ಬಿಜೆಪಿ 40 ಪರ್ಸೆಂಟ್ ಭ್ರಷ್ಟಾಚಾರದ ಮೂಲಕ ರಾಜ್ಯಕ್ಕೆ ಕುಖ್ಯಾತಿ ತಂದಿತ್ತು : ಸೌಮ್ಯಾ ರೆಡ್ಡಿ ಗುಡುಗು
ಹಾಸನ: ಬಿಜೆಪಿ ಆಡಳಿತದ ವೇಳೆ 40% ಸರ್ಕಾರ ಎಂಬ ಕುಖ್ಯಾತಿ ಪಡೆಯಿತು. ಇದು ರಾಜ್ಯವನ್ನು ಇಡೀ ದೇಶದಲ್ಲಿಯೇ ತಲೆತಗ್ಗಿಸುವಂತೆ ಮಾಡಿದ್ದು ಸುಳ್ಳಲ್ಲ ಎಂದು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಸೌಮ್ಯಾ ರೆಡ್ಡಿ ಗುಡುಗಿದ್ದಾರೆ.
ಹಾಸನದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಸ್ವಾಭಿಮಾನಿ ಸಮಾವೇಶದಲ್ಲಿ ಮಾತನಾಡಿದ ಅವರು, ಗುತ್ತಿಗೆದಾರರಿಂದ ಶೇ. 40 ಪರ್ಸೆಂಟ್ ಕಮೀಷನ್ ಪಡೆದು ಆಡಳಿತ ನಡೆಸಿದ್ದನ್ನು ಇಡೀ ದೇಶವೇ ಕಂಡಿದೆ. ಗುತ್ತಿಗೆದಾರರ ಆರೋಪಕ್ಕೆ ಉತ್ತರ ಕೊಡಲು ಸಾಧ್ಯವಾಗದೇ, ಬಿಜೆಪಿ ನಾಯಕರು ತಲೆ ತಗ್ಗಿಸಿದ್ದನ್ನು ರಾಜ್ಯ ಮರೆತಿಲ್ಲ ಎಂದರು.
ನ್ಯಾ.ಕುನ್ಹಾ ಅವರ ವರದಿಯಲ್ಲಿಯ ಅಂಶಗಳು, ಬಿಜೆಪಿ ಸರ್ಕಾರ ಕರೋನಾ ವೇಳೆ ಎಷ್ಟರ ಮಟ್ಟಿಗೆ ಭ್ರಷ್ಟಾಚಾರ ಮಾಡಿದೆ ಎಂಬುದು ಸ್ಪಷ್ಟವಾಗುತ್ತದೆ. ಸತ್ತವರ ಹೆಣದ ಮೇಲೂ ಹಣ ದೋಚಿದ ಬಿಜೆಪಿ ನಾಯಕರನ್ನು ಕರ್ನಾಟಕದ ಮತದಾರ ಎಂದು ಕ್ಷಮಿಸಲಾರ. ಅದಕ್ಕೆ ಹಿಂದಿನ ವಿಧಾನಸಭಾ ಚುನಾವಣೆ ಹಾಗೂ ಉಪಚುನಾವಣೆಯಲ್ಲಿ ಉತ್ತರ ಕೊಟ್ಟಿದ್ದಾರೆ ಎಂದರು.
ಬಿಜೆಪಿಯವರಿಗೆ ಜನರ ಪರವಾಗಿ ಕೆಲಸ ಮಾಡುವ ಅವಕಾಶ ಸಿಕ್ಕಿದ್ದರೂ ಜನರಿಗೆ ಸಹಾಯ ಮಾಡಲಿಲ್ಲ. ಆಡಳಿತದ ಅವಧಿಯಲ್ಲಿ ಭ್ರಷ್ಟಾಚಾರ ಕಿತ್ತಾಟದಲ್ಲಿ ಮೈಮರೆತರು. ಈಗ ಅಧಿಕಾರದಿಂದ ದೂರವಾಗಿದ್ದು, ಕಾಂಗ್ರೆಸ್ ಜನಪರ ಆಡಳಿತದ ವಿರುದ್ಧ ಪಿತೂರಿ ನಡೆಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಕಾಂಗ್ರೆಸ್ ನಾಯಕರ ಮೇಲೆ ಸುಳ್ಳು ಆರೋಪ ಮಾಡುವುದು, ಇಡಿ, ಸಿಬಿಐ ಬಳಸಿಕೊಂಡು ತೊಂದರೆ ಕೊಡುವುದು, ಸರಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ನಡೆಸುವುದು ಬಿಜೆಪಿ ನಾಯಕರಿಗೆ ಮಾಮೂಲಿಯಾಗಿದೆ. ಆದರೆ, ನಮ್ಮ ಪಕ್ಷ ಅವರ ಇಂತಹ ಷಡ್ಯಂತ್ರಕ್ಕೆಲ್ಲ ಬಗ್ಗುವುದಿಲ್ಲ ಎಂದರು.


