಳ್ಳಲಾಗಿದೆ. ಇದೀಗ, ಜೂನ್ 16ರಿಂದ ಸೆಪ್ಟೆಂಬರ್ 30ರವರೆಗೆ ಹಿಂತಿರುಗಿಸಲಾಗುತ್ತದೆ ಎಂದು ಇಂಧನ ಸಚಿವ ಕೆ.ಜೆ ಜಾರ್ಜ್ ಹೇಳಿದರು.
ಈ ವರ್ಷ ಫೆಬ್ರವರಿ 12 ರಂದು ರಾಜ್ಯದಲ್ಲಿ 17,220 ಮೆಗಾವ್ಯಾಟ್ ವಿದ್ಯುತ್ ಬಳಕೆಯಾಗಿದೆ. 2023ರ ಅಗಸ್ಟ್ 25 ರಂದು 16,950 ಮೆಗಾವ್ಯಾಟ್ ವಿದ್ಯುತ್ ಬಳಕೆಯಾಗಿದೆ. ಇದೇ ದಿನಾಂಕದಂದು 2022ರಲ್ಲಿ 11,268 ಮೆಗಾವ್ಯಾಟ್ ವಿದ್ಯುತ್ ಬಳಕೆಯಾಗಿತ್ತು. ಕಳೆದ ವರ್ಷ ಅಗಸ್ಟ್ನಲ್ಲಿ ರಾಜ್ಯದಲ್ಲಿ ಪ್ರತಿದಿನ 1500-2000 ಮೆಗಾವ್ಯಾಟ್ ವಿದ್ಯುತ್ ಕೊರತೆಯಾಗಿತ್ತು ಎಂದು ಇಂಧನ ಸಚಿವ ಜಾರ್ಜ್ ಮಾಹಿತಿ ನೀಡಿದರು.

