ನವಲಗುಂದ : ಹುಬ್ಬಳ್ಳಿಯ ಬಿ.ವಿ.ಬಿ. ಕಾಲೇಜು ಆವರಣದಲ್ಲಿ ವಿದ್ಯಾರ್ಥಿನಿ ನೇಹಾಳಿಗೆ ಚಾಕು ಹಾಕಿ ಕೊಲೆಗೈದ ದುಷ್ಕರ್ಮಿ ಪೈಯಾಜಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ವಿವಿಧ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದವು.
ಪಟ್ಟಣದ ಗಣಪತಿ ದೇವಸ್ಥಾನದಿಂದ ಹನುಮಾನ ಜಾಗರಣೆ ಸಮಿತಿ, ಶಂಕರ್ ಕಾಲೇಜ, ಸರ್ಕಾರಿ ಪದವಿ ಕಾಲೇಜ ಹಾಗೂ ಜಂಗಮ ಸಮಾಜದ ಮುಖಂಡರು ಮತ್ತು ವಿವಿಧ ಹೋರಾಟ ಸಮಿತಿಗಳಿಂದ ಪ್ರತಿಭಟನೆ ರ್ಯಾಲಿ ಮೂಲಕ ತಹಸಿಲ್ದಾರ್ ಕಚೇರಿಗೆ ತೆರಳಿ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ತಾಲೂಕ ಜಂಗಮ ಸಮಾಜದ ಅಧ್ಯಕ್ಷ ಶ್ರೀಶೈಲ್ ಮೂಲಿಮನಿ ಅವರು ಕಾಲೇಜ ಆವರಣದಲ್ಲಿಯೇ ಚಾಕು ಇರಿದಿದ್ದರಿಂದ ಸ್ಥಳದಲ್ಲಿಯೇ ನೇಹಾ ಮೃತಪಟ್ಟಿರುತ್ತಾಳೆ. ಇದಕ್ಕೆ ನೇರವಾಗಿ ಕಾರಣೀಕರ್ತನಾದ ಫಯಾಜ್ನಿಗೆ ಮರಣದಂಡನೆ ವಿಧಿಸಬೇಕು. ಹಾಗೂ ರಾಜ್ಯದಲ್ಲಿ ಹೆಣ್ಣುಮಕ್ಕಳ ಮೇಲೆ ಪದೇ ಪದೇ ದೌರ್ಜನ್ಯ, ಅತ್ಯಾಚಾರದಂಥಾ ಅಮಾನವೀಯ ಕೃತ್ಯಗಳು ನಡೆಯುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟುನಿಟ್ಟಾಗಿ ಕಾನೂನು ಪಾಲಿಸಬೇಕೆಂದು ಸೂಕ್ತ ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ದೇವರಾಜ ದಾಡಿಬಾವಿ ಶಶಿಧರ ಹಿರೇಮಠ ಬಸವರಾಜ ಕೆರಿಮಠ ಜ್ಞಾನೇಂದ್ರ ವಿಶ್ವಜ್ಞ ನಾಗರಾಜ ಶೇಲನ್ನವರ ಶರತ ಬಸವಂತಕರ ವಿಠ್ಠಲ ಜಮಾದಾರ ವಿನಾಯಕ ದಾಡಿಬಾವಿ ಸುನಿಲ ನರಗುಂದ ಪ್ರಭುಗೌಡ ಇಬ್ರಾಹಿಂಪುರ ಶಶಿಧರ ಭರತಭೋಜನ ಮಠ ವಿದ್ಯಾರ್ಥಿನಿಯರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.