ಬೆಂಗಳೂರು: ಸಾಲ ತೀರಿಸಲು ಸಾಧ್ಯವಿಲ್ಲ ಎಂದು ಪತ್ರ ಬರೆದಿಟ್ಟು ಬ್ಯಾಂಕ್ ಉದ್ಯೋಗಿಯೊಬ್ಬರು ಮನೆಬಿಟ್ಟು ಹೋಗಿರುವ ಘಟನೆ ರಾಜಧಾನಿಯ ಅನ್ನಪೂರ್ಣೇಶ್ವರಿ ನಗರ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಆನ್ಲೈನ್ ಟ್ರೇಡಿಂಗ್ ಚಟಕ್ಕೆ ಬಿದ್ದಿದ್ದ ಮುದ್ದಿನಪಾಳ್ಯದಲ್ಲಿ ನಿವಾಸಿ ಭರತ್ ಎಂಬ ಬ್ಯಾಂಕ್ ಉದ್ಯೋಗಿ 20 ಲಕ್ಷ ರೂಪಾಯಿ ಕಳೆದುಕೊಂಡಿದ್ದು, ಇದಕ್ಕಾಗಿ ಮಾಡಿದ ಸಾಲ ಸೇರಿ 20 ಲಕ್ಷಕ್ಕೂ ಅಧಿಕ ಸಾಲ ಮಾಡಿಕೊಂಡಿದ್ದರು.
ಭರತ್ಗಾಗಿ ಅವರ ಪತ್ನಿ ಎಲ್ಲ ಕಡೆ ಹುಡುಕಾಟ ನಡೆಸಿ, ಸಿಗದೆ ಇದ್ದಾಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಭರತ್ ಪತ್ನಿ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನನ್ನ ಪತಿ ಇಎಂಐ ಕಟ್ಟಲು ಸಾಧ್ಯವಾಗುತ್ತಿಲ್ಲವೆಂದು ಪುಸ್ತಕದಲ್ಲಿ ಬರೆದಿಟ್ಟು ಬೈಕ್ನಲ್ಲಿ ಮನೆಬಿಟ್ಟು ತೆರಳಿದ್ದು, ನಾಪತ್ತೆಯಾಗಿದ್ದಾರೆ. ಭರತ್ ಖಾಸಗಿ ಬ್ಯಾಂಕ್ನಲ್ಲಿ ಕೆಲಸ ಮಾಡಿಕೊಂಡಿದ್ದು, 2 ದಿನಗಳಿಂದ ಮನೆಗೆ ಬಾರದೇ ಫೋನ್ ಸಂಪರ್ಕದಲ್ಲಿದ್ದರು ಎಂದು ಪತ್ನಿ ದೂರಿನಲ್ಲಿ ತಿಳಿಸಿದ್ದಾರೆ.
ಅ.9 ರಂದು ಬೆಳಗ್ಗೆ 7 ಗಂಟೆಯಲ್ಲಿ ಕಾರ್ ಪಾರ್ಕಿಂಗ್ ಜಾಗದಲ್ಲಿ ಒಂದು ಪುಸ್ತಕ ಸಿಕ್ಕಿದ್ದು, ಅದರಲ್ಲಿ ನನ್ನ ಸಾಲ ಹೆಚ್ಚಾಗಿದೆ. ಇಎಂಐ ಕಮಿಟ್ಮೆಂಟ್ಸ್ ಕಟ್ಟಲು ಸಾಧ್ಯವಾಗುತ್ತಿಲ್ಲ. ನಾನು ಜೀವನದಲ್ಲಿ ಸೋತಿದ್ದೇನೆ ಎಂದು ಬರೆದಿರುವುದು ಕಂಡು ಬಂದಿದ್ದು, ಪತಿಯನ್ನು ಹುಡುಕಿಕೊಡಿ ಎಂದು ಪತ್ನಿ ಮನವಿ ಮಾಡಿದ್ದಾರೆ.
ತನ್ನೆಲ್ಲ ಮೊಬೈಲ್ಗಳನ್ನು ಭರತ್ ಮನೆಯಲ್ಲಿಯೇ ಬಿಟ್ಟುಹೋಗಿದ್ದು, ಮೊಬೈನ್ನಲ್ಲಿ ಸೆಲ್ಫಿ ವಿಡಿಯೋವೊಂದು ಪತ್ತೆಯಾಗಿದೆ. ಅದರಲ್ಲಿ ನಾನು ಜೀವನದಲ್ಲಿ ಸೋತಿದ್ದೇನೆ. ಹುಡುಕಬೇಡಿ ಎಂದಿದ್ದಾರೆ. ಪೊಲೀಸರು, ಮೈಸೂರು, ತುಮಕೂರು, ದೊಡ್ಡಬಳ್ಳಾಪುರ ಭಾಗದಲ್ಲಿ ಹುಟುಕಾಟ ನಡೆಸಿದ್ದಾರೆ.