ಬೆಂಗಳೂರು: ವಾಲ್ಮೀಕಿ ನಿಗಮದಲ್ಲಿ ನಡೆದಿರುವ ಹಗರಣದ ತನಿಖೆಯನ್ನು ಸಿಬಿಐ ಕೈಗೆತ್ತಿಕೊಂಡಿದೆ ಎಂದು ಹೇಳಲಾಗುತ್ತಿದ್ದರೂ, ಪ್ರಕರಣದ ತನಿಖೆ ಹಸ್ತಾಂತರ ಕುರಿತಂತೆ ಈವರೆಗೆ ಸಿಬಿಐನಿಂದ ಯಾವುದೇ ಅಧಿಕೃತ ಪತ್ರ ಬಂದಿಲ್ಲ. ಬಂದರೆ ಪರಿಶೀಲಿಸಿ ಕ್ರಮ ವಹಿಸಲಾಗುತ್ತದೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ತಿಳಿಸಿದ್ದಾರೆ.
ಸಿಬಿಐ ಅಧಿಕಾರಿಗಳಿಗೆ ಮೌಖಿಕವಾಗಿ ಮಾಹಿತಿ ಕೇಳಿದ್ದಾರೆ ಎಂಬ ಮಾಹಿತಿಯಿದೆ. ಅದನ್ನು ಬಿಟ್ಟು, ಅಧಿಕೃತವಾಗಿ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಯಾವುದೇ ಪತ್ರ ಬಂದಿಲ್ಲ. ಒಂದು ವೇಳೆ ನೆನ್ನೆ ಮೊನ್ನೆ ಏನಾದರೂ ಪತ್ರ ಬಂದಿದ್ದರೆ ಪರಿಶೀಲನೆ ನಡೆಸಿ, ಆ ಪ್ರಕಾರ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಪರಮೇಶ್ವರ್ ತಿಳಿಸಿದ್ದಾರೆ.
ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ ಎಂಬ ಅಸಮಾಧಾನವಿದೆ. ಇದಕ್ಕೆ ಈವರೆಗೆ ಚುನಾವಣೆ ನೀತಿ ಸಂಹಿತೆ ಇರುವುದೇ ಕಾರಣವಾಗಿತ್ತು. ಹೀಗಾಗಿ, ಸರ್ಕಾರದ ಮಟ್ಟದಲ್ಲಿ ಯಾವುದೇ ಕೆಲಸ ಕಾರ್ಯಗಳನ್ನು ಮಾಡಲು ಆಗಿರಲಿಲ್ಲ. ಈಗ ಅದಕ್ಕೆಲ್ಲ ಚಾಲನೆ ಕೊಡಲಾಗುತ್ತದೆ. ಅಭಿವೃದ್ಧಿ ಕಾರ್ಯಗಳಿಗೆ ವೇಗ ಸಿಗಲಿದೆ” ಎಂದರು.
ನಮ್ಮೊಳಗೆ ಯಾವುದೇ ಒಳಜಗಳವಾಗಲೀ, ಭಿನ್ನಾಭಿಪ್ರಾಯವಾಗಲೀ ಇಲ್ಲ, ಹಿರಿಯರ ಮಾತಿಗೆ ಬೆಲೆ ಸಿಗುತ್ತಿಲ್ಲ ಎಂದು ನಾನು ಸಂದರ್ಭದ ಅನುಸಾರ ಹೇಳಿದ್ದೇನೆಯೇ ಹೊರತು ಅದೇ ನನ್ನ ಅಸಮಾಧಾನ ಎಂದು ತಿಳಿಯಬೇಕಿಲ್ಲ. ನಮ್ಮ ನಡುವೆ ಎಲ್ಲಿ ಜಗಳವಾಗಿದೆ, ಎಲ್ಲಿ ಗೊಂದಲವಾಗಿದೆ. ಯಾವುದೋ ಒಂದು ವಿಚಾರದಲ್ಲಿ ಭಿನ್ನವಾದ ಅಭಿಪ್ರಾಯ ಬರುವುದು ಸಹಜ. ಒಬ್ಬರು ಹೇಳಿದ್ದನ್ನು ಇನ್ನೊಬ್ಬರು ಕೇಳಬೇಕು ಎನ್ನುವುದಿಲ್ಲ, ಅಭಿಪ್ರಾಯ ಭೇದ ಇದ್ದೇ ಇರುತ್ತದೆ. ಇದನ್ನು ಹೊರತುಪಡಿಸಿದರೆ, ಯಾವುದೇ ಸಮಸ್ಯೆ ಇಲ್ಲ” ಎಂದು ಹಿರಿಯರ ಅಭಿಪ್ರಾಯ ಕಡೆಗಣನೆ ಆರೋಪ ತಳ್ಳಿಹಾಕಿದರು.
17 ಸಚಿವರ ಕ್ಷೇತ್ರಗಳಲ್ಲಿ ಕಾಂಗ್ರೆಸ್ಗೆ ಸೋಲಾಗಿದೆ. ಈ ಸೋಲಿಗೆ ಕಾರಣವೇನು ಎಂಬುದನ್ನು ಪರಾಮರ್ಶೆ ಮಾಡುವುದು ನಮ್ಮೆಲ್ಲರ ಕರ್ತವ್ಯ. ಆತ್ಮಾವಲೋಕನ ಮಾಡಿಕೊಂಡು ಮುಂದೆ ಸಾಗಲೇಬೇಕು. ಈ ವಿಷಯದಲ್ಲಿ ಪಕ್ಷದ ಸೂಚನೆಯನ್ನು ಎಲ್ಲರೂ ಪಾಲನೆ ಮಾಡುತ್ತೇವೆ. ಸರಕಾರಕ್ಕೆ ಸಂಬಂಧಿಸಿದ ವಿಷಯಗಳನ್ನು ಸಚಿವ ಸಂಪುಟದಲ್ಲಿ ಹಂಚಿಕೊಳ್ಳುತ್ತೇವೆ. ಪಕ್ಷಕ್ಕೆ ಸಂಬಂಧಿಸಿದ ತೀರ್ಮಾನ ಕೈಗೊಳ್ಳಲು ಕೋರ್ ಕಮಿಟಿ ಸಭೆ, ಪದಾಧಿಕಾರಿಗಳ ಸಭೆ ಇದೆ. ಇಲ್ಲಿ ಚರ್ಚಿಸಿ ಪರಿಹಾರ ಕಂಡುಕೊಳ್ಳುತ್ತೇವೆ ಎಂದರು.

