ಬೆಂಗಳೂರು: ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣಕ್ಕೆ ಪಾಕಿಸ್ತಾನದ ನಂಟಿದೆ ಎಂದು ಎನ್ಐಎ ಚಾರ್ಜ್ಶೀಟ್ನಲ್ಲಿ ಸ್ಫೋಟಕ ಮಾಹಿತಿ ಉಲ್ಲೇಖವಾಗಿರುವುದು ತಿಳಿದುಬಂದಿದೆ.
ತನಿಖೆ ಮಾಡಿದ ರಾಷ್ಟ್ರೀಯ ತನಿಖಾ ದಳ (ಎನ್ಐಎ) ಈಗಾಗಲೇ ಕೋರ್ಟ್ಗೆ ಚಾರ್ಜ್ಶೀಟ್ ಸಲ್ಲಿಕೆ ಮಾಡಿದೆ. ಎನ್ಐಎ ಚಾರ್ಜ್ಶೀಟ್ನಲ್ಲಿ ಸ್ಫೋಟಕ ಮಾಹಿತಿ ಉಲ್ಲೇಖವಾಗಿರುವುದು ಈಗ ತಿಳಿದುಬಂದಿದೆ.
ಪಾಕ್ ಮೂಲದ ಶಂಕಿತ ಉಗ್ರ ಎ6 ಫೈಸಲ್ ಸದ್ಯ ಪಾಕಿಸ್ತಾನದಲ್ಲಿದ್ದಾನೆ ಎನ್ನಲಾಗಿದೆ. ಮಂಗಳೂರು ಕುಕ್ಕರ್ ಸ್ಫೋಟದ ಬಳಿಕ ತಾಹಾ ಮತ್ತು ಶಾಜಿಬ್ ನಾಪತ್ತೆಯಾಗಿದ್ದರು. ಕೆಲಕಾಲದ ಬಳಿಕ ಮತ್ತೆ ವಾಪಾಸ್ ಬೆಂಗಳೂರಿಗೆ ಬಂದಿದ್ದರು. ಆಗ ಮುಜಾಮಿಲ್ ಷರೀಫ್ ಜೊತೆಗೆ ಪರಿಚಯವಾಗಿತ್ತು.
ಮುಜಾಮಿಲ್ ಮೆಜೆಸ್ಟಿಕ್ ಬಳಿಯ ಹೋಟೆಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದ. ಇದೇ ಮುಜಾಮಿಲ್ ಷರೀಫ್ನ ತಾಹಾ ಮತ್ತು ಶಾಜಿಬ್ ಮನಪರಿವರ್ತಿಸಿ ಐಸಿಸ್ಗೆ ಸೇರ್ಪಡೆ ಮಾಡಿದ್ದರು. ಮೊದಲ ಹಂತದಲ್ಲಿ ಕೆಲವು ದುಷ್ಕೃತ್ಯ ನಡೆಸಲು ಮುಜಾಮಿಲ್ಗೆ ತಾಹಾ ಮತ್ತು ಶಾಜಿಬ್ ಟಾಸ್ಕ್ ನೀಡಿದ್ದರು ಎನ್ನಲಾಗಿದೆ.
ಉಗ್ರರು 2023 ಡಿಸೆಂಬರ್ನಲ್ಲಿ ಬೆಂಗಳೂರಲ್ಲಿ ಬಾಂಬ್ ಸ್ಫೋಟ ನಡೆಸಲು ಸಂಚು ಹೂಡಿದ್ದರು. ಆನ್ಲೈನ್ ಹ್ಯಾಂಡ್ಲರ್ ಮೂಲಕ ಈ ಸೂಚನೆ ಬಂದಿತ್ತು. ಜನವರಿ 22, 2024ರಂದು ಆಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಇದೆ. ಅಂದೇ ಸ್ಫೋಟ ನಡೆಸಿ ಎಂಬ ಸೂಚನೆ ಇತ್ತು.
ಈ ಹಿನ್ನೆಲೆಯಲ್ಲಿ ಮಲ್ಲೇಶ್ವರಂ ಬಿಜೆಪಿ ಕಚೇರಿ ಟಾರ್ಗೆಟ್ ಮಾಡಿದ್ದ ಶಾಜಿಬ್, ಹೀಗಾಗಿ ಬೆಂಗಳೂರಿನಿಂದ ಚೆನ್ನೈಗೆ ಶಿಫ್ಟ್ ಆಗಿದ್ದ. ಟ್ರಿಪ್ಲಿಕೇನ್ ಎಂಬಲ್ಲಿ ಬಾಡಿಗೆ ಮನೆಯಲ್ಲಿದ್ದುಕೊಂಡೆ ಐಇಡಿ ಬಾಂಬ್ ತಯಾರಿಕೆ ಮಾಡಿದ್ದ.
2024 ಜನವರಿ 22ರಂದು ಬೆಳಗ್ಗೆ ಐಇಡಿ ಬಾಂಬ್ ನೊಂದಿಗೆ ಬೆಂಗಳೂರಿಗೆ ಬಂದಿದ್ದ ಶಾಜಿಬ್, ಬಿಜೆಪಿ ಕಚೇರಿ ಮುಂಭಾಗದಲ್ಲಿ ಬಾಂಬ್ ಇಡಲು ಸಂಚು ಹೂಡಿದ್ದ. ಹೆಚ್ಚಿನ ಭದ್ರತೆ ಹಿನ್ನೆಲೆ ಬಿಜೆಪಿ ಕಚೇರಿ ಹಿಂಭಾಗದಲ್ಲಿ ಬಾಂಬ್ ಇಟ್ಟಿದ್ದ. 90 ನಿಮಿಷಕ್ಕೆ ಟೈಮರ್ ಸೆಟ್ ಮಾಡಿದ್ದ. ಬಾಂಬ್ ಬ್ಲಾಸ್ಟ್ ಆಗಲಿಲ್ಲ. ಬಾಂಬ್ ಇಟ್ಟವನೇ ಚೆನ್ನೈಗೆ ಎಸ್ಕೇಪ್ ಆಗಿದ್ದ. ಬಾಂಬ್ ಸ್ಫೋಟವಾಗುವುದಿರಲಿ, ಕನಿಷ್ಠಪಕ್ಷ ಆ ಬಾಂಬ್ ಪತ್ತೆಯೂ ಆಗಲಿಲ್ಲ.
ಬೆಂಗಳೂರಿನ ಮಲ್ಲೇಶ್ವರ ಬಿಜೆಪಿ ಕಚೇರಿಯಲ್ಲಿ ಹಿಂಭಾಗ ಇಟ್ಟಿದ್ದ ಬಾಂಬ್ ಸ್ಫೋಟಗೊಳ್ಳದ ಹಿನ್ನೆಲೆ ಮತ್ತೆ ಜನನಿಬಿಡ ಪ್ರದೇಶದಲ್ಲಿ ಬಾಂಬ್ ಸ್ಫೋಟಕ್ಕೆ ಪ್ಲಾನ್ ಮಾಡಿದ್ದ. ಫೆಬ್ರವರಿ ತಿಂಗಳಲ್ಲಿ ಐಇಡಿ ಬಾಂಬ್ ತಯಾರಿಸಿ, ಫೆಬ್ರವರಿ 29ರಂದು ಶಾಜಿಬ್ ಚೆನ್ನೈನಿಂದ ಬೆಂಗಳೂರಿಗೆ ಬಂದು ಕೆಆರ್ ಪುರಂ ಟಿನ್ ಫ್ಯಾಕ್ಟರಿ ಬಳಿ ಇಳಿದು, ಕುಂದಲಹಳ್ಳಿಗೆ ಬಂದು ರಾಮೇಶ್ವರಂ ಕೆಫೆಯಲ್ಲಿ ಐಇಡಿ ಬಾಂಬ್ ಇಟ್ಟಿದ್ದರ ಬಗ್ಗೆ ಎನ್ ಚಾರ್ಜ್ ಶೀಟ್ನಲ್ಲಿ ಉಲ್ಲೇಖಿಸಲಾಗಿದೆ.

