ರಾಮನಗರ: ತುಂಬು ಗರ್ಭೀಣಿಯೊಬ್ಬರಿಗೆ ಕೆಎಸ್ಆರ್ಟಿಸಿ ಬಸ್ಸೇ ಅಂಬ್ಯುಲೆನ್ಸ್ ಆಗಿ ಬದಲಾಗಿದ್ದು, ಗರ್ಭಿಣಿಯೊಬ್ಬರು ಅವಳಿ ಮಕ್ಕಳೀಗೆ ಜನ್ಮ ನೀಡಿರುವ ಘಟನೆ ರಾಮನಗರ ಜಿಲ್ಲೆಯ ಕನಕಪುರದಲ್ಲಿ ನಡೆದಿದೆ.
ಏಳು ತಿಂಗಳ ಗರ್ಭಿಣಿ ರಜಿಯಾ ಬಾನು ಎಂಬುವರು ನಿಯಮಿತ ತಪಾಸಣೆಗಾಗಿ ಹುಣಸನಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ (ಪಿಎಚ್ಸಿ) ಹೋಗುತ್ತಿದ್ದರು. ಅಲ್ಲಿನ ಪರೀಕ್ಷೆಯ ನಂತರ ಕನಕಪುರ ಜಿಲ್ಲಾಸ್ಪತ್ರೆಗೆ ಹೋಗುವಂತೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಬಾನು ಕನಕಪುರಕ್ಕೆ ಹೋಗಲು ಕೆಎಸ್ಆರ್ಟಿಸಿ ಬಸ್ ಹತ್ತಿದರು. ಬಸ್ಸು ಕಬ್ಬಾಳು ಸಮೀಪ ಬಂದಾಗ ಹೆರಿಗೆ ನೋವು ಕಾಣಿಸಿಕೊಂಡಿದೆ. ತಕ್ಷಣವೇ, ಇತರ ಪ್ರಯಾಣಿಕರು ಬಾನು ಅವರಿಗೆ ಸಹಾಯ ಮಾಡಿದ್ದು, ಅವರು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ.
ಒಂದು ಗಂಡು ಮತ್ತು ಒಂದು ಹೆಣ್ಣು ಮಗು ಜನಿಸಿದ್ದು, ಬಸ್ ಅನ್ನು ನೇರವಾಗಿ ಕನಕಪುರ ಜಿಲ್ಲಾಸ್ಪತ್ರೆಗೆ ಚಲಾಯಿಸಿದ ಚಾಲಕ ಮಾನವೀಯತೆ ಮೆರೆದಿದ್ದಾನೆ. ತಕ್ಷಣವೇ ಬಾನು ಮತ್ತು ಶಿಶುಗಳನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ, ಅವಧಿಗೂ ಮುನ್ನವೇ ಹೆರಿಗೆ ಆಗಿದ್ದರಿಂದ ಮಕ್ಕಳ ತೂಕ ಕಡಿಮೆ ಇದ್ದು, ಬೆಂಗಳೂರಿನ ವಾಣಿ ವಿಲಾಸ ಆಸ್ಪತ್ರೆಗೆ ಸ್ಥಳಾಂತರಿಸುವAತೆ ಕನಕಪುರ ಜಿಲ್ಲಾಸ್ಪತ್ರೆ ವೈದ್ಯರು ಸೂಚಿಸಿದ್ದಾರೆ.
ಬಾನು ದುರ್ಬಲರಾಗಿದ್ದರಿಂದ ಅವಧಿಪೂರ್ವ ಹೆರಿಗೆ ಆಗಿರಬಹುದು ಎಂದು ಕನಕಪುರ ಜಿಲ್ಲಾ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಹೀಗಾಗಿ, ಬಾನು ಅವರನ್ನು ವಾಣಿವಿಲಾಸ ಆಸ್ಪತ್ರೆಗೆ ಶಿಫ್ಟ್ ಮಾಡಿ ಚಿಕಿತ್ಸೆ ನೀಡಿದರೂ ಒಂದು ಮಗು ಮೃತಪಟ್ಟಿದೆ. ಇನ್ನೊಂದು ಮಗುವಿಗೆ ಚಿಕಿತ್ಸೆ ಮುಂದುವರಿದಿದ್ದು, ಆರೋಗ್ಯವಾಗಿದೆ. ಬಾನು ಕೂಡ ಆರೋಗ್ಯವಾಗಿದ್ದಾರೆ ಎಂದು ವಾಣಿ ವಿಲಾಸ್ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

