ಶಿವಮೊಗ್ಗ: ಬಡ್ಡಿ ವ್ಯವಹಾರ ನಡೆಸುವ ಮೂಲಕ ಹಣ ಪಡೆದವರಿಗೆ ಕಿರುಕುಳ ನೀಡುವ ವ್ಯವಹಾರಸ್ಥರಿಗೆ ಪೋಲೀಸರು ಶಾಕ್ ನೀಡಿದ್ದು, ಆರೋಪಿಗಳನ್ನು ಬಂಧಿಸಿದ್ದಾರೆ.
ಶಿವಮೊಗ್ಗ ಜಿಲ್ಲೆಯ ದೊಂದಿ ಚಟ್ನಳ್ಳಿ ಗ್ರಾಮದ ರಂಗನಾಥ್ ಎಂಬ ವ್ಯಕ್ತಿ, ತಮ್ಮದೇ ಗ್ರಾಮದ ಅನಿಲ್, ರಾಜಣ್ಣ, ಫ್ರಭಣ್ಣ, ವಿಜಯೇಂದ್ರಣ್ಣ, ಪ್ರದೀಪ ಮತ್ತು ಹಾಲೇಶಪ್ಪ ಎಂಬುವವರ ಬಳಿ ಪ್ರತಿ ತಿಂಗಳು ಶೇ. ೩ರಷ್ಟು ಬಡ್ಡಿಗೆ ಸಾಲವನ್ನು ಪಡೆದುಕೊಂಡಿದ್ದರು.
ಸಾಲದ ಹಣ ಮತ್ತು ಬಡ್ಡಿಯನ್ನು ನೀಡಲು ಸಾಧ್ಯವಾಗದ ಕಾಋಣಕ್ಕೆ ಮೇಲಿನ ವ್ಯಕ್ತಿಗಳು ರಂಗನಾಥ್ ಅವರ ಮನೆಯ ಬಳಿ ಬಂದು ಗಲಾಟೆ ಮಾಡಿದ್ದು, ಈ ಕುರಿತು ರಂಗನಾಥ್ ಶಿವಮೊಗ್ಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು.
ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ನೇತೃತ್ವದ ತಂಡ ಗೊಂದಿ ಚಟ್ನಳ್ಳಿ ಗ್ರಾಮಕ್ಕೆ ತೆರಳಿ ಆರೋಪಿಗಳ ಮನೆಯ ಮೇಲೆ ದಾಳಿ ನಡೆಸಿ, ಅವರನ್ನು ವಶಕ್ಕೆ ಪಡೆದುಕೊಂಡಿದೆ.
ಅಲ್ಲದೆ, ಇದೇ ವ್ಯವಹಾರದಲ್ಲಿ ತೊಡಗಿದ್ದು, ಆರೋಪಿಗಳ ಮನೆಗಳಿಂದ ೨೧೭ ಸಹಿ ಇರುವ ಖಾಲಿ ಚೆಕ್ಗಳು, ಪ್ರಾಮಿಸರಿ ನೋಟ್ ಗಳು, ನಿವೇಶನ ಮತ್ತು ವಾಹನಗಳ ದಾಖಲೆಗಳನ್ನು ವಶಪಡಿಸಿಕೊಂಡಿದ್ದು, ಅವರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.
ಬಡ್ಡಿ ದಂಧೆಯಲ್ಲಿ ತೊಡಗಿದ್ದವರ ಕಾಟದಿಂದ ಬೇಸತ್ತಿದ್ದವರು, ಪೊಲೀಸರ ಕ್ರಮದಿಂದ ನಿಟ್ಟುಸಿರುಬಿಟ್ಟಿದ್ದು, ಪೊಲೀಸರ ನಡೆಯನ್ನು ಶ್ಲಾಘಿಸಿದ್ದಾರೆ.
ಮುಂದೆ ಯಾರಾದರೂ ಇಂತಹ ಕಿರುಕುಳಕ್ಕೆ ಒಳಗಾದರೆ, ಪೊಲೀಸರನ್ನು ಸಂಪರ್ಕಿಸಿ ದೂರು ನೀಡುವಂತೆ ಪೊಲೀಸ್ ಅಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.