ರಾಜಕೀಯ ಸುದ್ದಿ

ವಿಐಎಸ್‌ಎಲ್‌ಗೆ ಶಾಶ್ವತ ಪರಿಹಾರ, ಸಮಯ ಬೇಕು: ಹೆಚ್.ಡಿ.ಕುಮಾರಸ್ವಾಮಿ

Share It

ಭದ್ರಾವತಿ : ವಿಐಎಸ್‌ಎಲ್ ಕಾರ್ಖಾನೆಗೆ ಶಾಶ್ವತ ಪರಿಹಾರಕ್ಕಾಗಿ ಮೂರ್‍ನಾಲ್ಕು ತಿಂಗಳ ಸಮಯವಕಾಶ ಬೇಕಾಗಿದೆ. ಜಡ್ಡು ಹಿಡಿದು ಕುಳಿತ ಸೈಲ್ ಅಧಿಕಾರಿಗಳನ್ನು ರಹದಾರಿಗೆ ತರಬೇಕಾಗಿದೆ. ನಾವು ಈಗಾಗಲೆ ಉನ್ನತ ಅಧಿಕಾರಿಗಳ ಬಳಿ ಕಾರ್ಖಾನೆಯನ್ನು ಉಳಿಸಲು ಬೇಕಾದ ಮಾಹಿತಿಗೆ ಸೂಚಿಸಲಾಗಿದೆ ಎಂದು ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.

ಅವರು ಮಂಗಳವಾರ ಬೆಂಗಳೂರಿನ ಕೆಐಓಸಿಎಲ್ ಕಚೇರಿಯಲ್ಲಿ ಭೇಟಿ ಮಾಡಿದ ಜೆಡಿಎಸ್ ರಾಜ್ಯ ಕಾರ್ಯದರ್ಶಿ ಶಾರದಾ ಅಪ್ಪಾಜಿ ಮತ್ತು ಪಕ್ಷದ ಅಧ್ಯಕ್ಷ ಆರ್.ಕರುಣಾಮೂರ್ತಿ ನೇತೃತ್ವದ ನಿಯೋಗದ ಮನವಿ ಆಲಿಸಿ ಸಂಭಂದಿತ ಅಧಿಕಾರಿಗಳ ಬಳಿ ಮಾತುಕತೆ ನಡೆಸಿದರು. ನಂತರ ನಿಯೋಗಕ್ಕೆ ಇನ್ನು ಮೂರ್‍ನಾಲ್ಕು ತಿಂಗಳಲ್ಲಿ ನುರಿತ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಿ ಶಾಶ್ವತ ಪರಿಹಾರಕ್ಕೆ ಮುನ್ನುಡಿ ಬರೆಯೋಣ ಎಂದರು.

ಮನವಿ ಸಲ್ಲಿಸಿ ಮಾತನಾಡಿದ ಶಾರದಾ ಅಪ್ಪಾಜಿ ಅವರು ರಾಜ್ಯ ಸರಕಾರ ಕೇವಲ ೧ ರೂ ಮುಖ ಬೆಲೆಗೆ ಕಾರ್ಖಾನೆಯನ್ನು ಕೇಂದ್ರ ಸರಕಾರಕ್ಕೆ ಅಭಿವೃದ್ದಿ ಪಡಿಸಲು ನೀಡಿತ್ತು. ಕೇಂದ್ರ ಸರಕಾರವು ವಾಗ್ದಾನದಂತೆ ಬಂಡವಾಳ ಹೂಡದೆ, ಪುನಶ್ಚೇತನಗೊಳಿಸದೆ ಮಲತಾಯಿ ಧೋರಣೆ ತೋರಿದ್ದರಿಂದ ಹೀನ ಸ್ಥಿತಿಗೆ ಬಂದಿದೆ. ಆದರೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಅರೆ ಉಕ್ಕು ಪ್ರಾಧಿಕಾರದಿಂದ ಸಂಪೂರ್ಣ ಸೈಲ್ ಅಧೀನಕ್ಕೆ ಒಪ್ಪಿಸಿದ ಫಲದಿಂದ ಇಂದಿಗೂ ಕಾರ್ಖಾನೆ ಉಸಿರಾಡುತ್ತಿದೆ. ಹಿಂದಿನ ಅನೇಕ ಕೇಂದ್ರ ಸಚಿವರು ಕಾರ್ಖಾನೆಗೆ ಬಂದು ಬಂಡವಾಳ ತೊಡಗಿಸುವುದಾಗಿ ಹೇಳಿ ಮೋಸ ಮಾಡಿದ್ದಾರೆ. ಕೇಂದ್ರದ ನೀತಿ ಆಯೋಗವು ಕಾರ್ಖಾನೆಯನ್ನು ಕ್ಲೋಸರ್ ಮಾಡಲು ಮುಂದಾಗಿದೆ. ಆದರೆ ಸಂಸದ ಬಿ.ವೈ.ರಾಘವೇಂದ್ರ ಕ್ಲೋಸರ್ ಮಾಡಲು ಬಿಡದೆ ಉಳಿಸಿದ್ದಾರೆ.

ಈಗ ನಮ್ಮೆಲ್ಲರ ಅದೃಷ್ಟವೆಂಬಂತೆ ಕರ್ನಾಟಕದ ಹೆಮ್ಮೆಯ ಪುತ್ರರಾಗಿರುವ ನೀವು ದೇವರ ಕೃಪೆಯಿಂದ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವರಾಗಿರುವುದು ಕಾರ್ಮಿಕರ ಪುಣ್ಯವಾಗಿದೆ. ಕಾರ್ಖಾನೆಗೆ ಜೀವ ತುಂಬುವ ಕೆಲಸವೀಗ ನಿಮ್ಮಿಂದ ಆಗಬೇಕಾಗಿದೆ. ಕಾರ್ಮಿಕ ಮತ್ತು ಗುತ್ತಿಗೆ ಕಾರ್ಮಿಕ ಕುಟುಂಬಗಳು ಹಾಗೂ ಲಕ್ಷಾಂತರ ಮಂದಿ ಅವಲಂಭಿತರ ಜೀವನಕ್ಕೆ ಬೆಳಕು ಮೂಡಿದಂತಾಗಿದೆ. ಶಾಶ್ವತ ಪರಿಹಾರ ನಿಮ್ಮಿಂದ ಆಗಿ ಮತ್ತೆ ನೂರ್‍ಕಾಲ ಕಾರ್ಖಾನೆ ಉಸಿರಾಡುವಂತಾಗಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಅಧಿಕಾರಿಗಳ ಸಂಘದ ಅಧ್ಯಕ್ಷ ಪಾರ್ಥಸಾರತಿ ಮಿಶ್ರಾ, ಪ್ರಧಾನ ಕಾರ್ಯದರ್ಶಿ ವಿಕಾಸ್ ಬಷೀರ್, ಕಾರ್ಮಿಕ ಸಂಘದ ಅಧ್ಯಕ್ಷ ಜೆ.ಜಗದೀಶ್, ಉಪಾಧ್ಯಕ್ಷ ಕುಮಾರಸ್ವಾಮಿ, ಪ್ರಧಾನ ಕಾರ್ಯದರ್ಶಿ ಬಸಂತಕುಮಾರ್, ಕಾರ್ಯದರ್ಶಿ ಕೆ.ಆರ್.ಮನು, ಖಜಾಂಚಿ ಎಸ್.ಮೋಹನ್, ಗುತ್ತಿಗೆ ಕಾರ್ಮಿಕ ಸಂಘದ ಅಧ್ಯಕ್ಷ ಸುರೇಶ್, ಕಾರ್ಯದರ್ಶಿ ರಾಕೇಶ್, ಕುಮಾರಸ್ವಾಮಿ, ವಿನಯಕುಮಾರ್, ತ್ರಿವೇಣಿ ಮುಂತಾದವರಿದ್ದರು.


Share It

You cannot copy content of this page