ಕಾಲುವೆಗಳ ಅಕ್ಕ-ಪಕ್ಕದಲ್ಲಿ 30-40 ಅಡಿ ರಸ್ತೆ ನಿರ್ಮಾಣ: ಡಿ.ಕೆ.ಶಿವಕುಮಾರ್
ಬೆಂಗಳೂರು: ನಗರದ ಕಾಲುವೆಗಳ ಅಕ್ಕ-ಪಕ್ಕದಲ್ಲಿ 30-4೦ ಅಡಿ ರಸ್ತೆ ನಿರ್ಮಾಣ ಮಾಡುತ್ತೇವೆ. ಒಟ್ಟು 3೦೦ ಕಿ.ಮಿ ರಸ್ತೆ ನಿರ್ಮಾಣ ಮಾಡಲು ನಿರ್ಧಾರ ಮಾಡಿದ್ದೇವೆ. ಮೊದಲ ಹಂತದಲ್ಲಿ 1೦೦ ಕಿ.ಮೀ ನಿರ್ಮಾಣ ಮಾಡುತ್ತೇವೆ. 2೦೦ ಕೋಟಿ ರೂ. ಹಣವನ್ನು ಮೀಸಲು ಇಟ್ಟಿದ್ದೇವೆ. ರಸ್ತೆ ನಿರ್ಮಾಣಕ್ಕೆ ಯಾರು ಜಾಗ ಬಿಟ್ಟು ಕೊಡುತ್ತಾರೆ ಅವರಿಗೆ ಪರಿಹಾರ ಕೊಡುತ್ತೇವೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದರು.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿರೋಧ ಪಕ್ಷದ ಶಾಸಕರ ಜೊತೆಗೆ ಚರ್ಚೆ ಮಾಡಿದ್ದು, ಈ ರಸ್ತೆಯಲ್ಲಿ ಸರ್ಕಾರಿ, ಖಾಸಗಿ ಬಸ್ಗಳಿಗೆ ಅವಕಾಶ ಇಲ್ಲ. ಸ್ಥಳೀಯ ವಾಹನಗಳಿಗೆ ಮತ್ತು ಶಾಲಾ ಬಸ್ಗಳಿಗೆ ಮಾತ್ರ ಅವಕಾಶ ನೀಡಲಾಗುವುದು ಎಂದು ತಿಳಿಸಿದರು.
ಬೆಂಗಳೂರು ನಗರದಲ್ಲಿ 2795ರಸ್ತೆ ಗುಂಡಿಗಳನ್ನ ಗುರುತಿಸಿದ್ದೇವೆ. 15 ದಿನಗಳಲ್ಲಿ ರಸ್ತೆ ಗುಂಡಿ ಮುಚ್ಚಲು ಡೆಡ್ಲೈನ್ ಕೊಟ್ಟಿದ್ದೇವೆ. ಮುಖ್ಯ ರಸ್ತೆಗಳಿಗೆ 660 ಕೋಟಿ ರೂಪಾಯಿ ವೆಚ್ಚ ಮಾಡುತ್ತೇವೆ. 15 ದಿನಗಳ ಬಳಿಕ ನಾನೇ ಬೆಂಗಳೂರು ರೌಂಡ್ಸ್ ಹೋಗುತ್ತೇನೆ. ನನ್ನದೇ ಹಳೆಯ ಬೈಕ್ ರೆಡಿ ಮಾಡಿಸಿದ್ದೇನೆ. ಬೈಕ್ನಲ್ಲಿ ಆಯುಕ್ತರನ್ನು ಕೂರಿಸಿಕೊಂಡು ಹೋಗಿ ಬರುತ್ತೇನೆ ಎಂದು ಹೇಳಿದ್ದಾರೆ.
ಎತ್ತಿನಹೊಳೆ ಯೋಜನೆಯನ್ನು ಗೌರಿ ಹಬ್ಬದ ದಿನ ಶುಭ ಮುಹೂರ್ತ ಮಧ್ಯಾಹ್ನ 12:5ಕ್ಕೆ ಉದ್ಘಾಟನೆ ಮಾಡಲಿದ್ದೇವೆ. ಈ ಶುಭ ಕಾರ್ಯಕ್ಕೆ ಪಕ್ಷಾತೀತವಾಗಿ ಭಾಗಿಯಾಗಬೇಕು. ರೈತರು, ಸಾರ್ವಜನಿಕರು ಭಾಗಿಯಾಗಿ. ಆಮಂತ್ರಣ ಬಂದಿಲ್ಲ ಅಂತ ಮನೆಯಲ್ಲಿ ಯಾರೂ ಇರಬಾರದು. ಸರ್ಕಾರದಿಂದ ಆಹ್ವಾನ ನೀಡುತ್ತಿದ್ದೆನೆ ಎಂದು ಆಹ್ವಾನಿಸಿದರು.
ಸಿಎಂ ಆಗುವ ಆಕಾಂಕ್ಷೆ ವ್ಯಕ್ತಪಡಿಸಿದ ಶಾಸಕ ಆರ್.ವಿ.ದೇಶಪಾಂಡೆ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಸಿದ್ದರಾಮಯ್ಯ ಸಿಎಂ ಸ್ಥಾನದಲ್ಲಿ ಮುಂದುವರಿಯುತ್ತಾರೆ. ಆರ್.ವಿ. ದೇಶಪಾಂಡೆ ಹಿರಿಯರು, ಆಸೆ ಇಟ್ಟುಕೊಳ್ಳುವುದರಲ್ಲಿ ತಪ್ಪಿಲ್ಲ. ಅದರೆ ಮಾಧ್ಯಮಗಳಿಗೆ ಹೇಳಿಕೆ ಕೊಡುವುದು ಸರಿಯಲ್ಲ. ದೇಶಪಾಂಡೆ ಅವರಿಗೆ ಏನು ಗೌರವ ಕೊಡಬೇಕೋ ಕೊಡುತ್ತೇವೆ ಎಂದು ಹೇಳಿದರು.


