ಬೆಂಗಳೂರು: ಆರೋಗ್ಯವಂತ ಸಮಾಜ ಅಭಿವೃದ್ಧಿ ಹೊಂದಿದ ದೇಶದ ಬಹುದೊಡ್ಡ ಆಸ್ತಿ, ಹೀಗಾಗಿ, ಸಮುದಾಯದ ಆರೋಗ್ಯಕ್ಕೆ ಸರಕಾರಗಳು ಹೆಚ್ಚಿನ ಮಹತ್ವ ಕೊಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್. ವೀರಯ್ಯ ಅಭಿಪ್ರಾಯಪಟ್ಟರು.
ರಾಜರಾಜೇಶ್ವರಿ ನಗರದ ಬಿಇಎಂಎಲ್ ಲೇಔಟ್ ನ ಪಂಚಶೀಲ ಫೌಂಡೇಶನ್ ವತಿಯಿಂದ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರ ಹಾಗೂ ಬ್ರೈಟ್ ಬ್ಲೂಮಿಂಗ್ ಚಾಂಪ್ಸ್ ಶಾಲೆಯ ಪ್ರತಿಭಾನ್ವೇಷಣಾ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಪ್ರತಿಯೊಬ್ಬ ವ್ಯಕ್ತಿಗೂ ಆರೋಗ್ಯ ಸಿಗುವಂತಾಗಬೇಕು. ಹಳ್ಳಿಗಾಡು ಮಾತ್ರವಲ್ಲ, ನಗರ ಪ್ರದೇಶದಲ್ಲಿಯೂ ಕೂಡ ಉತ್ತಮ ಆರೋಗ್ಯ ಸೇವೆ ಜನರಿಗೆ ಸಿಗುತ್ತಿಲ್ಲ. ಅಂತಹವರಿಗೆ ಉಚಿತ ಆರೋಗ್ಯ ಶಿಬಿರದಂತಹ ಕಾರ್ಯಕ್ರಮಗಳು ಸಹಕಾರಿ, ಅದನ್ನು ಸದುಪಯೋಗ ಮಾಡಿಕೊಂಡು, ಆರೋಗ್ಯವಂತರಾಗಿ ಎಂದು ಸಲಹೆ ನೀಡಿದರು.
ಒಂದು ಸಮಾಜ ಆರೋಗ್ಯವಾಗಿದ್ದರೆ, ಇಡೀ ದೇಶ ಸದೃಢವಾಗಿರುತ್ತದೆ. ದೇಶದ ಆರ್ಥಿಕತೆಗೆ ಉತ್ತಮ ದೈಹಿಕ ಆರೋಗ್ಯ ಹೊಂದಿರುವ ಮಾನವಶಕ್ತಿ ಪ್ರಮುಖ ಪಾತ್ರವಹಿಸುತ್ತದೆ. ಹೀಗಾಗಿ ಸರಕಾರಗಳು ಕೂಡ ಸಾರ್ವಜನಿಕ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಮತ್ತಷ್ಟು ಕಾರ್ಯಕ್ರಮ ರೂಪಿಸಬೇಕು ಎಂದರು.

ಸೇಫ್ ಫೌಂಡೇಶನ್ ಸಹಯೋಗದೊಂದಿಗೆ ಸಂಗಮನಾಥ್ ಹೆಲ್ತ್ ಸೆಂಟರ್ ನ ಡಾ. ಸಂಗಮನಾಥ್ ಮತ್ತು ತಂಡದಿಂದ ವೈದ್ಯಕೀಯ ತಪಾಸಣೆ ನಡೆಯಿತು. ಈ ಸಂದರ್ಭದಲ್ಲಿ ಪಂಚಶೀಲ ವೆಲ್ಫೇರ್ ಅಸೋಸಿಯೇಷನ್ ಕಾರ್ಯದರ್ಶಿ ಕೆ.ವಿ.ಸಂದೀಪ್, ಪಂಚಶೀಲ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲರಾದ ಸೊಂಬೇಗೌಡ, ಆಡಳಿತಾಧಿಕಾರಿ ಲಿಂಗಮೂರ್ತಿ, ಸೇಫ್ ಫೌಂಡೇಶನ್ ನ ರಾಜೇಶ್, ಗಿರೀಶ್ ಹಾಗೂ ಇತರರು ಭಾಗವಹಿಸಿದ್ದರು.

