ಮೈಸೂರು: ಭಾರತ ದೇಶವು ವಿಶ್ವಸಂಸ್ಥೆಯ ಮೇಲೆ ಪ್ರಭಾವ ಬೀರಿ ಯೋಗವನ್ನು ಅಂತರಾಷ್ಟ್ರೀಯ ದಿನವನ್ನಾಗಿ ಆಚರಣೆ ಮಾಡಲು ಘೋಷಣೆ ಮಾಡಿ ಇಂದಿಗೆ ಹತ್ತು ವರ್ಷವಾಗಿದೆ. ಶಿಸ್ತು ಬದ್ಧ ಜೀವನ ನಡೆಸಲು ಯೋಗ ಅತ್ಯಂತ ಪ್ರೇರಣೆಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ತಿಳಿಸಿದರು.
ನಗರದ ಅರಮನೆ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಆಯುಷ್ ಇಲಾಖೆ ವತಿಯಿಂದ
ನಡೆದ ಹತ್ತನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿ, ಯೋಗದ ನಿಯಮಗಳನ್ನು ಪಾಲಿಸುವಲ್ಲಿ ಭಾರತ ಪ್ರಪಂಚದ ಇತರ ರಾಷ್ಟ್ರಗಳಿಗಿಂತ ಮುಂಚೂಣಿಯಲ್ಲಿದೆ. ಯೋಗ ಮಾಡುವುದರಿಂದ ನಮ್ಮ ದೇಹದ ನಿಯಂತ್ರಣ, ಅಂಗಾಂಗಗಳ ಪರಿಪೂರ್ಣ ಮತ್ತು ಕ್ರಮಬದ್ಧವಾದ ಕಾರ್ಯ ಚಟುವಟಿಕೆ, ಮನಸ್ಸಿನ ಸಮತೋಲನ ಆರೋಗ್ಯದ ವೃದ್ಧಿ, ಶಿಸ್ತು ಬದ್ಧವಾದ ಜೀವನ ನಡೆಸಲು ಅತ್ಯಂತ ಪ್ರೇರಣೆಯಾಗಿರುವುದು ಆರೋಗ್ಯ ಎಂದು ಹೇಳಿದರು.
ಯೋಗವನ್ನು ನಿಯಮ ಬದ್ಧವಾಗಿ ಪಾಲನೆ ಮಾಡುವುದರಿಂದ ಶಿಸ್ತು ಬದ್ಧ ಜೀವನ ನಡೆಸಿ, ಆರೋಗ್ಯದ ವೃದ್ಧಿ ಮಾಡಿಕೊಂಡು ಸಮಾಜ ಹಾಗೂ ಕುಟುಂಬವನ್ನು ಲವಲವಿಕೆಯಿಂದ ನೋಡಿಕೊಂಡು ಹೋಗಬಹುದು. ಕಳೆದು ಬಾರಿ ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದ ಸಂದರ್ಭದಲ್ಲಿ ರೈಸ್ ಕೋರ್ಸ್ ನಲ್ಲಿ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಮಾಡಿ ವಿಶ್ವ ಗಿನ್ನಿಸ್ ದಾಖಲೆಯನ್ನು ಮೈಸೂರು ಮಾಡಿತ್ತು ಎಂದರು. ನಿರ್ದಿಷ್ಟವಾದ ದೇಹದ ಸಮಸ್ಯೆಗಳಿಗೆ ನಿರ್ದಿಷ್ಟವಾದ ಯೋಗ ಕ್ರಿಯೆಗಳನ್ನು ಮಾಡಿದ್ದಲ್ಲಿ ಆರೋಗ್ಯಯುತವಾಗಿರಲು ಸಾಧ್ಯ ಎಂಬುದನ್ನು ವೈದ್ಯಕೀಯ ಶಾಸ್ತ್ರ ಹಾಗೂ ತಜ್ಞರು ಹೇಳಿದ್ದಾರೆ ಎಂದರು.
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಮಾತನಾಡಿ, ಮೈಸೂರಿನಲ್ಲಿ ಯೋಗ ದಿನಾಚರಣೆಯನ್ನು ಪ್ರತಿ ವರ್ಷವೂ ಬಹಳ ದೊಡ್ಡ ಮಟ್ಟದಲ್ಲಿ ಆಚರಣೆ ಮಾಡುತ್ತಾ ಬಂದಿದ್ದೇವೆ. ಭಾರತದಲ್ಲಿ ಆಧುನಿಕ ಕಾಲದ ಯೋಗ ಮೈಸೂರಿನಿಂದ ಸೃಷ್ಟಿಯಾಗಿದೆ ಎಂದರೆ ತಪ್ಪಿಲ್ಲ. ಅಂದಿನ ಕಾಲದ ಶ್ರೀತತ್ವ ನಿಧಿಯಲ್ಲಿ 108 ಆಸನಗಳನ್ನು ದಾಖಲೆ ಮಾಡಿ ಮುಮ್ಮಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಯೋಗ ಅಭ್ಯಾಸ ಮೈಸೂರಿನಲ್ಲಿ ಶುರುವಾಗಿತ್ತು ಎಂದರು.
ಹಿಂದಿನ ಪರಂಪರೆಯ ರಾಯಭಾರಿಯಾಗಿ ಇಂದು ಯೋಗ ದಿನಾಚರಣೆಯನ್ನು ಆಚರಣೆ ಮಾಡುತ್ತಿದ್ದೇವೆ. ದಸರಾ ಸಂದರ್ಭದಲ್ಲಿ ಯೋಗ ದಿನವನ್ನು ಗಿನ್ನಿಸ್ ದಾಖಲೆಗೆ ಮಾಡಲು ಸಿದ್ಧವಾಗಬೇಕು ಇದಕ್ಕೆ ನಮ್ಮ ಸಹಕಾರ ಇರುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಾಸಕ ಶ್ರೀವತ್ಸ, ವಿಧಾನ ಪರಿಷತ್ ಶಾಸಕರಾದ ಸಿ.ಎನ್.ಮಂಜೇಗೌಡ, ಜಿಲ್ಲಾಧಿಕಾರಿ ಡಾ ಕೆ ವಿ ರಾಜೇಂದ್ರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಂ.ಗಾಯಿತ್ರಿ, ಅಪರ ಜಿಲ್ಲಾಧಿಕಾರಿ ಡಾ.ಪಿ.ಶಿವರಾಜು ಆಯುಷ್ ವೈದ್ಯಾಧಿಕಾರಿ ಡಾ.ಪುಷ್ಪ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ಉಪಸ್ಥಿತರಿದ್ದರು.
ಮಂಜುನಾಥ್ ಗುಡಿಹಳ್ಳಿ, ರಿಪೋರ್ಟರ್
