ರಾಜಕೀಯ ಸುದ್ದಿ

ಏರ್ ಸ್ಟ್ರೈಕ್ ಮೂಲಕ ಪಾಕ್ ಮತ್ತು ಉಗ್ರರಿಗೆ ಮೋದಿ ತಕ್ಕ ಉತ್ತರ ಕೊಟ್ಟಿದ್ದಾರೆ : ಸಂಸದ ಜಗದೀಶ ಶೆಟ್ಟರ್

Share It


ಹುಬ್ಬಳ್ಳಿ :-ಪಾಕಿಸ್ತಾನದ ಉಗ್ರರ ತಾಣಗಳಲ್ಲಿ ಏರ್ ಸ್ಟ್ರೈಕ್ ಮಾಡುವ ಮೂಲಕ ಉಗ್ರರಿಗೆ ಭಾರತ ತಕ್ಕ ಉತ್ತರ ಕೊಟ್ಟಿದೆ. ಪಾಕಿಸ್ತಾನದ ಸೈನ್ಯ ಮತ್ತು ನಾಗರಿಕ ಪ್ರದೇಶಗಳಿಗೆ ಹಾನಿ ಮಾಡದೆ, ಪಹಲ್ಗಾಮ್ ನಲ್ಲಿ ದಾಳಿ ನಡೆಸಿ 26 ಭಾರತೀಯ ಅಮಾಯಕ ಹೆಣ್ಣು ಮಕ್ಕಳ ಕುಂಕುಮ ಅಳಿಸಿದ ಉಗ್ರರರಿಗೆ ನಮ್ಮ ದೇಶ “ಆಪರೇಷನ್ ಸಿಂಧೂರ್”ದ ಮೂಲಕ ಪ್ರತ್ಯುತ್ತರ ನೀಡಿ, ಪ್ರತಿಕಾರ ತೀರಿಸಿಕೊಂಡಿದೆ. ಉಗ್ರ ಸಂಘಟನೆ ಹಾಗೂ ಅವುಗಳಿಗೆ ನೆಲೆಯಾಗಿರುವ ಪಾಕಿಸ್ತಾನಕ್ಕೆ ಇಂದು ಸರಿಯಾದ ಉತ್ತರ ದೊರೆತಿದೆ. ದೇಶವಾಸಿಗಳ ಕೋರಿಕೆ ಈಡೇರಿದೆ ಎಂದು ಕೇಂದ್ರ ಸಂಸದ ಜಗದೀಶ್ ಶೆಟ್ಟರ್ ಸಂತಸ ವ್ಯಕ್ತಪಡಿಸಿದರು.

ಶಾಂತಿಯನ್ನು ನಾವೂ ಸಹ ಬಯಸುತ್ತೇವೆ ಆದರೆ ದುಷ್ಟತನದ ಮುಂದೆ ಮೌನವಾಗಿರಲು ಸಾದ್ಯವಿಲ್ಲ, ಎಂಬುದನ್ನು ನಮ್ಮ ದೇಶದ ಹೆಮ್ಮೆಯ ಸೈನಿಕರು ತೋರಿಸಿಕೊಟ್ಟಿದ್ದಾರೆ. ಅವರಿಗೆ ದೊಡ್ಡ ಸಲಾಂ, ಸೈನಿಕರಿಗೆ ನಮ್ಮ ಬೆಂಬಲ ಸದಾ ಇರುತ್ತದೆ ಎಂದರು.

ಲಾಂಚ್ ಪ್ಯಾಡ್ ಗಳು ಮತ್ತು ತರಬೇತಿ ಕೇಂದ್ರಗಳನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನ ಮತ್ತು ಪಿಒಕೆಯ 9 ಕಡೆಗಳಲ್ಲಿ ದಾಳಿ ನಡೆಸಿದ್ದು, ಉಗ್ರರ ನೆಲೆಗಳನ್ನು ಧ್ವಂಸ ಮಾಡಲಾಗಿದೆ, ಅಮಾಯಕರ ಜೀವ ತೆಗೆದು ಅಟ್ಟಹಾಸ ಮೆರೆದ ಉಗ್ರರಿಗೆ ನಮ್ಮ ಸೇನೆ ಇಂದು ನರಕ ದರ್ಶನ ಮಾಡಿಸಿದೆ ಎಂದು ಅವರು ಹೇಳಿದರು.

ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ಇಂತಹ ಕಾರ್ಯಾಚರಣೆ ನಡೆದಿರುವುದು ಅವರ ಸಮರ್ಥ ನಾಯಕತ್ವಕ್ಕೆ ಹಿಡಿದ ಕೈಗನ್ನಡಿ, ಸೈನ್ಯಕ್ಕೆ ಅವರು ನೀಡುವ ಬೆಂಬಲ, ಸೈನಿಕರ ಮೇಲೆ ಅವರಿಗಿರುವ ನಂಬಿಕೆ, ಅವರು ನೀಡಿದ ಪ್ರೋತ್ಸಾಹ ಎಲ್ಲವೂ ಶ್ಲಾಘನೀಯ. ಮೋದಿಯವರನ್ನು ಹೊರತು ಪಡಿಸಿ ಇನ್ನಾರಿಗೂ ಈ ಕಾರ್ಯ ಮಾಡಲು ಆಗುತ್ತಿರಲಿಲ್ಲ. ನಮ್ಮ ಸೈನಿಕರ ಶೌರ್ಯ ಹಾಗೂ ಸಮರ್ಪಣಾ ಭಾವಕ್ಕೆ ನಾನು ಸದಾ ಚಿರಋಣಿ.

ಇದೇ ರೀತಿ ಪಾಕಿಸ್ತಾನ ಭಯೋತ್ಪಾದಕರಿಗೆ ಸಹಾಯ ಮಾಡಿದರೆ ಅವರಿಗೂ ತಕ್ಕ ಉತ್ತರ ನೀಡಲಾಗುತ್ತದೆ, ಓಲೈಕೆ ರಾಜಕಾರಣ ಮಾಡುತ್ತಾ ಬಂದಿರುವ ಕಾಂಗ್ರೆಸ್ ಶಾಂತಿ ಮಂತ್ರ ಜಪಿಸುತ್ತಾ ಕುಳಿತಿರಲಿ, ದೇಶಭಕ್ತಿಯೇ ಇಲ್ಲದಿರುವ ಇವರಿಂದ ಇನ್ನಾವರೀತಿಯ ಪ್ರತಿಕ್ರಿಯೆಯನ್ನು ಬಯಸಲು ಸಾದ್ಯ? ಟ್ವೀಟ್ ಮೂಲಕ ಶಾಂತಿಯ ಪಾಠಮಾಡಿದ ಇವರು ವ್ಯಾಪಕ ಟೀಕೆಗಳು ಬಂದ ನಂತರ ಅದನ್ನು ಡಿಲಿಟ್ ಮಾಡಿದ್ದಾರೆ. ದೇಶದ ಸುರಕ್ಷತೆಗಿಂತ ಇವರಿಗೆ ಇವರ ಅಲ್ಪಸಂಖ್ಯಾತರ ಓಲೈಕೆ ರಾಜಕಾರಣ ಮುಖ್ಯವಾಗಿರುವುದು ನೋವಿನ ಸಂಗತಿ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Share It

You cannot copy content of this page