ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ದರ್ಶನ್ ಅವರಿಗೆ ಡಿಸೆಂಬರ್ 11ರಂದು ಶಸ್ತ್ರಚಿಕಿತ್ಸೆ ಮಾಡಲಾಗುವುದು ಎಂದು ಹೈಕೋರ್ಟ್ಗೆ ವರದಿ ಸಲ್ಲಿಕೆ ಮಾಡಲಾಗಿದೆ.
ಈಗಾಗಲೇ ದರ್ಶನ್ಗೆ ನೀಡಲಾಗುತ್ತಿರುವ ಚಿಕಿತ್ಸೆಯ ವಿವರಗಳನ್ನು ಕೂಡ ಕೋರ್ಟ್ಗೆ ನೀಡಲಾಗಿದೆ. ದರ್ಶನ್ ಪರ ವಕೀಲರು 5 ಸರ್ಟಿಫಿಕೆಟ್ಗಳನ್ನ ಹೈಕೋರ್ಟ್ಗೆ ಸಲ್ಲಿಸಿದ್ದಾರೆ. ಡಿ. 2ರ ವೈದ್ಯರ ವರದಿಯಲ್ಲಿ ಸರ್ಜರಿ ವಿವರ ಉಲ್ಲೇಖ ಮಾಡಲಾಗಿದೆ. ಲುಂಬರ್ ಡಿಕಂಪ್ರೆಷನ್ ಅಂಡ್ ಫ್ಯೂಷನ್ ಎಂಬ ಸರ್ಜರಿ ಮಾಡಲಾಗುವುದು ಎಂದು ತಿಳಿಸಲಾಗಿದೆ.
ಲುಂಬರ್ ಡಿಕಂಪ್ರೆಷನ್ ಅಂಡ್ ಫ್ಯೂಷನ್ ಸರ್ಜರಿಯಿಂದ ಬೆನ್ನುಹುರಿ ಚಟುವಟಿಕೆ ಸಹಜಗೊಳಿಸಬಹುದು. ಇದರಿಂದ ದರ್ಶನ್ ಬೆನ್ನುಹುರಿ ನೋವು ಕಡಿಮೆ ಮಾಡಬಹುದು. ಜೀವನದ ಗುಣಮಟ್ಟ ಹೆಚ್ಚಿಸಬಹುದೆಂದು ವೈದ್ಯರು ಹೇಳಿದ್ದಾರೆ. ಈ ಸರ್ಜರಿ ಬಗ್ಗೆ ಈಗಾಗಲೇ ದರ್ಶನ್ ಹಾಗೂ ಪತ್ನಿ ವಿಜಯಲಕ್ಷ್ಮಿಗೆ ಮನವರಿಕೆ ಮಾಡಲಾಗಿದೆ.
ದರ್ಶನ್ ಅವರಿಗೆ ಜನರಲ್ ಅನಸ್ತೇಶಿಯಾ ಕೊಟ್ಟು ಸರ್ಜರಿ ಮಾಡಲಾಗುವುದು. ಈ ಬಗ್ಗೆ ನ್ಯೂರೋ ಸರ್ಜನ್ ವಿಭಾಗದ ಮುಖ್ಯಸ್ಥ ನವೀನ್ ಅವರಿಂದ ವರದಿ ನೀಡಲಾಗಿದೆ. ಮುಖ್ಯ ಆಡಳಿತಾಧಿಕಾರಿ ಸ್ಮಿತಾ ತಮ್ಮಯ್ಯ ಅವರು ಕೋರ್ಟ್ಗೆ ವರದಿ ಸಲ್ಲಿಸಿದ್ದಾರೆ. ಸದ್ಯಕ್ಕೆ ದರ್ಶನ್ ಅವರ ಮಧ್ಯಂತರ ಜಾಮೀನು ಅವಧಿ ವಿಸ್ತರಣೆ ಆಗಿದೆ. ಚಿಕಿತ್ಸೆಗೆ ಅನುಕೂಲ ಆಗಲಿ ಎಂಬ ದೃಷ್ಟಿಯಿಂದ ಈ ಆದೇಶ ನೀಡಲಾಗಿದೆ.
ಹಲವು ವರ್ಷಗಳಿಂದ ದರ್ಶನ್ ಅವರಿಗೆ ಬೆನ್ನುನೋವಿನ ಸಮಸ್ಯೆ ಇದೆ. ‘ಕಾಟೇರ’ ಸಿನಿಮಾದ ಶೂಟಿಂಗ್ ಸಂದರ್ಭದಲ್ಲಿ ಕೂಡ ಅವರಿಗೆ ನೋವು ಕಾಣಿಸಿಕೊಂಡಿತ್ತು. ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ 2ನೇ ಆರೋಪಿಯಾಗಿ ದರ್ಶನ್ ಜೈಲು ಸೇರಿದ್ದು, ಬಳಿಕ ಪರಪ್ಪನ ಅಗ್ರಹಾರದಿಂದ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಯಿತು. ಆಗ ಅವರಿಗೆ ಬೆನ್ನುನೋವು ಹೆಚ್ಚಾಯಿತು.
ದರ್ಶನ್ ಅವರಿಗೆ ಬೆನ್ನುನೋವು ಹೆಚ್ಚಾದ ಕಾರಣ 6 ವಾರಗಳ ಕಾಲ ಮಧ್ಯಂತರ ಜಾಮೀನು ನೀಡಲಾಯಿತು. ಡಿಸೆಂಬರ್ 11ಕ್ಕೆ ಅವರ ಜಾಮೀನು ಅವಧಿ ಅಂತ್ಯ ಆಗುವುದರಲ್ಲಿತ್ತು. ಆದರೆ ಅವರ ಪರ ವಕೀಲರು ಜಾಮೀನು ಅವಧಿ ವಿಸ್ತರಿಸಲು ಮನವಿ ಮಾಡಿದ್ದರು. ಮುಂದಿನ ಆದೇಶದ ತನಕ ಜಾಮೀನು ಅವಧಿ ವಿಸ್ತರಣೆ ಮಾಡಲಾಗಿದೆ.