ನ್ಯಾಮತಿ: ನ್ಯಾಮತಿ ಎಸ್ ಬಿಐ ಬ್ಯಾಂಕ್ ಗೆ ಕನ್ನ ಹಾಕಿರುವ ಕಳ್ಳರು ಸುಮಾರು 13 ಕೋಟಿಗೂ ಹೆಚ್ಚು ಬೆಲೆಬಾಳುವ ಚಿನ್ನಾಭರಣಗಳನ್ನು ದೋಚಿದ್ದಾರೆ ಎಂದು ಹೇಳಲಾಗಿದೆ.
ದಾವಣಗೆರೆ ಜಿಲ್ಲೆಯ ನ್ಯಾಮತಿ ಪಟ್ಟಣದಲ್ಲಿರುವ ಎಸ್ ಬಿ ಐ ಬ್ಯಾಂಕ್ ಗೆ ನುಗ್ಗಿರುವ ಕಳ್ಳರು ಲಾಕರ್ ಗಳನ್ನು ಗ್ಯಾಸ್ ಕಟರ್ ಬಳಸಿ ಕಳವು ಮಾಡಿದ್ದಾರೆ. ಲಾಕರ್ ನಲ್ಲಿದ್ದ ಗ್ರಾಹಕರ ಕೋಟ್ಯಂತರ ರುಪಾಯಿ ಚಿನ್ನಾಭರಣಗಳನ್ನು ಕದ್ದು ಪರಾರಿಯಾಗಿದ್ದಾರೆ.
ಭಾನುವಾರ ರಾತ್ರಿ ಘಟನೆ ನಡೆದಿದ್ದು, ಬ್ಯಾಂಕ್ ಸಿಬ್ಬಂದಿಯ ದೂರಿನ ಮೇರೆಗೆ ಪೊಲೀಸರು, ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಸುಮಾರು 509 ಬ್ಯಾಗ್ ಗಳಲ್ಲಿ ಇಟ್ಟಿದ್ದ 13 ಕೋಟಿ ರು. ಗೂ ಅಧಿಕ ಬೆಲಬಾಳುವ ಚಿನ್ನ ಕಳುವಾಗಿರುವ ಮಾಹಿತಿ ಲಭ್ಯವಾಗಿದೆ.
ಇದು ಜಿಲ್ಲೆಯಲ್ಲಿ ನಡೆದ ಅತಿದೊಡ್ಡ ಕಳ್ಳತನವಾಗಿದ್ದು, ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಸೋಮವಾರವಿಡೀ ಕಳ್ಳತನವಾಗಿರುವ ವಸ್ತುಗಳ ವಿವರ ಸಂಗ್ರಹ, ಬೆರಳಚ್ಚು ತಜ್ಞರಿಂದ ಪರಿಶೀಲನೆ ನಡೆಸಿ, ಮಾಹಿತಿ ಸಂಗ್ರಹಿಸಿದ್ದಾರೆ. ನ್ಯಾಮತಿ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಂಡು, ತನಿಖೆ ಕೈಗೊಂಡಿದ್ದಾರೆ.
ದಾವಣಗೆರೆ ಜಿಲ್ಲೆಯಲ್ಲಿ ನಡೆದ ಅತ್ಯಂತ ದೊಡ್ಡ ಕಳ್ಳತನ ಇದಾಗಿದೆ. ಈ ಹಿಂದೆ ಹೊನ್ನಾಳಿ ಪಟ್ಟಣದ ಕರ್ನಾಟಕ ಬ್ಯಾಂಕ್ ನಲ್ಲಿ ಸುಮಾರು 10 ಕೋಟಿ ರು.ಗಳ ಚಿನ್ನಾಭರಣಗಳನ್ನು ಕಳ್ಳರು ಕದ್ದು ಪರಾರಿಯಾಗಿದ್ದರು. ಇದೀಗ 13 ಕೋಟಿಗೂ ಅಧಿಕ ಮೊತ್ತದ ಚಿನ್ನಾಭರಣ ಕಳುವಾಗಿದೆ ಎಂದು ಅಂದಾಜಿಸಲಾಗಿದೆ.

