ಉಪಯುಕ್ತ ಸುದ್ದಿ

ಹೆದ್ದಾರಿ ಬದಿಯ ಗ್ರಾನೈಟ್ ಮಳಿಗೆ, ಜಾಹೀರಾತು ಫಲಕಕ್ಕೆ ಶುಲ್ಕ ವಿಧಿಸಿ: ಖಂಡ್ರೆ

Share It

ಬೆಂಗಳೂರು : ಗ್ರಾಮಪಂಚಾಯತಿ ವ್ಯಾಪ್ತಿಯಲ್ಲಿರುವ ಹೆದ್ದಾರಿ, ರಾಜ್ಯ ಮುಖ್ಯರಸ್ತೆ ಪಕ್ಕದಲ್ಲಿ ವಾಣಿಜ್ಯ ಚಟುವಟಿಕೆ ನಡೆಸುವ ಗ್ರಾನೈಟ್, ಮಾರ್ಬಲ್ ಮಾರಾಟದ ತಾತ್ಕಾಲಿಕ ಮಳಿಗೆಗಳು, ಢಾಬಾಗಳು, ಹೋಟೆಲ್ ಇತ್ಯಾದಿಗಳಿಗೆ ನಿಯಮಾನುಸಾರ ಶುಲ್ಕ, ತೆರಿಗೆ ವಿಧಿಸಲು ಸಮಿತಿ ರಚಿಸುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ ಸೂಚನೆ ನೀಡಿದ್ದಾರೆ.

ಇಲಾಖೆಯ ಕಾರ್ಯದರ್ಶಿಯವರಿಗೆ ಲಿಖಿತ ಸೂಚನೆ ನೀಡಿರುವ ಸಚಿವರು, ಹೆದ್ದಾರಿ, ಜಿಲ್ಲಾ ಮುಖ್ಯರಸ್ತೆ ಪಕ್ಕದಲ್ಲಿರುವ ಗ್ರಾಮಪಂಚಾಯತಿ ವ್ಯಾಪ್ತಿಯ ಕಂದಾಯ ಭೂಮಿಯಲ್ಲಿ ತಾತ್ಕಾಲಿಕ ಶೆಡ್ ನಿರ್ಮಿಸಿ ಗ್ರಾನೈಟ್ ಇತ್ಯಾದಿ ಮಾರಾಟ ಮಾಡುವ, ಹೋಟೆಲ್, ಢಾಬಾ, ಅಂಗಡಿ, ಮಳಿಗೆಗಳು ಕಾರ್ಯ ನಿರ್ವಹಿಸುತ್ತಿದ್ದರೂ ಇದರಿಂದ ಪಂಚಾಯತಿಗಳಿಗೆ ಸೂಕ್ತ ಆದಾಯ ಬರುತ್ತಿಲ್ಲ ಹೀಗಾಗಿ ಶುಲ್ಕ ವಿಧಿಸುವ ಬಗ್ಗೆ ನಿರ್ದೇಶನ ನೀಡಿದ್ದಾರೆ.

ಇದರ ಜತೆಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಆಯಕಟ್ಟಿನ ಜಾಗಗಳಲ್ಲಿ ಬೃಹತ್ ಫಲಕಗಳನ್ನು ಹಾಕಿ ಜಾಹೀರಾತುಗಳನ್ನು ಪ್ರದರ್ಶಿಸಲಾಗುತ್ತದೆ. ಮನೆಗಳಿಗೂ ಬಣ್ಣ ಬಳಿದು ಜಾಹೀರಾತು ಪ್ರದರ್ಶಿಸಲಾಗುತ್ತದೆ. ಆದರೆ, ವಾಣಿಜ್ಯ ವಹಿವಾಟು ನಡೆಯುವ ಈ ಎಲ್ಲ ಪ್ರದೇಶ ವಾಣಿಜ್ಯ ಉದ್ದೇಶಕ್ಕೆ ಭೂಪರಿವರ್ತನೆ ಆಗಿರುವುದಿಲ್ಲ. ಈ ನಿಟ್ಟಿನಲ್ಲಿ ಸಮಿತಿ ರಚಿಸಿ, ವರದಿ ಪಡೆದು ವಾಣಿಜ್ಯ ವಹಿವಾಟು ಮತ್ತು ಜಾಹೀರಾತು ಪ್ರದರ್ಶನದ ಭೂಮಿಗೆ ಶುಲ್ಕ ವಿಧಿಸಲು ನಿಯಮ ರೂಪಿಸುವಂತೆ ಸೂಚನೆ ನೀಡಿದ್ದಾರೆ.


Share It

You cannot copy content of this page