ಬೆಂಗಳೂರು: ಬಿಜೆಪಿ ನಾಯಕರೇ ನಿಮಗೆ ಸ್ವಲ್ಪವೂ ಕೂಡ ಅಂಜಿಕೆ, ಅಳುಕು ಇಲ್ಲವೇ, ಮನುಷ್ಯರಾದವರಿಗೆ ಯಾವುದೇ ಒಂದು ಕ್ಷಣದಲ್ಲಾದರೂ ಯಾವುದಾದರೂ ಒಂದು ಸಂದರ್ಭದಲ್ಲಿಯಾದರೂ ತಮ್ಮ ತಪ್ಪಿನ ಅರಿವಾಗಬೇಕು. ಪಾಪ ಪ್ರಜ್ಞೆ ಕಾಡಬೇಕು ಎಂದು ಸಚಿವ ರಾಮಲಿಂಗಾ ರೆಡ್ಡಿ ಕುಟುಕಿದ್ದಾರೆ.
ಇದ್ಯಾವುದೂ ಇಲ್ಲದೆ ಹೀಗೆ ಸುಖಾಸುಮ್ಮನೆ ದಿನಂಪ್ರತಿ ಸುಳ್ಳುಗಳನ್ನೇ ನಿಜವೆಂದು ಬಿಂಬಿಸುವಂತೆ ಟ್ಟೀಟ್ ಮಾಡಿ ಏನನ್ನು ಬಿಂಬಿಸಲು ಹೊರಟ್ಟಿದ್ದೀರಾ? ತಮ್ಮ ಸರ್ಕಾರವು ಬಿಟ್ಟು ಹೋಗಿದ್ದ 5900 ಕೋಟಿ ರು. ನಷ್ಟದಿಂದ ಹೊಣೆಗಾರಿಕೆ ಬಾಕಿಗಳಾದ ಡೀಸೆಲ್ ಹಣ, ಸಿಬ್ಬಂದಿ ಭವಿಷ್ಯ ನಿಧಿ, ಖರೀದಿ ಸಾಮಾಗ್ರಿಗಳ ಹಣ ಸೇರಿ ಎಲ್ಲಾ ಬಾಕಿ ತೀರಿಸುವ ಹೊಣೆಗಾರಿಕೆ ಹೊತ್ತುಕೊಂಡು ನಾವು ಸಂಸ್ಥೆಗಳನ್ನು ಮುನ್ನಡೆಸ ಬೇಕಾಗಿದೆ ಎಂದಿದ್ದಾರೆ.
ಕೋವಿಡ್ ಸಮಯದಲ್ಲಿ ಬಸ್ಸುಗಳ ಕಾರ್ಯಾಚರಣೆ ಆಗದೆ ತಮ್ಮ ಸರ್ಕಾರ ಸಾರಿಗೆ ಸಿಬ್ಬಂದಿಗೆ ಸಂಬಳ ಮಾತ್ರ ನೀಡಿ, ಭವಿಷ್ಯ ನಿಧಿ, ಎಲ್ಐಸಿ, ಸೊಸೈಟಿ ಹಾಗೂ ಇತರೆ ಯಾವುದೇ ಕಡಿತಗಳ ಹಣವನ್ನು ಸಾರಿಗೆ ನಿಗಮಗಳಿಗೆ ಪಾವತಿ ಮಾಡಿರುವುದಿಲ್ಲ.
ನಮ್ಮ ಸರ್ಕಾರದ ಕೊನೆಯಲ್ಲಿ ಅಂದರೆ ಮೇ 2018ರ ಅಂತ್ಯಕ್ಕೆ ಸಾರಿಗೆ ನಿಗಮಗಳಲ್ಲಿ ಭವಿಷ್ಯ ನಿಧಿ ಮೊತ್ತ ಬಾಕಿ ಇದ್ದದ್ದು ರೂ ( ಕೋಟಿಗಳಲ್ಲಿ ) KSRTC – ₹೦.೦೦ BMTC – ₹೦.೦೦ NWKRTC – ₹13.71 KKRTC – ೦.೦೦ ಇತ್ತು ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
ಅದೇ 2023ರ ಮೇ ಅಂತ್ಯಕ್ಕೆ ತಮ್ಮ ಸರ್ಕಾರ ಸಾರಿಗೆ ನಿಗಮಗಳಲ್ಲಿ ಬಾಕಿ ಇಟ್ಟು ಹೋಗಿದ್ದ ಭವಿಷ್ಯ ನಿಧಿ ಮೊತ್ತ ರೂ ( ಕೋಟಿಗಳಲ್ಲಿ) KSRTC – ₹659.57 BMTC – ₹111.47 NWKRTC – ₹609.55 KKRTC – ₹0.00 (Total ₹1380.59 ಕೋಟಿ ಭವಿಷ್ಯ ನಿಧಿ ಮಾತ್ರ ಬಾಕಿ) ತಮ್ಮ ಕಾಲದಲ್ಲಿ ಸಾರಿಗೆ ಸಿಬ್ಬಂದಿಗೆ 2020 ಜನವರಿಯಲ್ಲಿ ಮಾಡಬೇಕಿದ್ದ ಸಂಬಳವನ್ನು ಏರಿಕೆ ಮಾಡದೆ, 15 ದಿನಗಳ ಕಾಲ ಯಶಸ್ವಿ ಸಾರಿಗೆ ಮುಷ್ಕರ ಮಾಡಿಸಿ, ರಾಜ್ಯದ ಜನ ಬಸ್ ಸಂಚಾರ ಇಲ್ಲದೆ ಕಷ್ಟಪಟ್ಟಿದ್ದು ತಮ್ಮ ಸಾಧನೆಯೇ? ಎಂದು ಪ್ರಶ್ನಿಸಿದ್ದಾರೆ.
2023 ಮಾರ್ಚ್ ನಲ್ಲಿ ಸಂಬಳ ಹೆಚ್ಚಳ ಮಾಡಿದ್ದೀರಾ ಅಂದರೆ ಬರೋಬರಿ 38 ತಿಂಗಳ ನಂತರ ಸಂಬಳ ಏರಿಕೆ ಮಾಡಿ, ಏರಿಕೆಯಾದ ಸಂಬಳದ 38 ತಿಂಗಳ ಅರಿಯರ್ಸ್ ಸಿಬ್ಬಂದಿಗೆ ನೀಡದೆ, ಅದಕ್ಕೆ ಬೇಕಾದ ಅನುದಾನವನ್ನು ನೀಡದೆ ಸಾರಿಗೆ ಸಿಬ್ಬಂದಿಗೆ ಮೋಸ ಮಾಡಿ ಹೋಗಿರುವ ನಿಮಗೆ ಯಾವ ನೈತಿಕತೆ ಇದೆ?
ನಾವು ಎಂದು ಸಾರಿಗೆ ಸಂಸ್ಥೆಗಳು ಲಾಭದಲ್ಲಿವೆ ಎಂದು ಹೇಳಿಲ್ಲ ಆದಾಯ ವೃದ್ದಿಯಾಗಿದೆ ಎಂದಷ್ಟೇ ಹೇಳಿರುವುದು. ಬಿಜೆಪಿ ಅವರಿಗೆ ಲಾಭ/ ನಷ್ಟ, ಆದಾಯ/ವೆಚ್ಚ ಇದ್ಯಾವುದರ ಬಗ್ಗೆ ಜ್ಞಾನವೇ ಇಲ್ಲದಿರುವಾಗ, ನಿಮಗೆ ನಾವು ಲೆಕ್ಕಪತ್ರ ಪಾಠ ಮಾಡಲು ಸಾಧ್ಯವೇ? ಎಂದು ಪ್ರಶ್ನೆ ಮಾಡಿದ್ದಾರೆ.

