ರಾಜಕೀಯ ಸುದ್ದಿ

ಬೆಳಗಾವಿ ಅಧಿವೇಶನ 100 ವರ್ಷ, ಜಂಟಿ ಅಧಿವೇಶನಕ್ಕೆ ಒಬಾಮಾಗೆ ಆಹ್ವಾನ

Share It

ಬೆಳಗಾವಿ : ಬೆಳಗಾವಿಯಲ್ಲಿ 1924 ರಲ್ಲಿ ಮಹಾತ್ಮ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ ನಡೆದ ಎಐಸಿಸಿ ಅಧಿವೇಶನದ ಶತಮಾನೋತ್ಸವ ಆಚರಣೆಗೆ ರಾಜ್ಯ ಸರ್ಕಾರ ಯೋಜನೆ ರೂಪಿಸಿದೆ.

ಈ ಸಮಾರಂಭಕ್ಕೆ ಮಾಜಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರನ್ನು ಆಹ್ವಾನಿಸಲಾಗಿದೆ. ಗಾಂಧೀಜಿ ಅವರ ತತ್ವಗಳನ್ನು ಯುವಜನರಿಗೆ ಪರಿಚಯಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶ. ಬೆಳಗಾವಿಯಲ್ಲಿ ಮಹಾತ್ಮಾ ಗಾಂಧೀಜಿ ಅವರ ಅಧಕ್ಷತೆಯಲ್ಲಿ ‌ನಡೆದ ಎಐಸಿಸಿ ಸಭೆಗೆ 100 ವರ್ಷ ಆಗಿರುವ ಹಿನ್ನೆಲೆಯಲ್ಲಿ ವಿಶೇಷ ಜಂಟಿ ಅಧಿವೇಶನ ನಡೆಸಲು ನಿರ್ಧರಿಸಲಾಗಿದೆ. ಜಂಟಿ ಅಧಿವೇಶನ ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯಲಿದೆ.

ಜಂಟಿ ಅಧಿವೇಶನಕ್ಕೆ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್​ ಒಬಾಮ ಅವರಿಗೆ ಆಹ್ವಾನಿಸಲಾಗಿದೆ. ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬರಾಕ್ ಒಬಾಮಾ ಅವರಿಗೆ ಪತ್ರ ಬರೆದು ಆಮಂತ್ರಣ ನೀಡಿದ್ದಾರೆ ಎಂದು ಕಾನೂನು ಸಚಿವ ಹಾಗೂ ಶತಮಾನೋತ್ಸವ ಸಮಿತಿ ಅಧ್ಯಕ್ಷ ಹೆಚ್‌.ಕೆ. ಪಾಟೀಲ ಅವರು ಗದಗದಲ್ಲಿ ತಿಳಿಸಿದರು.

ಗದಗನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನನ್ನನ್ನು (ಹೆಚ್​ಕೆ ಪಾಟೀಲ್​) ಶತಮಾನೋತ್ಸವ ಸಮಿತಿ ಅಧ್ಯಕ್ಷನನ್ನಾಗಿ ಮಾಡಿದ್ದಾರೆ. ಈ ಸಮಿತಿ ಮಂಗಳವಾರ (ನ.5) ರಂದು ಬೆಳಗಾವಿಗೆ ಭೇಟಿ ನೀಡಲಿದೆ. 2025ರ ಅಕ್ಟೋಬರ್ 2 ರವರೆಗೆ ಶತಮಾನೋತ್ಸವ ಮಾಡಲಾಗುತ್ತದೆ ಎಂದು ಹೇಳಿದರು.

ಬರಾಕ್ ಒಬಾಮಾ ಅವರು ನೀಡುವ ತಾರೀಖು ನೋಡಿಕೊಂಡು ಜಂಟಿ ಅಧಿವೇಶನ ದಿನಾಂಕ ನಿರ್ಣಯ ಮಾಡುತ್ತೇವೆ. ಮಹಾತ್ಮ ಗಾಂಧಿಜಿ ಅವರು ಕೇವಲ ಭಾರತದ ನಾಯಕನಲ್ಲ. ಮಹಾತ್ಮ ಗಾಂಧಿಜಿ ಅವರು ಜಗತ್ತಿನ ನಾಯಕ ಅಂತ ಸಾರುವ ಗಾಂಧಿ ಅನುಯಾಯಿ, ಅಭಿಮಾನಿಗೆ ಆಹ್ವಾನ ನೀಡಿದ್ದೇವೆ. ಇದೊಂದು ಉತ್ತಮವಾದ ಕಾರ್ಯಕ್ರಮ ಆಗಲಿದೆ ಎಂದು ಹೇಳಿದರು.

ಗಾಂಧೀಜಿ ಅವರು ಕರ್ನಾಟಕದ 120 ಸ್ಥಳಗಳಿಗೆ ಭೇಟಿ ನೀಡಿದ್ದಾರೆ. ಗಾಂಧೀಜಿ ಅವರು ಭೇಟಿ ನೀಡಿದ ರಾಜ್ಯದ 40 ಸ್ಥಳಗಳಲ್ಲಿ ಸ್ಮಾರಕ ನಿರ್ಮಾಣ ಮಾಡುತ್ತೇವೆ. ಬೇರೆ ಬೇರೆ ಜಿಲ್ಲೆಗಳು ರಥಯಾತ್ರೆಯ ಜ್ಯೋತಿಗಳು ಡಿಸೆಂಬರ್ 26 ಮತ್ತು 27ಕ್ಕೆ ಬೆಳಗಾವಿಗೆ ತಲುಪಲಿವೆ. ಯುವ, ಮಹಿಳಾ, ಸಾಮರಸ್ಯ ಸಮಾವೇಶ ಹಮ್ಮಿಕೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.

ಮಹಾತ್ಮ ಗಾಂಧಿಜಿ ಅವರು ಸ್ವಾತಂತ್ರ್ಯ ಪೂರ್ವದಲ್ಲಿ ಬೆಳಗಾವಿಯಲ್ಲಿ ನಡೆದ 39ನೇ ಎಐಸಿಸಿ ಸಭೆಯ ಅಧ್ಯಕ್ಷತೆ ವಹಿಸಿಕೊಂಡಿದ್ದರು. ಈ ಸಭೆಯ ಮುಖಾಂತರ ಮಹಾತ್ಮ ಗಾಂಧಿಜಿಯವರು ಸರ್ವರೂ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಳ್ಳಬೇಕು ಅಂತ ಕರೆ ಕೊಟ್ಟರು. ಗಾಂಧಿಜಿ ಅವರ ಕರೆಯಿಂದ ಅನೇಕರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡರು.

ಗಾಂಧೀಜಿ ಅಧ್ಯಕ್ಷತೆ ವಹಿಸಿದ ಸಭೆಯ ಶತಮಾನೋತ್ಸವ ಮಾಡಲು ಸರ್ಕಾರ ನಿರ್ಧಾರ ಮಾಡಿದೆ. ಕರ್ನಾಟಕದಲ್ಲಿ ಅದರಲ್ಲೂ ಬೆಳಗಾವಿಯಲ್ಲಿ ನಡೆದ ಸಭೆ ಬಹಳ ಮಹತ್ವದ್ದಾಗಿದೆ. ಗದಗ ಜಿಲ್ಲೆಯವರಿಗೆ ಇನ್ನೂ ಬಹಳ ಮಹತ್ವದ್ದಾಗಿದೆ.

ಹುಯಿಲಗೋಳ ನಾರಾಯಣರಾಯರು ಬರೆದ “ಉದಯವಾಗಲಿ ಚೆಲುವ ಕನ್ನಡನಾಡು” ಗೀತೆ ಮೊಟ್ಟಮೊದಲ ಬಾರಿಗೆ ಈ ಸಭೆಯಲ್ಲಿ ಹಾಡಲಾಗಿತ್ತು. ಈ ಹಾಡನ್ನು ಗಂಗೂಬಾಯಿ ಹಾನಗಲ್ ಹಾಡಿದ್ದರು. ಗಾಂಧೀಜಿ ತತ್ವ, ಸಿದ್ಧಾಂತಗಳು ಯುವಕರ ಮನಕ್ಕೆ ತಲಪುವ ದೊಡ್ಡ ಪ್ರಯತ್ನ ಮಾಡಬೇಕಾಗಿದೆ ಎಂದರು.


Share It

You cannot copy content of this page