ಕಾಲೇಜು ಯುವತಿಗೆ ಲೈಂಗಿಕ ಕಿರುಕುಳ : ಆತ್ಮಹತ್ಯೆಯಲ್ಲಿ ಅಂತ್ಯವಾದ ವಿದ್ಯಾರ್ಥಿನಿ ಬದುಕು
ವಿಜಯಪುರ: ಏನಾದರೂ ಸಾಧಿಸಬೇಕೆಂಬ ಕನಸು ಕಟ್ಟಿಕೊಂಡು ಕಾಲೇಜಿಗೆ ಬಂದಿದ್ದ ವಿದ್ಯಾರ್ಥಿನಿಯೊಬ್ಬಳ ಕನಸು, ಪುಂಡರ ಐಲಾಟಕ್ಕೆ ಬಲಿಯಾಗಿದೆ. ಕಾಲೇಜು ವಿದ್ಯಾರ್ಥಿನಿಯೊಬ್ಬಳು ತನಗಾದ ಲೈಂಗಿಕ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮುದ್ದೆಬಿಹಾಳದಲ್ಲಿ ಕಾಲೇಜಿಗೆ ಹೋಗುವಾಗ ಮತ್ತು ಬರುವಾಗ ಸಂಗಮೇಶ್ ಜುಂಜುವಾರ್ ಎಂಬಾತ ಆತನ ಸ್ನೇಹಿತರ ಜತೆಗೂಡಿ ಯುವತಿಯನ್ನು ಹಿಡಿದು ಎಳೆದಾಡಿ, ಆಕೆಯೊಂದಿಗೆ ಅಸಭ್ಯವಾಗಿ ವರ್ತಿಸಿ, ಮದುವೆಯಾಗುವಂತೆ ಪೋಡಿಸುತ್ತಿದ್ದ. ಇದನ್ನು ಆಕೆ ತನ್ನ ಸಹೋದರನಿಗೆ ಹೇಳಿ ಆತನಿಗೆ ವಾರ್ನಿಂಗ್ ಕೊಡಿಸಿದ್ದಳು.
ಇದರಿಂದ ರೊಚ್ಚಿಗೆದ್ದ ಯುವಕ ಆಕೆಯನ್ನು ಕೊಲೆ ಮಾಡುವುದಾಗಿ ಬೆದರಿಸಿದ್ದ. ಇದರಿಂದ ಹೆದರಿಕೊಂಡಿದ್ದ ಯುವತಿ ತನ್ನ ಮನೆಯಲ್ಲಿಯೇ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಮುದ್ದೆ ಬಿಹಾಳ ಪೊಲೀಸರು ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಗಮೇಶ ಜುಂಜುವಾರ, ಮೌನೇಶ್ ಮಾದಾರ, ಚಿದಾನಂದ ಕಟ್ಟೀಮನಿ ಹಾಗೂ ಇತರರನ್ನು ಪೊಲೀಸರು ಪೋಸ್ಕೋಜನ ಪ್ರಕರಣದಡಿ ಬಂಧಿಸಿದ್ದಾರೆ. ಆರೋಪಿಗಳ ಮೇಲೆ ಈ ಹಿಂದೆಯೇ ಮತ್ತಷ್ಟು ಪ್ರಕರಣಗಳು ದಾಖಲಾಗಿರುವುದು ಬೆಳಕಿಗೆ ಬಂದಿದೆ.
ಪ್ರಮುಖ ಆರೋಪಿ ಸಂಗಮೇಶ್, ಈ ಹಿಂದೆ SSLC ಓದುತ್ತಿದ್ದ ಯುವತಿಗೆ ಬಲವಂತವಾಗಿ ತಾಳಿ ಕಟ್ಟಲು ಪ್ರಯತ್ನ ನಡೆಸಿದ್ದ ಆರೋಪದಡಿ ಪೋಕ್ಸೋ ಕೇಸ್ ದಾಖಲಾಗಿತ್ತು. ಆತ ಪ್ರಕರಣದಲ್ಲಿ ಜೈಲು ಸೇರಿಬಂದಿದ್ದ. ಇದೀಗ ಮತ್ತೊಂದು ಇಂತಹದ್ದೇ ಅಪರಾಧ ಎಸಗಿ ಯುವತಿಯೊಬ್ಬಳ ಸಾವಿಗೆ ಕಾರಣವಾಗಿದ್ದಾನೆ.


